ಬೆಂಗಳೂರು : ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ …..!

ಬೆಂಗಳೂರು

     ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಕಾಂಗ್ರೆಸ್ ಕ್ಲೀನ್​​ಸ್ವೀಪ್ ಮಾಡಿತ್ತು. ಭರ್ಜರಿ ಗೆಲುವು ದೊರೆಯುತ್ತಿದ್ದಂತೆಯೇ ರಾಜ್ಯ ಸಂಪುಟ ಪುನರ್ ರಚನೆಯ ಸುದ್ದಿ ಮುನ್ನೆಲೆಗೆ ಬಂದಿತ್ತು. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಬವದಂತಿಗಳೂ ಹರಿದಾಡಿದ್ದವು.

   ಅದಕ್ಕೆ ಪುಷ್ಠಿ ನೀಡುವಂತೆ ರಾಜ್ಯ ನಾಯಕರು ಮಾತನಾಡಿದ್ದರು. ಅತ್ತ ಸಚಿವಕಾಂಕ್ಷಿಗಳು ಲಾಬಿ ಶುರು ಮಾಡಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದರು. ಇನ್ನೇನು ಸಂಪುಟ ಪುನರ್ ರಚನೆ ಆಗುತ್ತದೆ ಎಂದು ಆಸೆ ಕಂಗಳಿಂದ ಕಾಯುತ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ತಣ್ಣೀರು ಎರಚಿದೆ.ದೆಹಲಿಯಲ್ಲಿ ಗುರುವಾರ ಹೈಕಮಾಂಡ್ ಮಟ್ಟದ ನಾಯಕರು ಸಭೆ ನಡೆಸಿದರು. ಸಂಪುಟ ಪುನರ್ ರಚನೆಗೆ ಸದ್ಯದ ಪರಿಸ್ಥಿತಿ ಪಕ್ವವಾಗಿಲ್ಲ ಎಂಬ ಸಂದೇಶವನ್ನು ಈ ಸಭೆ ರವಾನಿಸಿದೆ.

   ಕರ್ನಾಟಕದಲ್ಲಿ ಸದ್ಯಕ್ಕೆ ಸಂಪುಟ ಪುನರ್ ರಚನೆ ಬೇಡ ಎಂದು ಹೈಕಮಾಂಡ್ ಹೇಳಿದೆ. ಉಳಿದಂತೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಹಸಿರು ನಿಶಾನೆ ತೋರಿದೆ. ಬಿ. ನಾಗೇಂದ್ರರಿಂದ ತೆರವಾದ ಸ್ಥಾನಕ್ಕೆ ಭರ್ತಿಗೆ ಸೂಚಿಸಲಾಗಿದೆ. ಕೆಲವು ಸಚಿವರು ತಮ್ಮ ಖಾತೆ ನಿಭಾಯಿಸಲು ವಿಫಲರಾಗಿದ್ದು, ಅಂತಹ ಸಚಿವರ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಿರುತ್ಸಾಹ ತೋರಿದೆ. ಈಗ ಸ್ಥಾನ ಬದಲಾಯಿಸಿದರೆ ತಪ್ಪು ಸಂದೇಶ ರವಾನೆ ಸಾಧ್ಯತೆ ಇದೆ ಎಂಬುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

 
   ದೆಹಲಿಯಲ್ಲಿಂದು ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷ ಸಂಘಟನೆ, ಮುಂಬರುವ ರಾಜ್ಯಗಳ ಚುನಾವಣೆ ಸೇರಿದಂತೆ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಯಾವ ವಿಷಯಗಳನ್ನು ಪ್ರಸ್ತಾಪಿಸಿ ಹೋರಾಟ ಮಾಡಬೇಕು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಪದೇ ಪದೇ ಪ್ರಸ್ತಾಪಿಸುತ್ತಿರುವ ಜಾತಿಗಣತಿಯ ವಿಚಾರವೂ ಕೂಡ ಕಾರ್ಯಕಾರಿಣಿಯಲ್ಲಿ ಚರ್ಚೆಗೆ ಬರಲಿದೆ.

Recent Articles

spot_img

Related Stories

Share via
Copy link