ತುಮಕೂರು :
ಕೋವಿಡ್ 2ನೇ ಅಲೆಯಲ್ಲಿ ಬಹುಬೇಡಿಕೆಯಾಗಿರುವ ಆಕ್ಸಿಜನ್ ಬೆಡ್ಗೆ ಪೂರಕವಾಗಿ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಯ ಕ್ವಾರಿ, ಕ್ರಷರ್, ರೈಸ್ ಮಿಲ್ ಮಾಲೀಕರು ಹಾಗೂ ಟಿಎಂಸಿಸಿ ಕೊಡುಗೆ ನೀಡಿದ್ದು, ಉದ್ಯಮಿಗಳ ಪರವಾಗಿ ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ ಸಹಕಾರಿ ಧುರೀಣ, ಉದ್ಯಮಿ ಎನ್.ಎಸ್.ಜಯಕುಮಾರ್ ಅವರು ನೇತೃತ್ವ ವಹಿಸಿಕೊಂಡು ತುಮಕೂರು ಮಚೆರ್ಂಟ್ ಕ್ರೆಡಿಟ್ ಕೋ-ಆಪರೇಟಿವ್, ಜಿಲ್ಲಾ ಜಲ್ಲಿ ಕ್ರಷರ್ ಆಸೋಸಿಯೇಷನ್, ಜಿಲ್ಲಾ ರೈಸ್ ಮಿಲ್ ಆಸೋಸಿಯೇಷನ್ ಹಾಗೂ ಮತ್ತಿತರ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳವರನ್ನು ಒಗ್ಗೂಡಿಸಿ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ನೆರವಿಗಾಗಿ ನೀಡಿದ್ದು, ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಾದಂತಾಗಿದೆ. ಪಿಎಚ್ಸಿ ಮಟ್ಟದಲ್ಲೂ ಆಕ್ಸಿಜನ್ ಬೆಡ್ಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ ಎಂದರು.
ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ಮಟ್ಟದ ಸಹಕಾರ ದಾನಿಗಳಿಂದ ಬರುತ್ತಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದ ಸಚಿವರು ಜಿಲ್ಲೆಯ ಪರವಾಗಿ, ಸರ್ಕಾರದ ಪರವಾಗಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.ದುಡಿದ ಹಣದಿಂದ ಸಾರ್ವಜನಿಕ ವಲಯಕ್ಕೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ತುರುವೇಕೆರೆ ತಾಲ್ಲೂಕಿನಲ್ಲಿ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯು 500 ಲೀಟರ್ ಸಾಮಥ್ರ್ಯದ ಆಕ್ಸಿಜನ್ ಉತ್ಪದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದೇ ರೀತಿ ಗುಬ್ಬಿಯಲ್ಲಿಯು ರೋಟರಿ ಸಂಸ್ಥೆ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕ ಲಭ್ಯವಾಗುತ್ತಿದೆ. ವಿಪ್ರೋದವರು ಒಂದು ಘಟಕ ನೀಡಲಿದ್ದಾರೆ. ಇದಲ್ಲದೆ ಜಪಾನಿನ ಟಿಮ್ಯಾಕ್ ಕಂಪೆನಿಯವರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 2 ಕೆ.ಎಲ್. ಸಾಮಥ್ರ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ಧಾರೆ. ನಿರೀಕ್ಷೆಗೂ ಮೀರಿ ದಾನಿಗಳಿಂದ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗುತ್ತಿದೆಎಂದು ತಿಳಿಸಿದರು.
ಜನರ ಆತಂಕ ದೂರ:
ಸಂಸದ ಜಿ. ಎಸ್. ಬಸವರಾಜು ಮಾತನಾಡಿ, ಕೋವಿಡ್ ನಿರ್ವಹಣೆ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ನೆರವಾಗಿ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರೆ ರೀತಿಯಲ್ಲಿ ಸಹಕಾರವಾದವರಿಗೆಲ್ಲರಿಗೂ ಅಭಿನಂದನೆಗಳು. ಟಿ.ಎಂ.ಸಿ.ಸಿ ಬ್ಯಾಂಕ್ ಹಾಗೂ ಕ್ವಾರಿ, ಕ್ರಷರ್ ಮಾಲೀಕರ ತಂಡ ಸುಮಾರು ಎರಡು ಕೋಟಿ ರೂ. ವೆಚ್ಚದ ಆಮ್ಲಜನಕ ಸಾಂದ್ರಕಗಳನ್ನು ನೆರವು ನೀಡಿದೆ. ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲು ಈ ಸಾಂದ್ರಕಗಳು ಸಹಕಾರಿಯಾಗಲಿದೆ. ಆಮ್ಲಜನಕ ಸಾಂದ್ರಕ ವ್ಯವಸ್ಥೆ ಹಾಗೂ ಆಮ್ಲಜನಕ ಘಟಕ ಸ್ಥಾಪನೆಗಳಿಂದಾಗಿ ಸಾಮಾನ್ಯ ಜನರಲ್ಲಿ ಮೂಡಿರುವ ಆತಂಕ ದೂರವಾಗಿದೆ ಎಂದರು.
ಸಚಿವರು, ಸಿಎಂ ಸ್ಪಂದನೆ: ಶಾಸಕ ಜ್ಯೋತಿ ಗಣೇಶ್ ಮಾತನಾಡಿ ಆಮ್ಲಜನಕ ಸಾಂದ್ರಕ ನೆರವು ನೀಡಿದ ಉದ್ಯಮಿಗಳ ಕಾರ್ಯವನ್ನು ಶ್ಲಾಘಿಸುವ ಜೊತೆಗೆ ಹೇಮಾವತಿ ನೀರು ಹರಿಸಲು ನೆರವಾದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ ಅಭಾರಿಯಾಗಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಡಾ.ಕೆ. ವಿದ್ಯಾಕುಮಾರಿ,ಎಸ್ಪಿ ಡಾ.ಕೆ. ವಂಶಿಕೃಷ್ಣ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಡಿಹೆಚ್ ಓ ನಾಗೇಂದ್ರಪ್ಪ, ಉದ್ಯಮಿಗಳಾದ ಹೆಬ್ಬಾಕರವಿ, ಆಶಾ ಪ್ರಸನ್ನಕುಮಾರ್ ಎನ್.ಎಸ್.ಶ್ರೀಧರ್ ಸೇರಿದಂತೆ ಟಿಎಂಸಿಸಿ ನಿರ್ದೇಶಕರು, ವ್ಯವಸ್ಥಾಪಕರು, ಕ್ರಷರ್,ಕ್ವಾರಿ, ರೈಸ್ ಮಿಲ್, ಇತರೆ ಕೈಗಾರಿಕೆಗಳ ಹಾಗೂ ಸಂಘಸಂಸ್ಥೆಗಳ ಮಾಲೀಕರು ಹಾಜರಿದ್ದರು.
ಟಿ.ಎಂ.ಸಿ.ಸಿ.ಬ್ಯಾಂಕ್ ನ ಜಯಕುಮಾರ್ ಅವರು ಆಮ್ಲಜನಕ ಸಾಂಧ್ರಕಗಳ ಕೊಡುಗೆ ನೀಡಿರುವ ಜೊತೆಗೆ ಕೋವಿಡ್ನಿಂದ ಮೃತರಾಗುತ್ತಿರುವರ ಅಂತ್ಯಸಂಸ್ಕಾರಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ತುಮಕೂರಿನ ಸ್ಮಶಾನ ಭೂಮಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಹೊಂದಿದವರನ್ನು ಸುಡುವ ಕಾರ್ಯಕ್ಕೆ ಆರು ಒಲೆಗಳ ನೆರವು ನೀಡಿದ್ದಾರೆ. ರುದ್ರ ಭೂಮಿಯ ವ್ಯವಸ್ಥೆಯ ನಿರ್ವಹಣೆಯನ್ನು ಅವರೇ ವಹಿಸಿಕೊಂಡಿದ್ದಾರೆ. ಇದರಿಂದ ಮೃತರಾದ ಸೋಂಕಿತರ ಸಂಸ್ಕಾರಕ್ಕೆ ಸಾಕಷ್ಟು ಅನುಕೂಲವಾಗಿದೆ.
-ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರು.
ಮೇ 28ರಿಂದ ಜಿಲ್ಲೆಗೆ ಹೇಮೆ ನೀರು
ಕೋವಿಡ್ ಸಂದರ್ಭದಲ್ಲಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ನಗರದ ಕುಡಿಯುವ ನೀರು ಪೂರೈಕೆ ಸಂಬಂಧ ಸಂಸದ ಜಿ.ಎಸ್. ಬಸವರಾಜ್ ಹಾಗೂ ಶಾಸಕ ಜ್ಯೋತಿ ಗಣೇಶ್ ಅವರ ಕೋರಿಕೆ ಮೇರೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಮಾತನಾಡಿ ಮೇ 28ರಿಂದ ಗೊರೂರು ಜಲಾಶಯದಿಂದ ಹೇಮೆ ನೀರು ಹರಿಸಲು ವ್ಯವಸ್ಥೆ ಮಾಡಿದ್ದು, ನಗರದ ಕುಡಿಯುವ ನೀರಿಗೆ ಮೂಲಧಾರವಾಗಿರುವ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಕ್ರಮ ವಹಿಸಲಾಗಿದೆ. ಅದರಂತೆಯೇ ಜಿಲ್ಲೆಯ ಕುಡಿಯುವ ನೀರಿನ ಅಭಾವ ಇರುವ ಪ್ರದೇಶದ ಕೆರೆಗಳಿಗೆ ನೀರು ಹರಿಸಲು ಕ್ರಮ ಜರುಗಿಸಲಾಗಿದೆ. ಬುಗುಡನಹಳ್ಳಿ ಕೆರೆಗೆ 0 .4ಟಿಎಂಸಿ ಹಾಗೂ ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತಿಪಟೂರು ತಾಲಕುಗಳ ಕೆರೆಗಳಿಗೆ 0.4ಟಿಎಂಸಿ ಸೇರಿದಂತೆ ಒಟ್ಟು 0.8 ಟಿಎಂಸಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ನಗರದ ನಾಗರಿಕರು ಆತಂಕ ಪಡುವುದು ಬೇಡ ಎಂದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕರೆಗೆ ಓಗೊಟ್ಟು ಕ್ವಾರಿ, ಕ್ರಷರ್, ರೈಸ್ ಮಿಲ್, ಕೋ.ಆಪರಟಿವ್ ಬ್ಯಾಂಕ್ ಮುಖ್ಯಸ್ಥರಿ ಸಾರ್ವಜನಿಕರಿಗೆ ಸಹಾಯಕವಾಗಲೆಂದು 2 ರಿಂದ 9 ಲೀವವರೆಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಅಳಿಲು ಸೇವೆ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತಕ್ಕೆ, ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಾವಗಡ ರಾಮಕೃಷ್ಣಸೇವಾಶ್ರಮದ ಸ್ವಾಮಿ ಜಪಾನಂದಜೀ ಅವರ ಮನವಿ ಮೇರೆಗೆ 5 ಲಕ್ಷದ ಚಿಕಿತ್ಸಾ ಉಪಕರಣಗಳನ್ನು ಪಾವಗಡ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ.
-ಎನ್.ಎಸ್.ಜಯಕುಮಾರ್, ಟಿಎಂಸಿಸಿ ಅಧ್ಯಕ್ಷರು.
