ತುಮಕೂರು :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್ನಡಿ ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಮಳೆಗಾಲ ಪ್ರಾರಂಭವಾಗಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಿಂದ ತಿಪಟೂರು-ಕಡೂರು-ಶಿವಮೊಗ್ಗ-ಸಾಗರ ಮಾರ್ಗವಾಗಿ ವರದ ಮೂಲ, ಇಕ್ಕೇರಿ ಹಾಗೂ ಜೋಗ ಜಲಪಾತಕ್ಕೆ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಪ್ರಯಾಣಿಕರು ನಿಗಮದ ಅವತಾರ್(www.ksrtc.karnataka.gov.in) ತಂತ್ರಾಂಶದಲ್ಲಿ ಮುಂಗಡ ಟಿಕೆಟ್ಗಳನ್ನು ಕಾಯ್ದಿರಿಸಬಹುದಾಗಿದೆ. ವಯಸ್ಕರಿಗೆ 650/- ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 400/- ರೂ.ಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
ವಿಶೇಷ ಟೂರ್ ಪ್ಯಾಕೇಜ್ನಡಿ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಸಾರಿಗೆ ಕಾರ್ಯಾಚರಣೆಯು ತುಮಕೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿದ್ದು, ಪ್ರವಾಸಿಗರಿಗೆ ಬೆಳಗ್ಗೆ 9 ರಿಂದ 9-15ರವರೆಗೆ ಕಡೂರಿನಲ್ಲಿ ಲಘು ಉಪಾಹಾರಕ್ಕೆ ಅವಕಾಶ ನೀಡಲಾಗುವುದು. ನಂತರ ಮಧ್ಯಾಹ್ನ 12 ಗಂಟೆಗೆ ಸಾಗರ ತಲುಪಲಿದ್ದು, 12.15ಕ್ಕೆ ವರದಾಂಬ ದೇವಸ್ಥಾನ ಹಾಗೂ ಕಲ್ಯಾಣಿ ವೀಕ್ಷಣೆ, 12-45ಕ್ಕೆ ವರದ ಮೂಲದಿಂದ ಹೊರಟು 1 ಗಂಟೆಗೆ ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ನಂತರ ಇಕ್ಕೇರಿ ಮಾರ್ಗವಾಗಿ 1.45ಕ್ಕೆ ಸಾಗರ ತಲುಪಲಿದೆ. ಸಾಗರದಿಂದ 1.45ಕ್ಕೆ ಹೊರಟು 2.30ಕ್ಕೆ ಜೋಗದಲ್ಲಿ ಭೋಜನ ಹಾಗೂ ಜಲಪಾತ ವೀಕ್ಷಣೆ ಮಾಡಬಹುದಾಗಿದೆ. ಜೋಗದಿಂದ ಸಂಜೆ 5.30ಕ್ಕೆ ನಿರ್ಗಮಿಸಿ 9.30 ರಿಂದ 9-45ರವರೆಗೆ ಕಡೂರಿನಲ್ಲಿ ಲಘು ಉಪಾಹಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಮಧ್ಯ ರಾತ್ರಿ 12.45ಕ್ಕೆ ಮರಳಿ ತುಮಕೂರು ತಲುಪಲಿದೆ.
ಈ ವಿಶೇಷ ಪ್ಯಾಕೇಜ್ನಡಿ ಪ್ರಯಾಣಿಸುವ ಪ್ರವಾಸಿಗರು ಮಾರ್ಗ ಮಧ್ಯೆ ಉಪಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
