ಬೆಂಗಳೂರು
ಸಣ್ಣ ಸಣ್ಣ ಪ್ರಯತ್ನಗಳಿಂದ ಹೆಚ್ಚಿನದನ್ನು ಸಾಧಿಸುವುದು ಸಾಧ್ಯ. ಒಮ್ಮೆಲೆ ದೊಡ್ಡದನ್ನು ಸಾಧಿಸಬೇಕು ಎನ್ನುವ ಹುಮ್ಮಸ್ಸಿಗಿಂತ ನಿರಂತರ ಪ್ರಯತ್ನ ಮಾಡುವುದರಿಂದ ಮಹಿಳೆಯರು ದೊಡ್ಡ ಸಾಧನೆಯನ್ನು ಮಾಡಬಹುದು ಎಂದು ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ, ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಒಮ್ಮೆಲೆ ದೊಡ್ಡದಕ್ಕೆ ಗುರಿಯಿಡುವುದಕ್ಕಿಂತ ಸಣ್ಣ ಸಣ್ಣ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ. ಅರಣ್ಯ ರಕ್ಷಣೆಯ ಹೊಣೆಯನ್ನು ಹೊತ್ತ ಇಲಾಖೆಯಲ್ಲಿ ಪ್ರಮುಖ ಎರಡೂ ಸ್ಥಾನದಲ್ಲೂ ಮಹಿಳೆಯರು ಉತ್ತಮ ಸಾಧನೆ ತೋರಿಸುತ್ತಿದ್ದಾರೆ.
ನಷ್ಟದಲ್ಲಿದ್ದ ನಿಗಮವನ್ನು ಲಾಭದತ್ತ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಮಹಿಳೆಯರು ಎಲ್ಲದನ್ನೂ ಸಾಧಿಸಬಹುದು ಎನ್ನುವುದನ್ನು ಅಧ್ಯಕ್ಷರಾಗಿ ತಾರಾ ಅನೂರಾಧ ರವರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ರಾಧಾ ದೇವಿಯವರು ತೋರಿಸಿದ್ದಾರೆ ಎಂದು ಶ್ಲಾಘಿಸಿದರು.
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ತಾರಾ ಅನೂರಾಧ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಆದರೆ, ಯಶಸ್ಸು ಪಡೆಯುವದಕ್ಕೆ ವಾಮಮಾರ್ಗಗಳನ್ನು ಹಿಡಿಯುವುದು ಸರಿಯಲ್ಲ. ಹೆಣ್ಣುಮಕ್ಕಳು ತಮಗೆ ವಹಿಸಿದ ಎಲ್ಲಾ ಕೆಲಸವನ್ನು ಚೆನ್ನಾಗಿಯೇ ನಿರ್ವಹಿಸುತ್ತಾರೆ. ಅದು, ಮನೆಯ ನಿರ್ವಹಣೆ ಇರಲಿ ಹೊರಗಿನ ಕೆಲಸಗಳೇ ಇರಲಿ. ಮಹಿಳೆಗೆ ಶಕ್ತಿ ಎನ್ನುವುದು ಬಹಳಷ್ಟಿದೆ. ಸ್ವಾಮಿ ವಿವೇಕಾನಂದರು ಒಂದು ಹೋರಾಟಕ್ಕೆ ಮಹಿಳೆ ಕೈಜೊಡಿಸಿದರೆ ಯಶಸ್ಸು ಸಾಧ್ಯ ಎನ್ನುವುದನ್ನ ಹೇಳಿದ್ದರು.
ನಮ್ಮತನವನ್ನ ಕಳೆದುಕೊಳ್ಳದ ರೀತಿಯಲ್ಲಿ ಸಾಧನೆ ಮಾಡುವುದು ಅತ್ಯವಶ್ಯಕ ಎಂದರು. ನಿಗಮದ ಹಲವಾರು ವಿಭಾಗಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎ. ರಾಧಾ ದೇವಿ ಸೇರಿದಂತೆ ರಾಜ್ಯದ ವಿವಿಧಾ ಭಾಗಗಳಿಂದ ಆಗಮಿಸಿದ್ದ ನಿಗಮದ ಮಹಿಳಾ ಉದ್ಯೋಗಿಗಳ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
