ಆರ್ಥಿಕ ಬೆಳವಣಿಗೆ ಇಳಿಕೆಗೆ ರಘುರಾಮ್‌ ರಾಜನ್‌ ಕಾರಣ: ನೀತಿ ಆಯೋಗ

ಹೊಸದಿಲ್ಲಿ:

            ಭಾರತದ ಆರ್ಥಿಕ ಬೆಳವಣಿಗೆ ಮುಗ್ಗರಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ತೆಗೆದುಕೊಂಡಿದ್ದ ನೀತಿಗಳೇ ಕಾರಣ ಹೊರತು ನೋಟು ಅಮಾನ್ಯತೆಯಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ. ಶೇ.9.2ರ ಉನ್ನತ ಮಟ್ಟದಲ್ಲಿದ್ದ ಜಿಡಿಪಿ ಬೆಳವಣಿಗೆ 2015-16ರಿಂದ 6 ತ್ರೈಮಾಸಿಕಗಳ ಕಾಲ ಇಳಿಮುಖವಾಗಿತ್ತು. ಇದಕ್ಕೆ ಬ್ಯಾಂಕ್‌ಗಳಲ್ಲಿ ಹೆಚ್ಚುತ್ತಿದ್ದ ವಸೂಲಾಗದ ಸಾಲ (ಎನ್‌ಪಿಎ) ಕಾರಣವೇ ಹೊರತು ನೋಟು ಬ್ಯಾನ್‌ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

         ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈಗಿನ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಾಗ 4 ಲಕ್ಷ ಕೋಟಿ ರೂ. ವಸೂಲಾಗದ ಸಾಲ ಇತ್ತು.2017ರ ಮಧ್ಯಭಾಗದ ಹೊತ್ತಿಗೆ ಇದು 10.5 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು. ಯಾಕೆಂದರೆ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರು ಅನುತ್ಪಾದಕ ಸಾಲವನ್ನು ಗುರುತಿಸುವುದು ಹಾಗೂ ನಿರ್ವಹಣೆಗೆ ಹೊಸ ಕಾರ‍್ಯತಂತ್ರವನ್ನು ಜಾರಿಗೊಳಿಸಿದ್ದರು. ಆದರೆ ಇದರಿಂದಾಗಿ ಬ್ಯಾಂಕ್‌ಗಳು ಉದ್ಯಮ ವಲಯಕ್ಕೆ ಸಾಲ ವಿತರಣೆಯನ್ನೇ ಸ್ಥಗಿತಗೊಳಿಸಿದವು. ಇದರ ಪರಿಣಾಮ ಉದ್ದಿಮೆ ಹಾಗೂ ಆರ್ಥಿಕ ಪ್ರಗತಿ ತಗ್ಗಿತು ಎಂದು ಕುಮಾರ್‌ ವಿವರಿಸಿದರು.

         ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಂಥ ಗಣ್ಯ ವ್ಯಕ್ತಿಗಳೂ, ನೋಟು ಬ್ಯಾನ್‌ ನಂತರ ಆರ್ಥಿಕ ಬೆಳವಣಿಗೆ ಮಂದಗತಿಗೆ ತಿರುಗಿತು ಎಂದು ವಾದಿಸುತ್ತಾರೆ. ಆದರೆ ಅದು ಸರಿಯಲ್ಲ. ನೋಟು ಅಮಾನ್ಯತೆಗಿಂತ ಮೊದಲೇ ಜಿಡಿಪಿ ಮಂದಗತಿಯಲ್ಲಿತ್ತು. ಹಾಗೂ ಇದು ನಿರಂತರ ಮುಂದುವರಿದಿತ್ತು. ಆದರೆ ಡಿಮಾನಿಟೈಸೇಶನ್‌ ಆದ ಬಳಿಕ, ಜಿಡಿಪಿ ಇಳಿಕೆಗೆ ಅದೇ ಕಾರಣ ಎಂದು ದೂರಲಾಯಿತು. ಆದರೆ ಇವೆರಡಕ್ಕೂ ಯಾವುದೇ ನೇರ ಸಂಬಂಧ ಇಲ್ಲ ಎಂದು ರಾಜೀವ್‌ ಕುಮಾರ್‌ ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link