ದಾವಣಗೆರೆ
ಟ್ವೆಂಟಿ ಟ್ವೆಂಟಿ ಬಿಲಿಯನ್ ಮಾರ್ಕೆಟಿಂಗ್ ಹೆಸರಿನಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ, ವಂಚನೆ ಮಾಡಿದ್ದ ತಮಿಳುನಾಡಿನ ಓರ್ವ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ದಾವಣಗೆರೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದರು.
ಈ ಕುರಿತು ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಧುರೈ ನಿವಾಸಿ ಸೈಯದ್ ಇಬ್ರಾಹಿಂ ಹಾಗೂ ಕರ್ನಾಟಕದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎಂ.ಆರ್.ರಾಜ ಬಂಧಿತ ಆರೋಪಿಗಳಾಗಿದ್ದು, 2018ರ ಅಕ್ಟೋಬರ್ ತಿಂಗಳಿನಲ್ಲಿ ದಾವಣಗೆರೆಯ ಗೌರಿ ಗಣೇಶ ಚಿಟ್ಸ್ ಫಂಡ್ ವ್ಯವಸ್ಥಾಪಕ ರಾಮಕೃಷ್ಣ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆ ಇನ್ಸಪೆಕ್ಟರ್ ಟಿ.ವಿ.ದೇವರಾಜ ಮತ್ತು ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.
ಗೌರಿ ಗಣೇಶ ಚಿಟ್ಸ್ ಫಂಡ್ನ ರಾಮಕೃಷ್ಣ ಅವರಿಗೆ ಜಗಳೂರು ತಾಲೂಕಿನ ಮುಷ್ಟೂರು ಗ್ರಾಮದ ನಿವಾಸಿ ತಿಪ್ಪೇಸ್ವಾಮಿ ಎಂಬುವರು ಟ್ವೆಂಟಿ ಟ್ವೆಂಟಿ ಬಿಲಿಯನ್ ಮಾರ್ಕಟಿಂಗ್ ಕಂಪನಿ ಬಗ್ಗೆ ತಿಳಿಸಿ, ತಾನೂ ಅದರಲ್ಲಿ ಹಣ ಹೂಡಿರುವುದಾಗಿ ತಿಳಿಸಿ, 1.10 ಲಕ್ಷ ಹೂಡಿದರೆ, ನಿತ್ಯ 1 ಸಾವಿರದಂತೆ 200 ದಿನ ನಿರಂತರ ಹಣ ಬರಲಿದೆ. ಅಲ್ಲದೇ, ಬೇರೆಯವರನ್ನು ಪರಿಚಯಿಸಿದರೆ ದಿನಕ್ಕೆ 1 ಸಾವಿರ ರು.ನಂತೆ 200 ರು. ಬರುವ ಜೊತೆಗೆ ಹೆಚ್ಚುವರಿ ಕಮೀಷನ್ ಬರುತ್ತದೆಂದು ನಂಬಿಸಿ 1.10 ಲಕ್ಷ ರು.ಗಳನ್ನು ಹೂಡಿಕೆ ಮಾಡಿದಲ್ಲದೇ, ನಂತರ ತಮಿಳುನಾಡಿನ ಇಬ್ರಾಹಿಂ ನೀಡಿದ ಪಿನ್ ಪಡೆದುಕೊಂಡು ಕಂಪನಿಗೆ ಲಾಗಿನ್ ಆಗಿದ್ದಾರೆ. ದಿನ ಕಳೆದಂತೆ ರಾಮಕೃಷ್ಣ ತಮ್ಮ ಕಡೆಯಿಂದ ಸುಮಾರು 100 ಜನರನ್ನು ಕಂಪನಿಗೆ ಪರಿಚಯಿಸಿದ್ದರು. ಎಲ್ಲರಿಂದಲೂ ಇಬ್ರಾಹಿಂ ತಲಾ 1.10 ಲಕ್ಷ ರು.ಗಳನ್ನು ವಿವಿಧ ಬ್ಯಾಂಕ್ನಲ್ಲಿದ್ದ 14 ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದ ಅಲ್ಲದೆ, ಮುಷ್ಟೂರಿನ ತಿಪ್ಪೇಸ್ವಾಮಿ ಸಹ 300 ಜನರಿಂದ ತಲಾ 1.10 ಲಕ್ಷ ರು.ನಂತೆ ಮೂರು ಕೋಟಿಗೂ ಅಧಿಕ ಹಣ ಹಾಕಿಸಿದ್ದಾರೆ.
ಆದರೆ, ಇಬ್ರಾಹಿಂ, ರಾಜ ಹೇಳಿದಂತೆ ಯಾರ ಖಾತೆಗೂ ದಿನಕ್ಕೆ 1 ಸಾವಿರ ರು.ಗಳಾಗಲೀ, ಕಮೀಷನ್ ಆಗಲಿ ಜಮಾ ಆಗಿಲ್ಲ. ಆದ್ದರಿಂದ ಅನುಮಾನಗೊಂಡ ರಾಮಕೃಷ್ಣ ಹಣ ಮರಳಿಸುವಂತೆ ತಾಕೀತು ಮಾಡಿದ್ದಾರೆ. ತಮಿಳುನಾಡಿಗೂ ಹೋಗಿ ಇಬ್ರಾಹಿಂಗೆ ಹಣ ಕೊಡುವಂತೆ ಕೇಳಲು ಹೋದರೂ ಸಿಗಲಿಲ್ಲ. ನೀವು ಊರಿಗೆ ಹೋಗಿ. 10 ದಿನದಲ್ಲಿ ಹಣ ವಾಪಾಸ್ಸು ಕೊಡಿಸುವುದಾಗಿ ರಾಮಕೃಷ್ಣ ಇತರರನ್ನು ಆರೋಪಿ ವಾಪಾಸ್ಸು ಸಹ ಕಳಿಸಿದ್ದ ಎಂದು ಅವರು ವಿವರಿಸಿದರು.
ಈ ಎಲ್ಲಾ ಕಾರಣಗಳಿಂದ ಇಬ್ರಾಹಿಂ ಬಗ್ಗೆ ಅನುಮಾನಗೊಂಡ ರಾಮಕೃಷ್ಣ ಹಾಗೂ ಇತರರು ಅನುಮಾನಗೊಂಡು ದಾವಣಗೆರೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಪಿಐ ಟಿ.ವಿ.ದೇವರಾಜ ಮತ್ತು ತಂಡವು ಬೆಂಗಳೂರಿನ ಮೂವಿ ಲ್ಯಾಂಡ್ ಟಾಕೀಸ್ ಬಳಿ ಆರೋಪಿಗಳನ್ನು ಬಂಧಿಸಿ, ದಾವಣಗೆರೆಗೆ ಕರೆ ತಂದಿದ್ದಾರೆ. ಮತ್ತೊಬ್ಬ ಆರೋಪಿ ಇಬ್ರಾಹಿಂನ ಪತ್ನಿ ಮುಮ್ತಾಜ್ ತಲೆ ಮರೆಸಿಕೊಂಡಿದ್ದಾರೆ. ಇನ್ನೂ ಅನೇಕರು ಈ ವಂಚನೆ ಜಾಲದ ಹಿಂದಿರುವ ಶಂಕೆ ಇದೆ ಎಂದರು.
ಈ ಸಂದರ್ಭದಲ್ಲಿ ಸೈಬರ್ ಅಪರಾಧ ಪೊಲೀಸ್ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಟಿ.ವಿ.ದೇವರಾಜ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ