ರೈತರ ಹಿತರಕ್ಷಣೆ ಮಾಡಲು ಕೇಂದ್ರಕ್ಕೆ ಆಗ್ರಹ..!

ಮಧುಗಿರಿ

    ವಿದೇಶಿ ಹಾಲಿನ ಆಮದು ಒಪ್ಪಂದಕ್ಕೆ ಹಾಲು ಉತ್ಪನ್ನಗಳನ್ನು ಸೇರಿಸದೆ ರಾಜ್ಯದ ಹೈನುಗಾರಿಕೆ ರೈತರ ಹಿತರಕ್ಷಣೆ ಮಾಡಬೇಕು, ಇಲ್ಲವಾದರೆ ರೇಷ್ಮೆ ಬೆಳೆಗಾರರಿಗೆ ಬಂದಂತಹ ಸಂಕಷ್ಟವೇ ಹಾಲು ಉತ್ಪಾದಕರಿಗೂ ಮರುಕಳಿಸಲಿದ್ದು ಕೇಂದ್ರ ಸರ್ಕಾರ ರೈತರ ಪರವಾಗಿರಬೇಕೆಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಆಗ್ರಹಿಸಿದರು.

    ತಾಲ್ಲೂಕಿನ ಹಾಲು ಉತ್ಪಾದಕರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಭಿತ್ತಿ ಪತ್ರಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಡಾ. ನಂದಿನಿ ದೇವಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿ ಸಂಕಷ್ಟದಲ್ಲಿದ್ದ ರೈತ ಕುಟುಂಬಗಳಿಗೆ ಉಪ ಕಸುಬಾಗಿ ಹೈನುಗಾರಿಕೆಯು ಇಂದು ಆರ್ಥಿಕ ಶಕ್ತಿ ತುಂಬುತ್ತಿದೆ.

    ಇಂದು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರಾಜ್ಯದಲ್ಲಿ 14 ಒಕ್ಕೂಟಗಳಿಂದ ಪ್ರತಿದಿನ 85 ಲಕ್ಷ ಲೀಟರ್ ಹಾಲು ಕೆ.ಎಂ.ಎಫ್ ಮೂಲಕ ಶೇಖರಣೆಯಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ.
ಪ್ರಸ್ತುತ ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ಹಲವಾರು ಸರಕುಗಳನ್ನು ಪ್ರಸ್ತಾವನೆಗೆ ಸೇರಿಸಲು ಇಚ್ಚಿಸುತ್ತಿದ್ದು ಅವುಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳೂ ಸೇರಿವೆ. ಹಾಲಿನ ಉತ್ಪನ್ನಗಳು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದರೆ ಮುಂದುವರೆದ ರಾಷ್ಟ್ರಗಳಾದ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‍ಗಳು ಭಾರತದ ಮುಕ್ತ ಮಾರುಕಟ್ಟೆಗೆ ಲಗ್ಗೆ ಹಾಕಿ ನಮ್ಮ ಹೈನೋದ್ಯಮವನ್ನು ಆವರಿಸಿ ದೇಶದ ಹೈನುಗಾರ ರೈತರನ್ನು ವಿನಾಶಕ್ಕೆ ದೂಡಲಿದೆ.

    ರೈತ ಮಾಲೀಕತ್ವದ ಸಂಸ್ಥೆಗಳು ದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ಡಾ.ವರ್ಗೀಸ್ ಕುರಿಯನ್ ಸ್ಥಾಪಿಸಿರುವ ಅಮುಲ್ ಇಂದು ದೇಶದ ಎರಡನೇ ಸಹಕಾರ ಕ್ಷೇತ್ರದ ಹೈನು ಉದ್ಯಮವಾಗಿ ಬೆಳೆದಿದ್ದು ಕೋಟ್ಯಂತರ ಕುಟುಂಬಗಳಿಗೆ ನಿರಂತರವಾಗಿ ಆರ್ಥಿಕ ಶಕ್ತಿಯನ್ನು ನೀಡಿದೆ. ಹೈನು ಉದ್ಯಮವು ದೇಶದ ಅವಶ್ಯಕತೆಗಿಂತ ಅಧಿಕ ಹಾಲನ್ನು ಉತ್ಪಾದಿಸುವ ಮೂಲಕ ಬೇಡಿಕೆಯನ್ನು ಪೂರೈಸಿ ಆಮದಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಮುಕ್ತ ಆಮದು ನೀತಿಯು ಜಾರಿಯಾದಲ್ಲಿ ರೈತ ಒಡೆತನದ ಈ ಸಹಕಾರಿ ಸಂಸ್ಥೆಗಳು ವಿನಾಶವಾಗಿ ಬಂಡವಾಳ ಶಾಹಿತ್ವ ಆರಂಭವಾಗಲಿದ್ದು ಸ್ವಾವಲಂಬಿಗಳಾದ ಹೈನುಗಾರರು ಮತ್ತು ಗ್ರಾಹಕರು ವಿದೇಶಿ ಸರಕುಗಳ ಮೇಲೆ ಅವಲಂಬಿತರಾಗುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತು ಗ್ರಾಮದ ಪ್ರಗತಿಗೆ ಭಾರಿ ಪೆಟ್ಟು ನೀಡಲಿದೆ.

   ಕೇಂದ್ರ ಸರ್ಕಾರವು ಮುಕ್ತ ಆಮದು ಒಪ್ಪಂದವನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಎಫ್‍ಟಿಎ ನೀತಿಯಿಂದ ಹಾಲಿನ ಉತ್ಪನ್ನಗಳನ್ನು ಹೊರಗಿಟ್ಟು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳುವುದನ್ನು ರದ್ಧುಗೊಳಿಸಿ ದೇಶದ ಹೈನುಗಾರ ಹಿತ ಕಾಯಬೇಕೆಂದು ಮನವಿ ಮಾಡಿದರು.

    ಪ್ರತಿಭಟನೆಯಲ್ಲಿ ಡೇರಿಗಳ ಅಧ್ಯಕ್ಷರುಗಳಾದ ಸಿದ್ದಪ್ಪ, ಮೂಡ್ಲಪ್ಪ, ತಿಮ್ಮಯ್ಯ, ನರಸಿಂಹರಾಜು, ಸಂಜೀವೆಗೌಡ, ಈರನಾಗಪ್ಪ, ಮುಖಂಡ ನೀರಕಲ್ಲು ರಾಮಕೃಷ್ಣಪ್ಪ ಸೇರಿದಂತೆ ತಾಲ್ಲೂಕಿನ ಸಾವಿರಾರು ಮಂದಿ ಹಾಲು ಉತ್ಪಾದಕರು, ಸಂಘಗಳ ಪದಾಧಿಕಾರಿಗಳು ಹಾಗೂ ರೈತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link