ದಾವಣಗೆರೆ:
ಜನರು ಅಳವಡಿಸಿಕೊಂಡಿರುವ ದುಶ್ಚಟ ಮತ್ತು ಕೆಟ್ಟ ಹವ್ಯಾಸಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕಳವಳ ವ್ಯಕ್ತಪಡಿಸಿದರು.
ಸಮೀಪದ ತೋಳಹುಣಸೆ ಬಳಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್ ಸಂಘಟನೆ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಅವ್ಯವಸ್ಥಿತ ಜೀವನ ಶೈಲಿ, ನಡವಳಿಕೆ ಮತ್ತು ಅಳವಡಿಸಿಕೊಂಡಿರುವ ಕೆಟ್ಟ ಹವ್ಯಾಸಗಳಿಂದಾಗಿ ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
ಕೆಟ್ಟ ಹವ್ಯಾಸಗಳೇ ದುಶ್ಚಟಗಳು. ಅವುಗಳನ್ನು ತ್ಯಜಿಸಿದರೆ ಕುಟುಂಬಕ್ಕೂ ಒಳ್ಳೆಯದು, ಸಮಾಜ ಮತ್ತು ದೇಶಕ್ಕೂ ಒಳ್ಳೆಯದು. ಅತಿಯಾದ ಅವಲಂಬನೆ, ಕಾನೂನಿನ ಉಲ್ಲಂಘನೆಯೂ ದುಶ್ಚಟಗಳ ಸಾಲಿಗೆ ಸೇರುತ್ತದೆ. ಒಂದೆಡೆ ಅಪರಾಧವಾದರೆ, ಅದೇ ಅಭ್ಯಾಸವಾದರೆ ಚಟವಾಗಿ ಪರಿಣಮಿಸುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುವುದು. ಅಲ್ಲದೆ ಹವ್ಯಾಸಗಳೂ ನಾಮಾಂಕಿತವಾಗುವ ಸಾಧ್ಯತೆಗಳು ಹೆಚ್ಚು ಎಂದು ಸೂಚ್ಯವಾಗಿ ಎಚ್ಚರಿಸಿದರು.
ದೇಶದಲ್ಲಿ ಎಲ್ಲ ರೀತಿಯ ಸಂಪನ್ಮೂಲ, ಸೌಲಭ್ಯಗಳಿವೆ. ಹೇರಳವಾದ ಮಾನವ ಸಂಪನ್ಮೂಲ ಇದೆ. ಆದರೆ, ಅದಕ್ಕೆ ತಕ್ಕಂತೆ ಜನರಲ್ಲಿ ತಮ್ಮ ಜವಾಬ್ದಾರಿ, ಕರ್ತವ್ಯ ಬಗೆಗಾಗಲಿ, ಕಾನೂನಿನ ಅರಿವಾಗಲಿ ಇಲ್ಲ. ಇದರಿಂದಾಗಿ ವ್ಯವಸ್ಥೆ ಹಾಳಾಗಿದೆ. ಪರಿಸ್ಥಿತಿ ದಿನದಿನಕ್ಕೂ ಅವನತಿಯತ್ತ ಸಾಗುತ್ತಿದೆ. ಅನುಕರಣೆ ಹೆಸರಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಜಪಾನ್, ಜರ್ಮನಿಯಂತ ಪುಟ್ಟ ದೇಶಗಳು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಸಾಕಷ್ಟು ಉನ್ನತಿ ಸಾಧಿಸಿ ಇಡೀ ಜಗತ್ತನ್ನೇ ಎದುರಿಸುವ ಸಾಮಥ್ರ್ಯ ಬೆಳೆಸಿಕೊಂಡಿವೆ. ಅದಕ್ಕೆ ಆ ದೇಶಗಳಲ್ಲಿರುವ ಪರಿಸರ, ಶಿಕ್ಷಣ ಮತ್ತು ನೈತಿಕ ಮೌಲ್ಯಗಳೇ ಕಾರಣ. ಪ್ರಾಮಾಣಿಕತೆ, ಶಿಸ್ತುಬದ್ಧ ಕರ್ತವ್ಯ ಪಾಲನೆ ಸಹ ಮುಖ್ಯವಾಗಿವೆ. ದೇಶದ ಕಾನೂನಿಗೆ ಅಲ್ಲಿಯ ಜನ ನೀಡುವ ಗೌರವ ಅಸಾಧಾರಣ ಎಂದು ಹೇಳಿದರು.
ಗುರು- ಹಿರಿಯರು, ವಯೋವೃದ್ಧರು, ತಂದೆ-ತಾಯಿಗೆ ಗೌರವ ನೀಡುವ, ಅವರ ಪೋಷಣೆ ಮಾಡುವ ವ್ಯವಸ್ಥೆಯಿಂದಲೂ ಭಾರತದ ಜನರು ವಿಮುಖರಾಗುತ್ತಿದ್ದಾರೆ. ಅದಕ್ಕಾಗಿಯೇ ಕಾನೂನು ರೂಪಿಸುವ ಸ್ಥಿತಿ ತಲುಪಿದ್ದು ವಿಷಾದನೀಯ. ಇದರಿಂದಾಗಿ ಸಾಮಾಜಿಕ ಮೌಲ್ಯಗಳು ಕುಸಿದು, ನೈತಿಕ ಪ್ರಜ್ಞೆ ದೂರವಾಗುತ್ತಿದೆ. ಮೌಲ್ಯಗಳಿಲ್ಲದ ಶಿಕ್ಷಣದಿಂದ ಸಮಾಜಕ್ಕೆ, ಕುಟುಂಬಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿವಿ ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಇಂದಿನ ಯುವಜನರಲ್ಲಿ ನೈತಿಕ ಮೌಲ್ಯಗಳ ಕೊರತೆಯಿಂದ ಸಾಮಾಜಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಾಂಧವ್ಯದ ಕೊರತೆಯಿಂದ ಏಕಾಂಗಿತನ, ಅಭದ್ರತೆ ಕಾಡುತ್ತಿದೆ. ಇದು ಭವಿಷ್ಯದ ಪೀಳಿಗೆಯ ಬದುಕನ್ನು ಹಾಳು ಮಾಡುವ ಆತಂಕವಿದೆ. ಆದ್ದರಿಂದ ಮಕ್ಕಳಿಗೆ ಸಂಬಂಧದ ಮೌಲ್ಯಗಳನ್ನು ತಿಳಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜೆಜೆಎಂ ವೈದ್ಯಕೀಯ ಕಾಲೇಜಿನ ನ್ಯಾಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಎಸ್. ಸಂತೋಷ್, ಸಿಪಿಐ ದೇವರಾಜ್ ವಿಶೇಷ ಉಪನ್ಯಾಸ ನೀಡಿದರು. ಡಿವೈಎಸ್ಪಿಗಳಾದ ನಾಗೇಶ್ ಐತಾಳ, ಮಂಜುನಾಥ್ ಗಂಗಲ್ ಮಾತನಾಡಿದರು. ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಡಾ.ಲೋಕೇಶ್, ಡಾ. ಶಿವಲಿಂಗ ಉಪಸ್ಥಿತರಿದ್ದರು.ಯುವ ರೆಡ್ ಕ್ರಾಸ್ ಸಂಯೋಜ ನಾಧಿಕಾರಿ ಪ್ರದೀಪ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿಎಸ್ಐ ವೀರೇಶ್ ಸ್ವಾಗತಿಸಿದರು. ಡಾ.ತಿಪ್ಪೇಶ್ ವಂದಿಸಿದರು. ಡಾ.ಪಟವರ್ಧನ್ ರಾಠೋಡ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
