ತುರುವೇಕೆರೆ :
ಚಲಿಸುವ ಕಾರೊಂದರ ಚಕ್ರ ಕಳಚಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಕಂಬ ಮುರಿದು ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಡೆದಿದೆ.
ಪಟ್ಟಣದ ಯಡಿಯೂರು-ಶ್ರೀರಂಗ ಪಟ್ಟಣ ರಸ್ತೆಯ ಸಾರ್ವಜನಿಕ ಆಸ್ಪತ್ರೆ ಮುಂಭಾಗ ತಡರಾತ್ರಿ ಟಾಟಾ ಕೆ.ಎ.44-2323 ನಂಬರಿನ ಕಾರೊಂದು ಚಲಿಸುತ್ತಿದ್ದ ವೇಳೆ ಹಿಂಬದಿ ಕಾರಿನ ಚಕ್ರ ಕಳಚಿ ಬಿದ್ದರಿಂದ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಕಾರು ರಭಸವಾಗಿ ಗುದ್ದಿದೆ. ಆಗ ಕಂಬವು ಮೂರು ತುಂಡಾಗಿ ಮುರಿದಿದ್ದರೂ ಕಂಬದಲ್ಲಿದ್ದ ವಿದ್ಯುತ್ ತಂತಿಯೆ ಆಧಾರವಾಗಿ, ಕಂಬವು ಬೀಳದೆ ಹಾಗೆಯೆ ನಿಂತಿದೆ.
ಕಾರು ಸಂಪೂರ್ಣ ಜಖಂ ಆಗಿದ್ದರೂ ಸಹ ಕಾರಿನಲ್ಲಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜನನಿಬಿಡ ರಸ್ತೆಯಾದ ಈ ಸ್ಥಳದಲ್ಲಿ ಹಗಲಲ್ಲೇನಾದರೂ ಈ ಘಟನೆ ನಡೆದಿದ್ದರೆ ಹೆಚ್ಚಿನ ಅನಾಹುತವಾಗುವ ಸಂಭವವಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ