ಕೆ.ಡಿ.ಪಿ. ಸಭೆ : ಸಭೆಯಲ್ಲಿ ಗೌಣಗೊಂಡ ಮೂಲಭೂತ ಸಮಸ್ಯೆಗಳು

ಶಿರಾ:

   ತಾಲ್ಲೂಕಿನ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿನ ಅಂತರ್ಜಲದ ಮಟ್ಟವೂ ಕುಸಿದಿದೆ. ವಿವಿಧ ಇಲಾಖೆಗಳ ಬಹಳಷ್ಟು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂಧಿಸದಂತಾಗಿದ್ದು ಇಡೀ ತಾಲ್ಲೂಕಿನಲ್ಲಿ ಹೇಳುವವರು ಕೇಳುವವರೇ ಇಲ್ಲದಂತಾಗಿದೆ. ಇಂತಹ ಸಂದರ್ಬದಲ್ಲಿ ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾ.ಪಂ. ಕೆ.ಡಿ.ಪಿ. ಸಭೆಯಲ್ಲಿ ಮಹತ್ವದ ಸಮಸ್ಯೆಗಳು ಕಳೆದು ಹೋದವೇ ಹೊರತು ಮೂಲಭೂತ ಸಮಸ್ಯೆಗಳ ಬಗ್ಗೆ ಗಹನವಾದ ಚರ್ಚೆಗಳೇ ನಡೆಯಲಿಲ್ಲ.

    ತಾ.ಪಂ. ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಕೆ.ಡಿ.ಪಿ. ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ತಾಲ್ಲೂಕಿನಲ್ಲಿ ನಿರ್ಮಾಣಗೊಂಡ ಚೆಕ್ ಡ್ಯಾಂಬ್, ಪ್ರಗತಿಯಲ್ಲಿರುವ ಚೆಕ್ ಡ್ಯಾಂಗಳ ಬಗ್ಗೆ ಸಂಸದರು ಮಾಹಿತಿ ಕೋರಿದಾಗ ಸಮರ್ಪಕ ಉತ್ತರವನ್ನೂ ನೀಡದ ಈ ಇಲಾಖೆಯ ಅಧಿಕಾರಿಯ ವಿರುದ್ಧ ಆರಂಭದಲ್ಲಿ ಕುಪಿತಗೊಂಡ ಸಂಸದರು ನಂತರ ಒಂದಷ್ಟು ಮಾಹಿತಿ ಪಡೆದು ತಣ್ಣಗಾದರು.

   ತಾಲ್ಲೂಕಿನಲ್ಲಿ ಎಷ್ಟು ಕೆರೆಗಳ ನಿರ್ಮಾಣವಾಗಿದೆ?, ಎಷ್ಟು ಪ್ರಗತಿಯಲ್ಲಿವೆ? ಎಂಬ ಅಪೂರ್ಣ ಮಾಹಿತಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯಿಂದ ವ್ಯಕ್ತಗೊಂಡಿತು. ಕಳುವರಹಳ್ಳಿ ಬಳಿಯ ಇಂಗು ಕೆರೆ ನಿರ್ಮಾಣಕ್ಕೆ 50 ಲಕ್ಷ ರೂ ಮಂಜೂರಾದ ಬಗ್ಗೆ ತುಟಿ ಬಿಚ್ಚಿದ ಸದರಿ ಅಧಿಕಾರಿ ಎಸ್.ಇ.ಪಿ. ಯೋಜನೆಯಡಿಯಲ್ಲಿನ 61 ಚೆಕ್ ಡ್ಯಾಂಗಳ ಪೈಕಿ 26 ಪೂರ್ಣಗೊಂಡಿವೆ, 16 ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದು ಮಾಹಿತಿ ನೀಡಿದರು. ಆದರೂ ಸಂಸದರು ಈ ಅಧಿಕಾರಿಯಿಂದ ಹೆಚ್ಚಿನ ಮಾಹಿತಿ ಪಡೆಯಲಾಗಲಿಲ್ಲ.

   ಪಶುಪಾಲನಾ ಇಲಾಖೆಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದು ಪಶುಭಾಗ್ಯ, ರಾಸುಗಳ ಔಷಧಿ ಸರವರಾಜು, ಮೇವಿನ ಲಭ್ಯತೆ, ರಾಸುಗಳ ರೋಗ-ರುಚಿನಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯಬೇಕಿದ್ದರೂ ಸದರಿ ಇಲಾಖೆಯ ಬಗ್ಗೆ ಮಾಹಿತಿ ಪಡೆಯುವಾಗ ಕೇವಲ ಐದೇ ನಿಮಿಷದಲ್ಲಿ ಎಲ್ಲವೂ ಮುಕ್ತಾಯಗೊಂಡಿತ್ತು.

    ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಶೀಲನೆ ಸರಸರನೆ ಮುಗಿದು ಹೋದವೇ ಹೊರತು ಸದರಿ ಇಲಾಖೆಯ ಸಮಸ್ಯೆಗಳ ಆಳ ಹಾಗೂ ಅರಿವುಗಳ ಪರಾಮರ್ಶೆಯೇ ಸಭೆಯಲ್ಲಿ ನಡೆಯಲಿಲ್ಲ. ಬೆಸ್ಕಾಂ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ವಿವಿದೆಡೆ ಉಪಸ್ಥಾವರಗಳ ಆರಂಭ ಹಾಗೂ ಸರ್ಕಾರದ ಅನುಮತಿ ಕೋರಿರುವ ಬಗ್ಗೆ ಮಾಹಿತಿ ನೀಡಿದ್ದು ನಿರಾಶ್ರಿತ ಕುಟುಂಬಗಳು ವಿದ್ಯುತ್ ಸೌಲಭ್ಯ ಪಡೆದ ಬಗ್ಗೆ ಸಂಸದರು ಮಾಹಿತಿ ಪಡೆದರು.

    ಸಭೆಯಲ್ಲಿ ಹಾಜರಿದ್ದ ನಗರಸಭೆಯ ಆಯುಕ್ತರು ಸಾರ್ವಜನಿಕರ ದೂರಿನ ಮೇರೆಗೆ ಶಿರಾ ನಗರದ ಸಪ್ತಗಿರಿ ಬಡಾವಣೆಯ ಸಮೀಪದ ಜಾಜಮ್ಮನ ಕಟ್ಟೆ ಬಳಿಯ ಕೊಳಗೇರಿ ನಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಡುವ ಸಂಬಂಧ ಸಂಸದರಿಗೆ ಮಾಹಿತಿ ನೀಡಿದರು. ಈ ಹಿಂದೆ ಸದರಿ ಕೊಳಗೇರಿ ಬಡಾವಣೆಯ ಜನರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕೋರಲಾಗಿತ್ತು ಆದರೆ ಈವರೆಗೂ ಕ್ರಮ ಕೈಗೊಂಡಿರದ ಪರಿಣಾಮ ಸದರಿ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು.

    ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಅನೇಕ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಗ್ರಾಮೀಣ ಜನತೆ ಪರಿತಪಿಸುತ್ತಿದ್ದಾರೆ. ಅಂತರ್ಜಲ ಬತ್ತಿ ಹೋಗಿ ರೈತರ ಬವಣೆ ಹೇಳತೀರದಾಗಿದೆ. ಇದಾವುದರ ಪರಾಮರ್ಶೆಯೂ ಸಭೆಯಲ್ಲಿ ನಡೆಯಲಿಲ್ಲ.

   ತಾಲ್ಲೂಕಿನಲ್ಲಿ ಗ್ರಾಮೀಣ ವಸತಿ ಯೋಜನೆಯು ಸಂಪೂರ್ಣಗೊಂಡಿದೆ. ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಪ್ರಗತಿಯೂ ಕುಂಠಿತಗೊಂಡಿದೆ. ಅರ್ಹರಿಗೆ ನಿವೇಶನ ನೀಡುವ ಬಗೆಗಿನ ಮಾತಿಗಂತೂ ಈ ಭಾಗದ ರಾಜಕಾರಣಿಗಳು ತುಂಟಿ ಕಚ್ಚಿಕೊಂಡಿದ್ದಾರೆ. ಈವರೆಗೇ ಯಾವ ಗ್ರಾ.ಪಂ.ಗಳಲ್ಲೂ ಅರ್ಹರಿಗೆ ಒಂದು ನಿವೇಶನ ಹಂಚುವ ಪ್ರಸ್ತಾಪವೇ ಕಂಡು ಬಂದಿಲ್ಲ. ಪ್ರತೀ ವರ್ಷವೂ ಹಲವು ಯೋಜನೆಗಳಡಿ ತಾ.ಪಂ. ಹಾಗೂ ಜಿ.ಪಂ. ಅನುದಾನ ಬಿಡುಗಡೆಯಾಗುತ್ತಿದ್ದು ಈ ಅನುದಾನದ ಬಳಕೆಯ ಬಗ್ಗೆ ಸೇರಿದಂತೆ ಇಂತಹ ಗಹನವಾದ ವಿಚಾರಗಳು ಸಂಸದರು ಸಭೆಯಲ್ಲಿ ಮಾಹಿತಿ ಪಡೆಯುವ ಗೋಜಿಗೂ ಹೋಗದಿದ್ದದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ಸಭಾ ಗೌರವ ಕಳೆದೋಯ್ತು:

   ಯಾವುದೇ ಪ್ರಗತಿ ಪರಿಶೀಲನಾ ಸಭೆಗಳು ಇಲಾಖೆಯ ಅಧಿಕಾರಿಗಳೊಟ್ಟಿಗೆ ಜನಪ್ರತಿನಿಧಿಗಳು ನಡೆಸುವ ಸಭೆಯಾಗಿರಬೇಕು ಎಂಬ ನಿಯಮವಿದೆ. ಆದರೆ ಬುಧವಾರ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭಾ ಗೌರವವೇ ಹೊರಟು ಹೋಗಿತ್ತು. ಸಭೆಯಲ್ಲಿ ಸಂಸದರ ಕೆಲ ಬೆಂಬಲಿಗರು ಕೂಡಾ ಪಾಲ್ಗೊಂಡು ಸಮಸ್ಯೆಗಳೊಟ್ಟಿಗೆ ಚರ್ಚಿಸಲು ಅವಕಾಶ ನೀಡಿದ್ದು ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಂದು ಉದಾಹರಣೆಯೂ ಆಗಿತ್ತು.

   ಅಧಿಕಾರಿಗಳೊಟ್ಟಿಗೆ ಸಂಸದರು ನಡೆಸುತ್ತಿದ್ದ ಚರ್ಚೆಗಳ ಸಂದರ್ಬದಲ್ಲಿ ಸಭೆಗೆ ಕೇಳಿಸುವ ರೀತಿಯಲ್ಲಿ ದ್ವನಿ ವರ್ಧಕ ಹಿಡಿದುಕೊಳ್ಳದ ಅಧಿಕಾರಿಗಳು ಸಂಸದರ ಮುಂದೆ ಹೋಗಿ ಸಣ್ಣ ದನಿಯಲ್ಲಿ ಸಮಸ್ಯೆಗಳನ್ನು ನಿವೇಧಿಸಿಕೊಳ್ಳುತ್ತಿದ್ದ ಪರಿಣಾಮ ಸಭೆಯಲ್ಲಿದ್ದ ಪತ್ರಕರ್ತರಿಗೂ ಅಗತ್ಯ ಮಾಹಿತಿಗಳೇ ಸಿಗದಂತಾಗಿತ್ತು.

   ತಾ.ಪಂ. ಅಧ್ಯಕ್ಷ ಚಂದ್ರಯ್ಯ, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ತಹಶೀಲ್ದಾರ್ ಶ್ರೀಮತಿ ನಾಹಿದಾ ಜಮ್ ಜಮ್, ತಾ.ಪಂ. ಇ.ಓ. ಮೋಹನ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link