ತುಮಕೂರು

ಒಂದು ವಾರದ ಮೇಲಾಯಿತು ಆಟೋಗಳನ್ನು ರಸ್ತೆಗಿಳಿಸಿ, ಆಟೋ ಚಕ್ರ ಉರುಳದೆ ನಮ್ಮ ಬದುಕಿನ ಚಕ್ರ ತಿರುಗುವುದಿಲ್ಲ. ಆಟೋ ಓಡಿಸುವುದನ್ನು ಬಿಟು ನಮಗೆ ಇನ್ನಾವುದೇ ಕಸುಬು ಗೊತ್ತಿಲ್ಲ. ಆದರೆ, ಕೊರೊನಾ ಭೀತಿ ಸಂದರ್ಭದಲ್ಲಿ ಯಾವ ಕಸುಬು, ವ್ಯವಹಾರಗಳೂ ನಡೆಯುತ್ತಿಲ್ಲ.
ಹೀಗಿರುವಾಗ ಮುಂದೆ ನಮ್ಮ ಜೀವನ ಹೇಗೆ?
ತುಮಕೂರಿನ ಆಟೋ ಚಾಲಕರಿಗೆ ಎದುರಾಗಿರುವ ಪ್ರಶ್ನೆ ಹಾಗೂ ಆತಂಕ. ನಗರದ ಸುಮಾರು ಎಂಟು ಸಾವಿರ ಆಟೋ ಚಾಲಕರು ಆಟೋ ಓಡಿಸಿ ದುಡಿಯುತ್ತಾ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ನಿತ್ಯದ ದುಡಿಮೆಯಲ್ಲಿ ಇವರ ಸಂಸಾರ ಸಾಗುತ್ತಿತ್ತು. ಒಂದು ವಾರದಿಂದ ಎಲ್ಲೆಡೆ ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆಟೋಚಾಲಕರು ಮನೆಯಲ್ಲಿ ಕೂರುವಂತಾಗಿದೆ. ದುಡಿಯುವ ಕೈ ಮನೆಯಲ್ಲಿ ಕೈಕಟ್ಟಿ ಕುಳಿತರೆ, ಇವರನ್ನು ನಂಬಿಕೊಂಡ ಉಣ್ಣುವ ಕೈಗಳಿಗೆ ಅನ್ನ ಹೊಂಚುವುದು ಹೇಗೆ?
ಇದು ಕೇವಲ ಆಟೋ ಚಾಲಕರಿಗೆ ಮಾತ್ರವಲ್ಲ. ದಿನಗೂಲಿ ನೌಕರರು, ಫುಟ್ಪಾತ್ ವ್ಯಾಪಾರಿಗಳು, ಹಮಾಲಿಗಳು ಹೀಗೆ, ಹಲವು ವರ್ಗದ ಜನರ ಬದುಕನ್ನು ಕೊರೊನಾ ಕಿತ್ತುಕೊಂಡಿದೆ. ಇವರ ದುಡಿಮೆಗೆ ಕಲ್ಲು ಹಾಕಿದೆ. ಮುಂದೇನು ಎಂಬ ಆತಂಕ ಸೃಷ್ಟಿ ಮಾಡಿದೆ.
ಕೊರೊನಾ ಲಾಕ್ಡೌನ್ ಇನ್ನೂ ಎಷ್ಟು ದಿನ, ಎಲ್ಲಾ ಮುಗಿದು ಹೊಸದಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವೆ ಎನ್ನುವಂತಾಗಿದೆ ಈ ವರ್ಗದವರಿಗೆ.
ಆಟೋ ಚಾಲಕರೂ ಸೇರಿದಂತೆ ಅಸಂಘಟಿತ ಕಾರ್ಮಿಕರ ಬದುಕು ದುಸ್ತರವಾಗಿದೆ. ಇಂತಹವರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು, ಕೊರೊನಾದ ಆತಂಕ ನಿವಾರಣೆ ಆಗುವವರೆಗೂ ಸರ್ಕಾರ ಆಟೋ ಚಾಲಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಆರು ಸಾವಿರ ರೂ.ಗಳನ್ನು ಜಮಾ ಮಾಡಬೇಕು. ಎಂದು ಕಾರ್ಮಿಕ ಮುಖಂಡ ಬಿ. ಉಮೇಶ್ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.ಆಟೋ ಚಾಲಕರೂ ಸೇರಿ ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ನೀಡಬೇಕು. ಆಟೋ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂದು ಹೇಳಿದ್ದಾರೆ.
ತುಮಕೂರು ನಗರದಲ್ಲಿ ಸುಮಾರು ಎಂಟೂವರೆ ಸಾವಿರ ಆಟೋ ಚಾಲಕರಿದ್ದಾರೆ. ಒಂದು ಕುಟುಂಬದಲ್ಲಿ ನಾಲ್ಕೈದು ಜನರೆಂದರೂ ಕನಿಷ್ಟ 35 ಸಾವಿರ ಜನರಿಗೆ ಇದರಿಂದ ತೊಂದರೆಯಾಗಿದೆ ಎಂದು ಬಿಜೆಪಿ ಆಟೋ ಪ್ರಕೋಷ್ಠದ ನಗರ ಸಂಚಾಲಕ ಆರ್. ನವೀನ್ಕುಮಾರ್ ಹೇಳುತ್ತಾರೆ.
ಇಲ್ಲಿನ ಬಹುತೇಕ ಆಟೋಚಾಲಕರಿಗೆ ಸ್ವಂತ ಮನೆ ಇಲ್ಲ. ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಈಗ ಕೈಯಲ್ಲಿ ಕಾಸಿಲ್ಲ, ಜೀವನ ಮಾಡುವುದೇ ಕಷ್ಟವಾಗಿದೆ ಮನೆ ಬಾಡಿಗೆ ಕಟ್ಟುವುದು ಹೇಗೆ ಎನ್ನುವುದೇ ಅಟೋ ಚಾಲಕರ ದೊಡ್ಡ ಸಮಸ್ಯೆಯಾಗಿದೆ. ಇದಲ್ಲದೆ, ದಿನ ಬಳಕೆ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ತರಕಾರಿ ಬೆಲೆ ಒಂದಕ್ಕೆ ಮೂರರಷ್ಟಾಗಿದೆ ಹೀಗಾದರೆ ಆಟೋ ಚಾಲಕರು ಬದುಕುವುದು ಹೇಗೆ ಎಂದು ನವೀನ್ಕುಮಾರ್ ಹೇಳುತ್ತಾರೆ.
ಕೊರೊನಾ ವೈರಾಣು ಜನರ ಬದುಜನ್ನು ಹೈರಾಣಾಗಿಸಿದೆ. ಇದೆಲ್ಲಾ ನಿವಾರಣೆಯಾಗಿ ಹೊಸ ಬದುಕು ರೂಪುಗೊಳ್ಳುವುದು ಯಾವಾಗ ಎನ್ನವಂತಹ ಆತಂಕ ಸ್ಥಿತಿ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
