ಗುಬ್ಬಿ
ಕಳೆದ ಹಲವು ದಿನಗಳಿಂದ ಮಳೆ ಬಾರದೆ ಹುಲುಸಾಗಿ ಬೆಳೆದಿದ್ದ ರಾಗಿ ಬೆಳೆ ಒಣಗಲಾರಂಭಿಸಿದ್ದು ರೈತರು ಮಳೆಗಾಗಿ ಮುಗಿಲತ್ತ ಹೋಡುವಂತಾಗಿದೆ. ಆರಂಭದಲ್ಲಿ ಉತ್ತಮವಾಗಿ ಮಳೆ ಬಂದಿದ್ದರಿಂದ ತಾಲ್ಲೂಕಿನಾಧ್ಯಂತ ರೈತರು ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು ಉತ್ತಮವಾಗಿ ಬೆಳೆಗಳು ಬಂದಿದ್ದವು ಆದರೆ ಇದ್ದಕ್ಕಿದ್ದಂತೆ ಮಳೆ ನಿಂತು ಹೋಗಿದ್ದು ಚಿಗುರೊಡೆದಿದ್ದ ಬೆಳೆಗಳು ಒಣಗುತ್ತಿದ್ದು ರೈತರು ಆತಂಕ್ಕೀಡಾಗಿದ್ದಾರೆ.
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಮತ್ತು ತೋಟದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ ರೈತರು ತಮ್ಮ ಜೀವನಾಧಾರವಾಗಿರುವ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಹರ ಸಾಹಸ ಪಡುವಂತಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಿಲ್ಲದೆ ಕೃಷಿ ಮತ್ತು ತೋಟದ ಬೆಳೆಗಳು ಒಣಗುತ್ತಿರುವುದರ ಜೊತೆಗೆ ತಮ್ಮನ್ನು ಅವಲಂಭಿಸಿರುವ ಜಾನುವಾರುಗಳ ಮೇವು ಮತ್ತು ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರು ಮಳೆಗಾಗಿ ಮುಗಿಲತ್ತ ನೋಡುತ್ತಿದ್ದಾರೆ. ಕಳೆದ ಮಳೆಗಾಲದ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕೃಷಿ ಬೆಳೆಗಳಾದ ರಾಗಿ. ಭತ್ತ, ಜೋಳ ಸೇರಿದಂತೆ ಇತರೆ ದ್ವಿಧಳ ಧಾನ್ಯಗಳನ್ನು ಬೆಳೆಯಲಾಗದ ಕಾರಣ ದನಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಮತ್ತು ಹಾಲಿಗಾಗಿ ರಾಸುಗಳನ್ನು ಸಾಕುತ್ತಿದ್ದು ರಾಗಿ ಮತ್ತು ಭತ್ತದ ಬೆಳೆ ಇಲ್ಲದ ಕಾರಣ ಒಣಹುಲ್ಲಿಗಾಗಿ ಪರದಾಡುವಂತಹ ಸ್ಥಿತಿ ಉಂಟಾಗಿದೆ. ಈ ಹಿಂದೆ ಉತ್ತಮ ಮಳೆಯಾಗುತ್ತಿದ್ದರಿಂದ ಎಲ್ಲೆಂದರಲ್ಲಿ ರೈತರು ರಾಸುಗಳಿಗಾಗಿ ಒಣ ಹುಲ್ಲಿನ ಮೆದೆಗಳನ್ನು ಹಾಕಿ ವರ್ಷವಿಡಿ ರಾಸುಗಳಿಗೆ ಮೇವು ಒದಗಿಸುತ್ತಿದ್ದರು ಆದರೆ ಮಳೆಬಾರದೆ ಕೃಷಿ ಬೆಳೆಗಳನ್ನು ಬೆಳೆಯಲಾಗದೆ ಜಾನುವಾರುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಗೆ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ ಅಲ್ಲದೆ ವಾಡಿಕೆಯಷ್ಟು ಮಳೆ ಬಾರದೆ ಅಂತರ್ಜಲ ಪ್ರಮಾಣ ಸಂಪೂರ್ಣವಾಗಿ ಕುಸಿದಿದ್ದು ಜೀವನಾಧಾರವಾಗಿರುವ ಮತ್ತು ಕಷ್ಟಪಟ್ಟು ಬೆಳೆಸಿದ ತೆಂಗು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಗಳನ್ನು ಕೊರೆಸಿದರೂ ಸಮರ್ಪಕವಾಗಿ ನೀರು ಬಾರದೆ ಫಲಭರಿತ ತೋಟಗಳು ನೀರಿಲ್ಲದೆ ಒಣಗುವಮತಾಗಿವೆ. ತಾಲ್ಲೂಕಿನಾಧ್ಯಂತ ಹಲವಾರು ರೈತರು ಕೃಷಿ ಬೆಳೆಗಳಿಗೆ ನೀರು ಒದಗಿಸಲಾಗದೆ ಕಣ್ಣ ಮುಂದೆಯೆ ಕಷ್ಟಪಟ್ಟು ಬೆಳೆಸಿದ ಬೆಳೆಗಳು ಒಣಗುತ್ತಿರುವುದನ್ನು ನೋಡಿಕೊಂಡು ತಲೆ ಮೇಲೆ ಕೈಹೊತ್ತು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
