ತಿಪಟೂರು : ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ್ ಇನ್ನಿಲ್ಲ

 ತಿಪಟೂರು : 

      ಕಲ್ಪತರು ನಾಡು ಕಂಡ ಅಪರೂಪದ ರಂಗಕರ್ಮಿ, ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಹೃದಯಾಘಾತದಿಂದ ನಿಧನರಾಗಿದ್ದು, ಪತ್ನಿ ಶೀಲಾಶಿವಶಂಕರ್, ವೆನಿಲ್ಲಾ, ಸಹಜ ಎನ್ನುವ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.

      ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಹಾಲ್ಕುರಿಕೆ ಗ್ರಾಮದ ಈರಯ್ಯ, ರಂಗಮ್ಮರವರ ಎರಡನೇ ಪುತ್ರ ಶಿವಶಂಕರ್ ಶಿಕ್ಷಣವನ್ನು ಹಾಲ್ಕುರಿಕೆ ಹಾಗೂ ತಿಪಟೂರಿನಲ್ಲಿ ಮುಗಿಸಿ ನಂತರ ರಂಗಭೂಮಿ ಸೆಳೆತದಿಂದ ನಾಟಕ ಅಭಿನಯದ ಗೀಳು ಹಚ್ಚಿಸಿಕೊಂಡರು. ವಿವಿಧ ರಂಗಕಲೆಗಳಲ್ಲಿ ತೊಡಗಿಸಿಕೊಂಡು, ನಂತರ ಹಾಲ್ಕುರಿಕೆ ಥಿಯೇಟರ್ ಮಿರರ್ ಎನ್ನುವ ಪತ್ರಿಕೆ ಪ್ರ್ರಾರಂಭಿಸಿ ವಿಶಿಷ್ಟ ಬರವಣಿಗೆಗಳ ಮೂಲಕ ಓದುಗರ ಮೆಚ್ಚುಗೆ ಗಳಿಸಿದ್ದರು. ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನ ನಡೆಸಬೇಕು ಎನ್ನುವ ದೃಷ್ಟಿಯಿಂದ ಕೊಪ್ಪಳದಲ್ಲಿ ಹಾಲ್ಕುರಿಕೆ ಥಿಯೇಟರ್ ಎನ್ನುವ ರಂಗನಾಟಕ ಶಾಲೆ ಪ್ರಾರಂಬಿಸಿದ್ದರು. ವಿನೂತನ ಪ್ರಯೋಗಗಳ ಮೂಲಕ ರಂಗವಿಜ್ಞಾನಿ ಎನ್ನುವ ಬಿರುದು ಪಡೆದು, ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಹಲವಾರು ನಾಟಕಗಳನ್ನ ಅಭಿನಯ ಹಾಗೂ ನಿರ್ದೇಶನದ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗ ಸಂಪಾದಿಸಿದ್ದರು.

ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಅವರು, ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಮ್ಮೇಳನ ಯಶಸ್ವಿಗೊಳಿಸಿದರು.

      ಸಾಹಿತಿ, ರಂಗಕರ್ಮಿ, ಪ್ರಗತಿಪರ ಚಿಂತಕ, ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link