ತುಮಕೂರು :
ತುಮಕೂರು ಮಹಾನಗರಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ಗುರುವಾರ ನಡೆಯಿತು.
ಮೇಯರ್ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆ ಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ 1ನೇ ವಾರ್ಡ್ ಸದಸ್ಯೆ ನಳಿನಾ ಇಂದ್ರಕುಮಾರ್ ತೆರಿಗೆ ನಿರ್ಧರಣೆ, ಹಣಕಾಸು ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ನಗರ ಯೋಜನೆ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 28ನೇ ವಾರ್ಡಿನ ಜೆಡಿಎಸ್ ಸದಸ್ಯ ಧರಣೇಂದ್ರಕುಮಾರ್, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾ ಕಾಂಗ್ರೆಸ್ನ 8ನೇ ವಾರ್ಡ್ ಸದಸ್ಯ ನಯಾಜ್ ಅಹಮದ್, ಲೆಕ್ಕ ಪತ್ರ ಸಮಿತಿ ಅಧ್ಯಕ್ಷರಾಗಿ 18ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಮುಜಿದಾಖಾನಂ ಅವರುಗಳು ಅವಿರೋಧ ಆಯ್ಕೆಯಾದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರು ಪಕ್ಷಗಳು ಮೊದಲೇ ಒಡಂಬಡಿಕೆ ಮಾಡಿಕೊಂಡಂತೆ ಆಡಳಿತಾರೂಢ ಬಿಜೆಪಿ-ಜೆಡಿಎಸ್ ತಲಾ ಒಂದು ಸ್ಥಾಯಿ ಸಮಿತಿಯನ್ನು ಹಂಚಿಕೊಂಡರೆ, ಕಾಂಗ್ರೆಸ್ಗೆ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಾಯಿತು. ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು, ಆಯುಕ್ತರು ಹಾಗೂ ಸಿಬ್ಬಂದಿ ವರ್ಗದವರು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನುಅಭಿನಂದಿಸಿದರು.
ನಯಾಜ್ ಅಹಮದ್ ಹ್ಯಾಟ್ರಿಕ್ ಅಧ್ಯಕ್ಷ:
3ನೇ ಬಾರಿಗೆ (ಹ್ಯಾಟ್ರಿಕ್) ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸದಸ್ಯ ನಯಾಜ್ ಅಹಮದ್ ಅವರು ಗುರುವಾರದಂದೇ ಸಮಿತಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರ ನಗರಸಭೆಯಿದ್ದಾಗಲೂ ಪಾಲಿಕೆಯಲ್ಲೂ ಎರಡು ಅವಧಿಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ನಗರದ ಸ್ವಚ್ಛತೆ, ಜನರ ಆರೋಗ್ಯದ ಕಡೆ ಕಾಳಜಿ ವಹಿಸಬೇಕಾದ ಅದಕ್ಕೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ ನನ್ನ ಸಮಿತಿ ಮೇಲಿದೆ. ಎಲ್ಲಾ ಸದಸ್ಯರ ವಿಶ್ವಾಸಕ್ಕೆ ಪಡೆದು, ಸ್ಮಾರ್ಟ್ಸಿಟಿ ಸೇರಿ ಕೆಲವು ಅರೆಬರೆ ಕಾಮಗಾರಿಗಳಿಂದಾಗಿ ಡಸ್ಟ್ ಸಿಟಿಯಾಗಿರುವ ನಗರಕ್ಕೆ ಕಾಯಕಲ್ಪ ಕೊಡಲು ಕ್ರಮವಹಿಸಲಾಗುವುದು. ಕೋವಿಡ್ 2ನೇ ಅಲೆ ಆತಂಕದ ಸಂದರ್ಭದಲ್ಲಿ ಸ್ವಚ್ಛತೆ , ಕಸ ವಿಲೇವಾರಿಗೆ ಆದ್ಯತೆ ಕೊಡಲಾಗುವುದು. ಬೀದಿನಾಯಿಗಳು, ಹಂದಿಗಳಹಾವಳಿಗೂ ಕ್ರಮವಹಿಸುವುದಾಗಿ ತಿಳಿಸಿದರು. ಪಾಲಿಕೆ ಹೊರಗಡೆ ಅವಿರೋಧ ಆಯ್ಕೆಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.
1996ರಲ್ಲಿ ಹೊಸದಾಗಿ ನಗರಕ್ಕೆ ಸೇರ್ಪಡೆಯಾದ 22 ಹಳ್ಳಿಗಳಿಗೆ, ನಗರ ಹೊರವಲಯದ ವಾರ್ಡ್ಗಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ನಗರ ಯೋಜನೆ ಸ್ಥಾಯಿ ಸಮಿತಿಯಲ್ಲಿ ಈ ಸಂಬಂಧ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು.
-ಧರಣೇಂದ್ರಕುಮಾರ್, ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರು.
ಹಣಕಾಸು ಸ್ಥಾಯಿ ಸಮಿತಿ ಮಹತ್ತರ ಹೊಣೆಗಾರಿಕೆಯಿದ್ದು, ತುಮಕೂರು ನಗರದ ನಾಗರಿಕರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೂಢೀಕರಣದ ಜತೆಗೆ ಸಮರ್ಪಕ ವೆಚ್ಚ ಮಾಡಲು ಬಜೆಟ್ ತಯಾರಿಸಲಾಗುವುದು. ವಿಶೇಷವಾಗಿ ಹಿಂದುಳಿದ ಹೊರವಲಯದ ವಾರ್ಡ್ಗಳ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ಕಾರ್ಪೋರೇಟರ್ ಆಗಿದ್ದ ನನಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
-ನಳಿನಾ ಇಂದ್ರಕುಮಾರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು.
ನೂತನ ಮೇಯರ್, ಉಪಮೇಯರ್ ಆಯ್ಕೆ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಪಾಲಿಕೆಯಲ್ಲಿ ಪೂರ್ಣ ಪ್ರಮಾಣದ ಆಡಳಿತ ಅಸ್ಥಿತ್ವಕ್ಕೆ ಬಂದಿದ್ದು, ತುಮಕೂರು ನಗರದ ಸಮಗ್ರ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ಕೊಡಲಾಗುವುದು. ಖಾತೆ ಸರಳೀಕರಣ, ಅಭಿವೃದ್ಧಿ ಕಾಮಗಾರಿಗೆ ವೇಗ ಕೊಡಲು ಎಲ್ಲರ ಸಹಕಾರದೊಂದಿಗೆ ಶ್ರಮಿಸಲಾಗುವುದು.
-ಬಿ.ಜಿ.ಕೃಷ್ಣಪ್ಪ, ಮಹಾನಗರಪಾಲಿಕೆ ಮೇಯರ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
