ಟೋಲ್ ಗೇಟ್ : ವಾಹನ ಮಾಲೀಕರ ಜೇಬಿಗೆ ನಿತ್ಯ ಕತ್ತರಿ

      ಸರ್ವೀಸ್ ರಸ್ತೆ ನಿರ್ಮಿಸದೆ ವಾಹನ ಸವಾರರಿಗೂ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡದೆ ಟೋಲ್ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳಿಗೆ ಅವೈಜ್ಞಾನಿಕವಾಗಿ ಸುಂಕ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ.

     ಈಗಾಗಲೇ ಮಧುಗಿರಿಯಿಂದ ಬೆಂಗಳೂರು-ತುಮಕೂರು ಮಾರ್ಗವಾಗಿ ಹೋಗಬೇಕಾದರೆ ಎರಡು ಟೋಲ್ ಪ್ಲಾಜಾಗಳು ಪ್ರತ್ಯಕ್ಷವಾಗುತ್ತವೆ. ಈ ಟೋಲ್‍ಗಳಲ್ಲಿ ಫಾಸ್ಟ್‍ಟ್ಯಾಗ್‍ನ ವ್ಯವಸ್ಥೆ ಕಲ್ಪಿಸ ಕೊಡಲಾಗಿದೆ. ಇದರಿಂದಾಗಿ ಕೆಲ ವಾಣಿಜ್ಯ ಬಳಕೆ ಹಾಗೂ ಮತ್ತಿತರ ವಾಹನ ಮಾಲೀಕರೂ ಕಿರಿಕಿರಿ ಅನುಭವಿಸುವಂತಾಗಿದೆ.

      ಟೋಲ್ ಪ್ಲಾಜಾಗಳಲ್ಲಿ ಸರಿಯಾದ ನೆರಳಿನ ವ್ಯವಸ್ಥೆ ಇಲ್ಲದಿರುವುದು ಕಂಡು ಬರುತ್ತಿದ್ದು, ಸೆಕ್ಯೂರಿಟಿಗಳ ಪರಿಸ್ಥಿತಿ ಹೇಳತೀರದಾಗಿದೆ. ಬೆಳಗಿನ ಸಮಯದಲ್ಲಿ ನಾಲ್ಕು ಪಥಗಳೂ ಕಾರ್ಯನಿರ್ವಹಿಸುತ್ತವೆ. ರಾತ್ರಿಯಾದರೆ ಸಾಕು ಇಲ್ಲಿ ಎರಡು ಪಥಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಈ ಟೋಲ್ ಗೇಟ್ ಗಳಲ್ಲಿ ತುರ್ತು ವಾಹನಗಳು ಸಾಗಲು ಹರ ಸಾಹಸ ಪಡಬೇಕಾಗಿದೆ.

      ಇನ್ನೂ ಪ್ಲಾಜಾಗಳಲ್ಲಿ ವಾಹನ ಸವಾರ, ಸಿಬ್ಬಂದಿಗೆ ಸಂಸ್ಥೆಯ ವತಿಯಿಂದ ದೊರೆಯ ಬಹುದಾದ ಮೂಲಭೂತ ಸೌಲಭ್ಯಗಳು ಅಷ್ಟಾಗಿ ದೊರೆಯುತ್ತಿಲ್ಲ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಇರುವ ಸೂಚನಾ ಫಲಕಗಳು ಹಾಳಾಗಿವೆ, ರಸ್ತೆಯಲ್ಲಿನ ಬಿಳಿ ಪಟ್ಟಿ ಮಂಕಾಗಿದೆ, ಅಕ್ಕ-ಪಕ್ಕ ಅಳವಡಿಸಿದ್ದ ತಡೆ ಗೋಡೆಗಳು ಹಾಳಾಗಿದ್ದರೂ ಸಂಬಂಧಪಟ್ಟ ರಸ್ತೆ ನಿರ್ವಹಣೆಯವರು ಮುಂದಾಗುತ್ತಿಲ್ಲ ಸವಾರರು ಪಾವತಿಸಿದ ಹಣವೂ ವ್ಯರ್ಥವಾಗುತ್ತಿದ್ದು, ರಸ್ತೆಗಳಾಗಲಿ ಪ್ಲಾಜಾಗಳಾಗಲಿ ಅಭಿವೃದ್ಧಿ ಕಾಣುತ್ತಿಲ್ಲ.

     ಸಾಮಾನ್ಯವಾಗಿ ಬಿಎಸ್ 4 ಮಾಡೆಲ್‍ನ ವಾಣಿಜ್ಯ ಬಳಕೆಯ ಕಾರೊಂದನ್ನು ಚಲಾಯಿಸುವ ಮಾಲೀಕ ಅಥವಾ ಚಾಲಕ ಸಾಮಾನ್ಯವಾಗಿ ಎರಡು ವರ್ಷಕ್ಕೆ ಒಂದು ಸಾರಿ ಎಫ್‍ಸಿ ಗಾಗಿ 3000, ಕಾರಿನ ಮಾಸಿಕ ಕಂತು 12,510 ರೂ. ಸಾಲದ ಮೊತ್ತ, ಆಲ್ ಇಂಡಿಯಾ ಅಥವಾ ಕರ್ನಾಟಕ ಪರ್ಮಿಟ್‍ಗಾಗಿ 1800 ರೂ. ವಿಮಾ ಮೊತ್ತ 20300 ರೂ, ಕಾರಿನ 10,000 ಸಾವಿರ ಕಿ.ಲೋ.ಮೀಟರ್‍ಗೆ ಸರ್ವಿಸ್‍ಗಾಗಿ 3000 ರೂ. ಹಾಗೂ ನಾಲ್ಕು ಟೈರ್‍ಗಳಿಗಾಗಿ 17,000 ರೂ. ಗಳನ್ನು ಒಂದು ವರ್ಷಕ್ಕೆ ವೆಚ್ಚ ಮಾಡಬೇಕಾಗಿದೆ.

      ಕೊರೋನಾ ರೋಗದ ನಡುವೆಯು ಈ ಚಾಲಕ ಅಥವಾ ಮಾಲೀಕ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಹಗ್ಗ-ಜಗ್ಗಾಟದಲ್ಲಿ ವರ್ಷಕ್ಕೆ ಇಷ್ಟೂ ಹಣ ಖರ್ಚು ಮಾಡಿ ತನ್ನ ಸಂಸಾರದ ನೌಕೆಯ ಜೊತೆಯಲ್ಲಿ ಟೋಲ್ ಫೀ ಸಹ ಪಾವತಿ ಮಾಡುತ್ತಾ ನಾವಿಕನಾಗಿ ಜೀವನ ದೂಡಬೇಕಾಗಿದೆ.

      ಇನ್ನೂ ಸರ್ಕಾರದ ನಿಯಮದಂತೆ ಫಾಸ್ಟ್‍ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದ್ದು, ವಾಣಿಜ್ಯ ಬಳಕೆಯ ವಾಹನಗಳಲ್ಲಿನ ಫಾಸ್ಟ್‍ಟ್ಯಾಗ್‍ನಲ್ಲಿ ಹಣ ಟೋಲ್‍ಗೇಟ್‍ಗಳಲ್ಲಿ ಸಂದಾಯವಾದರೆ ಗ್ರಾಹಕರು ನಮಗೂ ಅದಕ್ಕೂ ಸಂಬಂಧವಿಲ್ಲ, ಯಾವುದೇ ರಶೀದಿ ನೀವು ನಮಗೆ ನೀಡಿಲ್ಲ ಎಂದು ಸಬೂಬು ಹೇಳಿಕೊಂಡು ವಾದ-ವಿವಾದಗಳು ನಡೆದ ಉದಾಹರಣೆಗಳು ಕಂಡು ಬಂದಿವೆ. ಒಂದು ವೇಳೆ ಫಾಸ್ಟ್‍ಟ್ಯಾಗ್ ಇಲ್ಲದ ವಾಹನ ಅದೇ ಸರತಿ ಸಾಲಿನ ರಸ್ತೆಯಲ್ಲಿ ಹೋದರೆ ಒನ್ ಟೂ ಡಬಲ್ ಹಣ ಪಾವತಿಸ ಬೇಕಾಗಿದೆ.

      ಫಾಸ್ಟ್ ಟ್ಯಾಗ್ ಜಾರಿಯಿಂದಾಗಿ ಟೋಲ್‍ಗಳಲ್ಲಿ ಪ್ರತಿ ದಿನ ಪ್ರಿಂಟರ್ ಮತ್ತು ಗ್ರಾಹಕರಿಗೆ ನೀಡುವ ರಶೀದಿಗಳು, ವಿದ್ಯುತ್, ಸಮಯಾವಕಾಶ, ಸಿಬ್ಬಂದಿ ಕೊರತೆ ನೀಗಿಸಿದಂತಾಗಿದ್ದು, ಅದರ ಲಾಭ ಸಂಸ್ಥೆಗೆ ಸೇರಲಿದೆ. ಇನ್ನೂ ಬರಗಾಲ ಪೀಡಿತ ಜಿಲ್ಲೆಯಾಗಿರುವ ರಾಜ್ಯ ಹೆದ್ದಾರಿ 03ರಲ್ಲಿ ಮಧುಗಿರಿಯಿಂದ ತುಮಕೂರು 110 ರೂ, ಮಧುಗಿರಿಯಿಂದ ಬೆಂಗಳೂರಿಗೆ ಪಾಸ್ಟ್ ಟ್ಯಾಗ್ ಇಲ್ಲವೆಂದರೆ 205 ರೂ. ಎರಡು ಟೋಲ್‍ಗಳ ಮಧ್ಯೆ ಊರುಗಳಿರುವ ಜನರು ಕಷ್ಟ ಪಟ್ಟು ದುಡಿದ ಹಣವನ್ನು ಇಲ್ಲಿ ಬಂದು ಸುರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆ ಹಾದು ಹೋಗಿರುವ ಸಂಬಂಧಪಟ್ಟ ಜನ ಪ್ರತಿನಿಧಿಗಳು ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ.

      60 ಕಿಲೋ ಮೀಟರ್ ಒಂದರಂತೆ ಟೋಲ್ ಇರಬೇಕಾಗಿದೆ. ಆದರೆ ಮಧುಗಿರಿ ತುಮಕೂರಿನ ರಸ್ತೆಯಲ್ಲಿ 20 ಕಿ.ಮೀ.ಅಂತರದಲ್ಲಿ 2 ಟೋಲ್ ನಿರ್ಮಾಣ ಮಾಡಿ ಸುಂಕ ವಸೂಲಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಆದಷ್ಟೂ ಸಂಬಂಧಪಟ್ಟವರು ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಿ ಯಾವುದಾದರೂ ಒಂದು ಕಡೆ ಮಾತ್ರ ಸುಂಕ ವಸೂಲಿಗೆ ಮುಂದಾಗ ಬೇಕು.

-ಶಿವಕುಮಾರ್‍ಎ., ತಾ.ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ.

ಕೆಶಿಪ್‍ಗೆ ಸೇರಿದ ಮಧುಗಿರಿ-ತುಮಕೂರು ರಸ್ತೆಯಲ್ಲಿ ಇರುವ ಟೋಲ್ ಕೇವಲ ಜನರ ಹಣ ಪೀಕುವ ಕೇಂದ್ರಗಳಾಗಿವೆ. ಈ ಟೋಲ್‍ಗಳಿಂದ ದೊರೆಯಬಹುದಾದ ಕನಿಷ್ಠ ಸೌಲಭ್ಯಗಳು ಇಲ್ಲವಾಗಿವೆ. ಯಾವುದಾದರೂ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್ ವ್ಯವಸ್ಥೆಯೂ ಇಲ್ಲ, ಇನ್ನೂ ಅಪಘಾತವಾದರೆ ದೇವರೆ ದಿಕ್ಕು.

-ಬಾಬು, ಹೊಯ್ಸಳ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ

      ಖಾಸಗಿ ಬಸ್‍ನವರ ಸಮಸ್ಯೆ ಹೇಳಿ ಕೊಳ್ಳುವಾಗಿಲ್ಲ ಹಾಗೂ ಕೇಳುವವರೂ ಇಲ್ಲ. 2 ಟೋಲ್‍ಗಳಿಂದಾಗಿ ನಮಗೆ ನೀಡಿರುವ ಅವಧಿಯಲ್ಲಿ ಮಾಸಿಕ ಟೋಲ್ ಪಾಸ್ ಪಡೆದಿದ್ದರೂ ಸಹ 10 ರಿಂದ 12 ನಿಮಿಷ ಪ್ರತಿ ದಿನ ಒಂದು ಸಿಂಗಲ್‍ಗೆ ವ್ಯರ್ಥವಾಗುತ್ತಿದ್ದು, ಬಸ್‍ಗಳಿಗೂ ಹೆಚ್ಚು ಹೊಡೆತವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಟೋಲ್ ಫೀ ಹೆಚ್ಚಾದರೆ ದೇವರೆ ಗತಿ.

-ಹೆಸರು ಹೇಳಲಿಚ್ಚಿಸದ ಖಾಸಗಿ ಬಸ್ ಮಾಲೀಕ.

Recent Articles

spot_img

Related Stories

Share via
Copy link