ಸಿದ್ದರಬೆಟ್ಟದ ವಾನರಗಳಿಗೆ ಆಹಾರ ವಿತರಣೆ

 ಮಧುಗಿರಿ : 

      ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಿದ್ದರಬೆಟ್ಟದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ವಾನರ ಸೈನ್ಯಕ್ಕೆ ಬರಪೂರ ಆಹಾರವನ್ನು ವಿತರಿಸಿದರು.

      ಪಟ್ಟಣದ ಗೌರಿಬಿದನೂರು ಗೇಟ್ ಬಳಿಯ ಯುವಕರ ತಂಡ ಪೊಲೀಸ್ ಮುಖ್ಯ ಪೇದೆ ಕುಮಾರ್‍ರವರ ನೇತೃತ್ವದಲ್ಲಿ ಪಟ್ಟಣದಲ್ಲಿನ ನಾಗರಿಕರಿಂದ ಸಂಗ್ರಹಿಸಲಾದ ಕಡಲೆ ಕಾಯಿ, ಮಾವಿನ ಕಾಯಿ, ಕ್ಯಾರೆಟ್, ಸೌತೆಕಾಯಿ ಮತ್ತಿತರ ಹಣ್ಣು-ಹಂಪಲು, ತರಕಾರಿಗಳನ್ನು ಸಿದ್ದರ ಬೆಟ್ಟದಲ್ಲಿರುವ ವಾನರ ಸೈನ್ಯಕ್ಕೆ ಹಂಚಲಾಯಿತು.

ಎಲ್ಲೆಲ್ಲೂ ಹಸಿವಿನ ಹಾಹಾಕಾರ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಮಾತು ಬಾರದ ಮೂಕ ಪ್ರಾಣಿಗಳ ರೋದನೆ ಹೇಳತೀರದ್ದಾಗಿದೆ. ಈ ಹಿಂದೆ ದೇವಾಲಯಗಳಿಗೆ ಭಕ್ತರು ತಂಡೋಪ ತಂಡಗಳಾಗಿ ದೇವರ ದರ್ಶನಕ್ಕೆ ಆಗಮಿಸುತ್ತಿದ್ದರು. ಭಕ್ತಾದಿಗಳು ನೀಡುತ್ತಿದ್ದ ಆಹಾರಕ್ಕೆ ಬೆಟ್ಟದಲ್ಲಿನ ವಾನರಗಳು ಅವಲಂಬಿತವಾಗಿದ್ದವು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂತಹ ವಿಷಮ ಪರಿಸ್ಥಿತಿಯಲ್ಲಿ ವಾನರಗಳಿಗೆ ಆಹಾರದ ಕೊರತೆ ಕಂಡು ಬರುತ್ತಿದೆ.

      ಮಾರುಕಟ್ಟೆ ಇಲ್ಲದೆ ತರಕಾರಿಗಳನ್ನು ಬೆಳೆದವರು ಅಲ್ಲಲ್ಲಿ ಎಸೆಯುವ ಬದಲು ಸ್ವಯಂ ಪ್ರೇರಿತರಾಗಿ ನೀಡಿದರು. ಇವುಗಳನ್ನು ಅನಾವಶ್ಯಕವಾಗಿ ಅಪವ್ಯಯ ಮಾಡುವ ಬದಲು ಪ್ರಾಣಿಗಳಿಗೆ ಆಹಾರ ಒದಗಿಸಲು ಇಲ್ಲಿನ ಸ್ಥಳೀಯರು ಮುಂದಾಗಿರುವುದು ಶ್ಲಾಘನೀಯ. ಲಾಕ್ ಡೌನ್ ಆಗಿರುವ ಪರಿಣಾಮ ನಮಗೂ ಕೈಯಲ್ಲಿ ಕೆಲಸವಿಲ್ಲ, ಕಾಲ ಹರಣ ಮಾಡಲು ಆಗುತ್ತಿಲ್ಲ. ಪೋಲೀಸರು ಮತ್ತು ನಮ್ಮ ಸ್ನೇಹಿತರ ಸಹಕಾರದಿಂದ ಸಿದ್ದರಬೆಟ್ಟವನ್ನು ಆಯ್ಕೆ ಮಾಡಿ ತಂಡ ಕಟ್ಟಿಕೊಂಡು ಬೆಟ್ಟವನ್ನು ಏರಿ ಮೂಟೆಗಳನ್ನು ಹೊತ್ತು ನಮ್ಮ ಕೈಲಾದಷ್ಟು ವಾನರಗಳಿಗೆ ಆಹಾರವನ್ನು ಹಂಚಿದೆವು ಎಂದು ರಂಗನಾಥ್ ತಿಳಿಸಿದರು.

      ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳಿಗೆ ದಾನಿಗಳು ಕೈ ಜೋಡಿಸಿದರೆ ತಿಮ್ಲಾಪುರ ಕರಡಿ ಧಾಮಕ್ಕೆ ಹಲಸು, ಹಣ್ಣು-ಹಂಪಲುಗಳನ್ನು, ಏಕಶಿಲಾ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿರುವ ವಾನರ ಸೈನ್ಯಕ್ಕೂ ಆಹಾರ ವಿತರಿಸಲು ನಮ್ಮ ಸ್ನೇಹಿತರು ಸಿದ್ದರಿದ್ದಾರೆ. ಈ ರೀತಿಯಾಗಿ ಅವುಗಳು ವಾಸವಿರುವ ಸಮೀಪದ ಸ್ಥಳಗಳಿಗೆ ಆಹಾರ, ನೀರು ಒದಗಿಸಿದರೆ ಪಟ್ಟಣಕ್ಕೆ ಬರುವುದನ್ನು ಹಾಗೂ ಮನುಷ್ಯರ ಮೇಲೆ ಆಗಬಹುದಾದಂತಹ ಹಲ್ಲೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದಾಗಿದೆ ಎಂದು ಮುಖ್ಯ ಪೇದೆ ಕುಮಾರ್ ತಿಳಿಸಿದ್ದಾರೆ.

     ಪೊಲಿಸರು ಮತ್ತು ನಾಗರಿಕರ ಈ ಕಾರ್ಯಕ್ಕೆ ಸಿದ್ದರಬೆಟ್ಟ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯಾದ ರೇವಣ್ಣ, ಜಗದೀಶ್, ಮುಖಂಡರಾದ ರಂಗನಾಥ್, ನರಸಿಂಹ, ಶ್ರೀನಿವಾಸ್, ಶಶಿಕುಮಾರ್, ನಾರಾಯಣ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link