ತುಮಕೂರು:
ಮುಗಿಯದ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ, ಉಕ್ರೇನ್ನಲ್ಲಿ ಪ್ರತಿ ಕ್ಷಣವು ಸ್ಫೋಟಗೊಳ್ಳುತ್ತಿದ್ದ ಬಂದೂಕಿನ ಸಪ್ಪಳ, ಮತ್ತೊಂದು ಕಡೆ ಪ್ರಾಣ ಉಳಿಸಿಕೊಳ್ಳಲು ಪರದಾಟ, ಪ್ರಾಣ ಉಳಿಸಿಕೊಳ್ಳಲು ವಲಸೆ ಹೋಗುತ್ತಿರುವ ಸಾವಿರಾರು ಕುಟುಂಬಗಳು. ಈ ನಡುವೆ ತಮ್ಮ ಸ್ವಂತ ದೇಶ ತೊರೆದು ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ಬಂದಿರುವ ವಿದ್ಯಾರ್ಥಿಗಳು ವಸತಿ, ಆಹಾರವಿಲ್ಲದೆ ನಿರಾಶ್ರಿತರಾಗಿರುವುದು.
ಪ್ರತಿ ಕ್ಷಣವೂ ಜೀವ ಭಯದಲ್ಲೇ ಬದುಕಿ, ಕೊನೆಗೂ ಯುದ್ಧ ಪ್ರದೇಶದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬರುತ್ತಿರುವ ಮತ್ತು ಬಂದಿರುವ ವಿದ್ಯಾರ್ಥಿಗಳು. ಇವರುಗಳ ಪೈಕಿ ತುಮಕೂರು ಜಿಲ್ಲೆಯ ವಿದ್ಯಾರ್ಥಿಯೂ ಸಹ ಒಬ್ಬರು. ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ಗಣೇಶ್ ಸುರಕ್ಷಿತವಾಗಿ ನಗರಕ್ಕೆ ಬಂದಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಇವರು ಮೂಲತಃ ತುಮಕೂರಿನ ಜಿಲ್ಲೆಯ ವಿದ್ಯಾನಗರದ ನಿವಾಸಿ. ಇವರು ವೈದ್ಯಕೀಯ ಶಿಕ್ಷಣಕ್ಕಾಗಿ ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಉಕ್ರೇನ್ಗೆ ಹೋಗಿದ್ದರು. ಇಂತಹ ಸಂದರ್ಭದಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ನಡೆದು, ರಷ್ಯಾ ದಾಳಿಯಿಂದ ಹಲವಾರು ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿ, ಅಲ್ಲಿಂದ ಮತ್ತೆ ತಮ್ಮ ಊರಿಗೆ ಹಿಂತಿರುಗಿದ್ದಾರೆ.
ಎಂಬಿಬಿಎಸ್ ಮಾಡಲು ಉಕ್ರೇನ್ಗೆ ಹೋಗಿದ್ದು, ನಾನು ಅಲ್ಲಿ ನಾಲ್ಕು ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದೆ. ಕಳೆದ ವರ್ಷವಷ್ಟೆ ಊರಿಗೆ ಬಂದಿದ್ದು, ಯುದ್ಧ ಪ್ರಾರಂಭದ ಸುದ್ದಿ ತಿಳಿದು ಆತಂಕವಾಗಿತ್ತು ಎಂದು ಗಣೇಶ್ ಪ್ರಜಾಪ್ರಗತಿಯೊಂದಿಗೆ ಅನಿಸಿಕೆ ಹಂಚಿಕೊಂಡರು.
ಆದರೆ ನಮ್ಮ ಶಿಕ್ಷಕರು ಇಲ್ಲೆ ಇರಿ, ಯಾವ ಯುದ್ಧವೂ ನಡೆಯುವುದಿಲ್ಲ ಎಂದು ಹೇಳಿದರು.
ಆದರೂ ಸಹ ನಾವು ವಿಮಾನ ನಿಲ್ದಾಣದಲ್ಲಿ ಟಿಕೆಟ್ ಬುಕ್ ಮಾಡಿಕೊಂಡೆವು. ಆದರೆ ಯುದ್ಧ ನಡದೇ ಬಿಟ್ಟಿತು. ಯುದ್ಧ ನಡೆದ ಸಂದರ್ಭದಲ್ಲಿ ಕೀವ್ನÀಲ್ಲಿ ಸಿಲುಕಿಕೊಂಡಿದ್ದೆವು. ಯುದ್ಧ ಪ್ರಾರಂಭವಾದಾಗಿನಿಂದ ಹೊರಗೆ ಹೋಗುವಂತಿರಲಿಲ್ಲ. ನಿಗದಿತ ಸಮಯದಲ್ಲಿ ಸೈರನ್ ಕೂಗಿದಾಗ ಮಾತ್ರ ಹೊರಗೆ ಹೋಗಿ ವಸ್ತುಗಳನ್ನು ಖರೀದಿಸಲು ಅವಕಾಶವಿತ್ತು.
ಸಂಕಷ್ಟಕ್ಕೆ ಸಿಲುಕಿದ್ದ ನಮಗೆ ಭಾರತ ಸರ್ಕಾರದ ರಾಯಭಾರಿ ಕಚೇರಿಯಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಉಕ್ರೇನ್ನ ಸ್ಥಳೀಯರು ಸಹ ಸಹಾಯ ಮಾಡುತ್ತಿದ್ದರು. ನಮ್ಮ ಬಳಿ ಹಣವಿದ್ದರೂ ಅಗತ್ಯ ವಸ್ತು ಖರೀದಿಸಲು ಅವಕಾಶ ಇರಲಿಲ್ಲ. ಸೆಕೆಂಡ್ಗೊಮ್ಮೆ ಸೈರನ್ ಹೊಡೆದಾಗ ಬಂಕರ್ಗಳಲ್ಲಿ ಜೀವ ಉಳಿಸಿಕೊಂಡು ಬದುಕುತ್ತಿದ್ದೆವು. ಅಂತಹ ಸಂದರ್ಭದಲ್ಲಿ ನಮಗೆ ಸಹಕರಿಸಿದ ಎಲ್ಲ್ಲರಿಗೂ ಧನ್ಯವಾದ ಹೇಳುತ್ತೇನೆ.
ನಮ್ಮ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಲು ಬಡವರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದೇಶಕ್ಕೆ ಹೋಗುತ್ತಿದ್ದಾರೆ. ಈಗ ನಾಲ್ಕು ವರ್ಷ ಮುಗಿದಿದೆ. ಅಲ್ಲಿಗೆ ಮತ್ತೆ ಹೋಗುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ ಎಂಬ ಗೊಂದಲದಲ್ಲಿ ಇದ್ದೇವೆ. ಸರ್ಕಾರ ಇದಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯಬೇಕು, ವಿದ್ಯಾಭ್ಯಾಸ ಪೂರ್ಣಗೊಳಿಸಲು ನೆರವಾಗಬೇಕು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
