ಬೆಂಗಳೂರು: ನೂತನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗಾದ ಅಪಮಾನದ ಕುರಿತು ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು, ಈಗ ಬಸವಣ್ಣನವರ ವಿಚಾರದತ್ತ ವಾಲಿದೆ. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಕೂಡಲೇ ತಡೆಯುವಂತೆ ತರಬಾಳುವಿನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಈ ಹಿಂದಿನಂತೆ 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಕುರಿತು ಪಾಠವಿದ್ದು, ಹಿಂದಿನ ಪಠ್ಯಪುಸ್ತಕದಲ್ಲಿದ್ದ ಬಸವಣ್ಣನವರ ಪಾಠಕ್ಕೂ ಪರಿಷ್ಕೃತಗೊಂಡ ಪುಸ್ತಕದಲ್ಲಿರುವ ಪಾಠಕ್ಕೂ ವ್ಯತ್ಯಾಸ ಕಂಡುಬಂದಿದೆ ಎಂದಿದ್ದಾರೆ.
ಬಸವಣ್ಣನವರ ಕುರಿತ ಪಾಠದಲ್ಲಿ ಕೆಲವು ಪ್ರಮುಖ ಸಾಲುಗಳನ್ನು ತೆಗೆದು, ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ ಎಂದು ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಕಿಡಿಕಾರಿದ್ದಾರೆ.








