ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಜನರ ತೆರಿಗೆ ಹಣವನ್ನು ಯಾವ ರೀತಿ ಲೂಟಿ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಚರ್ಚೆ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರಲ್ಲೇ ಒಳಜಗಳ ಆರಂಭವಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ನಡುವೆ ಪೈಪೋಟಿ ನಡೆದಿದೆ. ಎಲ್ಲರೂ ದೆಹಲಿಗೆ ಓಡಾಡುತ್ತಿದ್ದಾರೆ.
ಸಿದ್ದರಾಮಯ್ಯ ಬಳಿಕ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು. ದೆಹಲಿಗೆ ತೆರಳಿದ್ದ ರಾಜ್ಯ ಕಾಂಗ್ರೆಸ್ ಮುಂಖಂಡರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮತ್ತು ಹಲವು ಹಿರಿಯ ಸಚಿವರು ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ಬಿಜೆಪಿ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಈ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಎಂದಿಗೂ ಹೇಳಿಲ್ಲ, ನಾವು ಯಾವುದೇ ಶಾಸಕರನ್ನು ಸಂಪರ್ಕಿಸಿಲ್ಲ ಅಥವಾ ಭೇಟಿ ಮಾಡಿಲ್ಲ, ನಾವು ಯಾವ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದೇವೆ? ನಾವು ಯಾರನ್ನು ಭೇಟಿ ಮಾಡಿದ್ದೇವೆ ಎಂಬ ಬಗ್ಗೆ ಅವರೇ ತಿಳಿಸಲಿ, ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಒಳಜಗಳಬಗ್ಗೆ ನಾನು ಪ್ರತಿದಿನ ಪತ್ರಿಕೆಗಳು ಮತ್ತು ದೂರದರ್ಶನ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಅಲ್ಲಿ ಮ್ಯೂಸಿಕಲ್ ಚೇರ್ ನಡೆಯುತ್ತಿದೆ ಎಂದು ಅಶೋಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯಪಾಲರು ಅನುಮೋದನೆಗೆ ಕಳಿಸಿದ್ದ ಬಿಲ್ ಗಳನ್ನು ವಾಪಸ್ಸು ಮಾಡಿದ್ದಕ್ಕೆ ಸರ್ಕಾರದ ನಿರ್ಲಕ್ಷ್ಯತನ ಕಾರಣವೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ ಎಂದರು. ಸರ್ಕಾರ ಬಿಲ್ಗಳನ್ನು ಸರ್ಕಾರಕ್ಕೆ ಕಳಿಸಿದ ಬಳಿಕ ಸಾರ್ವಜನಿಕರು ಅವುಗಳ ಬಗ್ಗೆ ಆಕ್ಷೇಪಣೆ ಮತ್ತು ದೂರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಿರುತ್ತ್ತಾರೆ. ಆ ಆಕ್ಷೇಪಣೆಗಳ ಆಧಾರದಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಸ್ಪಷ್ಟೀಕರಣಗಳನ್ನು ಕೇಳಿರುತ್ತಾರೆ. ಸರ್ಕಾರ ಮುಖ್ಯ ಕಾರ್ಯದರ್ಶಿ ಮತ್ತು ಬೇರೆ ಅಧಿಕಾರಿಗಳು ರಾಜ ಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮಾಹಿತಿ ನೀಡಿ ಗೊಂದಲಗಳನ್ನು ನಿವಾರಿಸಿದರೆ ಅವರು ಅನುಮೋದನೆ ನೀಡುತ್ತಾರೆ ಎಂದು ಅಶೋಕ ಹೇಳಿದರು.
ಸ್ಪಷ್ಟೀಕರಣ ಕೇಳುವುದು ರಾಜ್ಯಪಾಲರಿಗಿರುವ ಸಂವಿಧಾನದತ್ತ ಹಕ್ಕು ಮತ್ತು ಅಧಿಕಾರ. ಅದನ್ನು ಗೌರವಿಸುವುದನ್ನು ಬಿಟ್ಟು ಸರ್ಕಾರದ ಪ್ರತಿನಿಧಿಗಳು ರಾಜ್ಯಪಾಲರನ್ನು ಮನಬಂದಂತೆ ನಿಂದಿಸಿದ್ದಾರೆ. ಯಾರೋ ಜನಸಾಮಾನ್ಯ ನಿಂದಿಸಿದರೆ ಅದು ಬೇರೆಯಾಗಿರುತಿತ್ತು ಅದರೆ ಮಂತ್ರಿಗಳು ದಲಿತ ಎಂದು ಏಕವಚನದಲ್ಲಿ ಹೀಯಾಳಿಸಿದ್ದಾರ. ಗೌರವಾನ್ವಿತ ರಾಜ್ಯಪಾಲರ ಪೋಟೋಗಳನ್ನು ಸುಟ್ಟಿದ್ದಾರೆ ಎಂದು ಅಶೋಕ ಹೇಳಿದರು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯಪಾಲ ಎಚ್.ಎನ್ ಭಾರದ್ವಾಜ್ ಹಲವು ವಿದೇಯಕಗಳನ್ನು ವಾಪಸ್ ಕಳುಹಿಸಿದ್ದರು, ಆವಾಗ ನಾವು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
