ಹುಬ್ಬಳ್ಳಿ : ಫ್ಲೈಓವರ್​ ಕಾಮಗಾರಿ ವೇಳೆ ಎಎಸ್​ಐ ಸಾವು ಕೇಸ್ : 11ಜನರ ಬಂಧನ

ಹುಬ್ಬಳ್ಳಿ

    ನಗರದ ಹಳೆ ಕೋರ್ಟ್​ ಬಳಿ ತೆರಳುತ್ತಿದ್ದಾಗ ಫ್ಲೈಓವರ್ ಕಾಮಗಾರಿಯ  ರಾಡ್​ ತಲೆ ಮೇಲೆ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್​ಐ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು, ಇದೀಗ ಮಹಾರಾಷ್ಟ್ರ ಮೂಲದ ಝಂಡು ಕನ್​ಸ್ಟ್ರಕ್ಷನ್ ಕಂಪನಿಯ 11 ಜನ ನೌಕರರನ್ನು ಬಂಧಿಸಿದ್ದಾರೆ. 

   ಝಂಡು ಕನ್​ಸ್ಟ್ರಕ್ಷನ್​ ಸೂಪರ್ ವೈಸರ್​ ಹರ್ಷ ಹೊಸಗಾಣಿಗೇರ, ಲೈಸನಿಂಗ್ ಇಂಜಿನಿಯರ್ ಜಿತೇಂದ್ರ ಪಾಲ್, ಇಂಜನಿಯರ್ ಭೂಪೇಂದರ್, ನೌಕರರಾದ ಮಹಮ್ಮದ್ ಮಿಯಾ, ಅಸ್ಲಂ, ಮೊಹಮ್ಮದ್ ಹಾಜಿ, ಸಬೀಬ್, ರಿಜಾವುಲ್, ಶಮೀಮ್ ಅಲಿಯಾಸ್ ಪಿಂಟು ಶೇಕ್, ಮೊಹಮ್ಮದ್ ಆರೀಫ್ ಹಾಗೂ ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಬಿವುಲ್ ಹಕ್ ಬಂಧಿತರು.

   ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಕಳೆದ ಆರು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಭಿರಾಜ್ ನಿನ್ನೆ ‌ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ದಿನವೇ 19 ಜನರ ಮೇಲೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಾರೇ ಇರಲಿ ಕಾನೂನು ಕ್ರಮ ಕೈಗೊಳುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್​ ಹೇಳಿದ್ದರು.

   ಹುಬ್ಬಳ್ಳಿಯ ಹೃದಯ ಭಾಗ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಗೆ ಬಲಿಪಡೆದುಕೊಂಡಿದೆ. ಅದು‌ ಕೂಡ ಓರ್ವ ಪೊಲೀಸ್ ಅಧಿಕಾರಿ. ಕಳೆದ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಹುಬ್ಬಳ್ಳಿಯ ಕೋರ್ಟ್ ವೃತ್ತದ ಬಳಿ ಫ್ಲೈ ಓವರ್ ಕಾಮಗಾರಿಯ ರಾಡ್ ನಾಭಿರಾಜ್ ದಯಣ್ಣವರ ತಲೆ ಮೇಲೆ ಬಿದ್ದಿತ್ತು. ಹೆಲ್ಮೆಟ್ ಹಾಕಿದ್ದರೂ ಹೆಲ್ಮೆಟ್ ಸೀಳಿ ನಾಭಿರಾಜ್ ತಲೆಗೆ ಗಂಭೀರ ಗಾಯವಾಗಿತ್ತು.

  ಕೂಡಲೇ ನಾಭಿರಾಜ್​ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಂದು ರಾತ್ರಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ನಾಭಿರಾಜ್​ರನ್ನ ಶಿಫ್ಟ್ ‌ಮಾಡಲಾಗಿತ್ತು. ಆದರೆ ನಿನ್ನೆ ಬೆಳಗಿನ ಜಾವ 3.45 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

   ಇದೇ ಸ್ಥಳದಲ್ಲಿ ಹಿಂದೆ ಎರಡು ಬಾರಿ ಅವಘಡ ಸಂಭವಿಸಿದಾಗಲೂ ಗುತ್ತಿಗೆದಾದರರು ಎಚ್ಚೆತ್ತುಕೊಂಡಿಲ್ಲ. ಅದರ ಪರಿಣಾಮ ಹತ್ತು ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ನಾಭಿರಾಜ್ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ದೂರು ದಾಖಲಾಗುತ್ತಲೇ ಝಂಡು ಕನ್​ಸ್ಟ್ರಕ್ಷನ್​ನ ಹುಬ್ಬಳ್ಳಿಯ ಎರಡು ಕಚೇರಿಗಳನ್ನು ಬಂದ್ ಮಾಡಿಕೊಂಡು ಹೋಗಿದ್ದಾರೆ.

Recent Articles

spot_img

Related Stories

Share via
Copy link
Powered by Social Snap