ಭುವನೇಶ್ವರ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ಒಡಿಯಾ ನಟ ಬುದ್ಧಾದಿತ್ಯ ಮೊಹಾಂತಿ ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಪೊಲೀಸ್ ದೂರು ದಾಖಲಿಸಿದೆ.ರಾಜ್ಯ ಎನ್ಎಸ್ಯುಐ ಅಧ್ಯಕ್ಷ ಉದಿತ್ ಪ್ರಧಾನ್ ಶುಕ್ರವಾರ ರಾಜಧಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಾಂತಿ ಪೋಸ್ಟ್ ಮಾಡಿದ್ದರ ವಿರುದ್ಧ ಕಿಡಿ ಕಾರಿದ್ದಾರೆ.
”ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕೊಂದ ನಂತರ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಮುಂದಿನ ಗುರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯಾಗಿರಬೇಕು” ಎಂದು ಸೋಷಿಯಲ್ ಮೀಡಿಯಾದಲ್ಲಿ ಮೊಹಾಂತಿ ಪೋಸ್ಟ್ ಮಾಡಿದ್ದರು. ತದ ನಂತರ ಪೋಸ್ಟನ್ನು ಡಿಲಿಟ್ ಮಾಡಿದ್ದರು. ʼʼನಮ್ಮ ನಾಯಕನ ವಿರುದ್ಧ ಇಂತಹ ಹೇಳಿಕೆಯನ್ನು ನಾವು ಸಹಿಸುವುದಿಲ್ಲ” ಎಂದು ಉದಿತ್ ಪ್ರಧಾನ್ ಹೇಳಿದ್ದಾರೆ. ದೂರಿನ ಜತೆಗೆ ಸಾಸೋಷಿಯಲ್ ಮೀಡಿಯಾದ ಪೋಸ್ಟ್ನ ಸ್ಕ್ರೀನ್ಶಾಟ್ ಅನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ದೂರನ್ನು ಸ್ವೀಕರಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಾವು ಮಾಡಿದ ತಪ್ಪಿಗೆ ಶುಕ್ರವಾರ ಕ್ಷಮೆಯಾಚಿಸಿ ಪೋಸ್ಟ್ ಮಾಡಿದ ಮೊಹಾಂತಿ, ʼʼರಾಹುಲ್ ಗಾಂಧಿಯ ಬಗ್ಗೆ ನನ್ನ ಕೊನೆಯ ಪೋಸ್ಟ್. ಎಂದಿಗೂ ಅವರನ್ನು ಗುರಿಯಾಗಿಸುವುದು, ಹಾನಿ ಮಾಡುವುದು, ಯಾವುದೇ ರೀತಿಯಲ್ಲಿ ಕೀಳಾಗಿಸುವುದು ಅಥವಾ ಅವರ ವಿರುದ್ಧ ಏನನ್ನೂ ಬರೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ನಾನು ಈ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆʼʼ ಎಂದು ಹೇಳಿದ್ದಾರೆ.