ಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಳಗಾವಿ:

   ಗೃಹ ಲಕ್ಷ್ಮೀ ಯೋಜನೆಯ  ಹಣ ಫಲಾನುಭವಿಗಳ ಖಾತೆಗೆ ಶೀಘ್ರದಲ್ಲೇ ಜಮೆಯಾಗಲಿದೆಯೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಖಚಿತಪಡಿಸಿದ್ದಾರೆ. ತಾಲೂಕು ಪಂಚಾಯತಿಗಳಿಗೆ ಹಣ ತಲುಪಿದ್ದು, ಅಲ್ಲಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರವಾನೆಯಾಗುವುದು ವಿಳಂಬವಾಗಿದೆ. ಹೀಗಾಗಿ ಗೃಹ ಲಕ್ಷ್ಮೀಯರ ಖಾತೆಗೆ ಹಣ ಜಮೆ ಆಗುವುದು ತಡವಾಗಿದೆ ಎಂದಿದ್ದಾರೆ.

   ಬೆಳಗಾವಿ ನಗರದ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಈ ಮೊದಲಿನಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹ ಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಈಗಾಗಲೇ ತಾಲೂಕು ಪಂಚಾಯಿತಿ ಖಾತೆಗಳಿಗೆ ಗೃಹ ಲಕ್ಷ್ಮೀ ಹಣ ರಾಜ್ಯ ಸರಕಾರದಿಂದ ಜಮೆ ಆಗಿದೆ. ಅಲ್ಲಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರವಾನೆಯಾಗುವುದು ವಿಳಂಬವಾಗಿದೆ. ಹೀಗಾಗಿ ಗೃಹ ಲಕ್ಷ್ಮೀಯರ ಖಾತೆಗೆ ಹಣ ಜಮೆ ಆಗುವುದು ತಡವಾಗಿದೆ. ತಾಲೂಕು ಪಂಚಾಯತ್‌ಗಳಿಂದ ಹಣ ವರ್ಗಾವಣೆಗೆ ಕ್ರಮ ವಹಿಸಲಾಗಿದ್ದು, ಶೀಘ್ರವಾಗಿ ಉಪ ನಿರ್ದೇಶಕರ ಮೂಲಕ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ,” ಎಂದು ತಿಳಿಸಿದರು.

    ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರಿಂದ ಒಂದು ತಿಂಗಳು ತುಂಬಾ ಕಷ್ಟವಾಗಿತ್ತು. ಹೀಗಾಗಿ ಕ್ಷೇತ್ರದ ಜನರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ದೇವರ ದಯೆಯಿಂದ ಸಂಪೂರ್ಣ ಗುಣಮುಖ ಆಗಿದ್ದೇನೆ. ವೈದ್ಯರು 6 ವಾರ ವಿಶ್ರಾಂತಿ ಹೇಳಿದ್ದಾರೆ. ಹಾಗಾಗಿ, ಇನ್ನೆರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ಮರಳುವೆ. 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವೆ. ಜನರ ಮಧ್ಯೆಯೇ ನನ್ನ ದೈನಂದಿನ ಜೀವನ ನಡೆಯುತ್ತಿದೆ. ಈಗಲೂ ದೂರವಾಣಿ ಮೂಲಕ ಜನರ ಸಂಪರ್ಕದಲ್ಲಿರುವೆ. ಜನರ, ದೇವರ ಆಶೀರ್ವಾದದಿಂದ ಸಂಪೂರ್ಣ ಗುಣಮುಖ ಆಗಿರುವೆ ಎಂದು ಹೇಳಿದರು.

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕ್ಷೇತ್ರದ ಜನರ ಸಮ್ಮುಖದಲ್ಲಿ ಕೇಕ್‌ ಕತ್ತರಿಸುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡರು. ಜನ್ಮದಿನದ ನಿಮಿತ್ತ ಗೃಹ ಕಚೇರಿಗೆ ಆಗಮಿಸಿದ್ದ ಕ್ಷೇತ್ರದ ಜನರನ್ನು ಸಚಿವೆ ಭೇಟಿಯಾದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಅಭಿಮಾನಿಗಳು ಸಚಿವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

Recent Articles

spot_img

Related Stories

Share via
Copy link