ನಿಮ್ಮ ಮನೆಗೆ ಬರಲಿದೆ ದೇವಸ್ಥಾನದ ಪ್ರಸಾದ
ಬೆಂಗಳೂರು:
ಮುಜರಾಯಿ ಇಲಾಖೆ ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಿದೆ. ಇ-ಪ್ರಸಾದ ಸೇವೆ ಮೂಲಕ ರಾಜ್ಯದ 400 ದೇಗುಲಗಳ ಪ್ರಸಾದ 15 ದಿನಗಳಲ್ಲಿ ಮನೆ ಬಾಗಿಲಿಗೆ ಬರಲಿದೆ. ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಈ ಹೊಸ ಪ್ರಯೋಗ ನಡೆಸಿದೆ. ಈ ಮೂಲಕ ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದ ಆನ್ಲೈನ್ನಲ್ಲಿ ಮನೆ ಬಾಗಿಲಿಗೆ ತಲುಪಿಸುವ ಪ್ರಯೋಗ ಆರಂಭಿಸಿತ್ತು. ಈ ಇ-ಪ್ರಸಾದ ಸೇವೆಗೆ ಭಕ್ತಾದಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಈಗ ಧನುರ್ಮಾಸ ಮುಗಿದು ಗೃಹಪ್ರವೇಶ, ನಾಮಕರಣ, ಮದುವೆ ಇತ್ಯಾದಿ ಶುಭ ಸಮಾರಂಭಗಳ ಸೀಸನ್ ಆರಂಭವಾಗಿದೆ. ಇಂತಹ ಶುಭ ಸಂದರ್ಭದಲ್ಲಿ ದೂರದ ಊರುಗಳಲ್ಲಿರುವ ದೇವಸ್ಥಾನಕ್ಕೆ ಹೋಗಿ ಪ್ರಸಾದ ತರುವುದು ಕಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೂರದ ದೇವಸ್ಥಾನಗಳಿಗೆ ಹೋಗಿ, ಜನರ ದಟ್ಟಣೆಯ ನಡುವೆ ದೇವರ ದರ್ಶನ ಪಡೆಯುವುದು ಕಷ್ಟ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಮುಜರಾಯಿ ಸಿಹಿ ಸುದ್ದಿ ನೀಡಿದ್ದು, ಮನೆ ಬಾಗಿಲಿಗೆ ದೇವರ ಪ್ರಸಾದ ತಲುಪಲಿದೆ.
ಮುಜರಾಯಿ ಇಲಾಖೆ ಈಗಾಗಲೇ ಇದರ ಪ್ರಯೋಗ ನಡೆಸುತ್ತಿದ್ದು, ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದವನ್ನು ಆನ್ಲೈನ್ನಲ್ಲಿ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಈ ಇ-ಪ್ರಸಾದ ಸೇವೆಗೆ ಭಕ್ತಾದಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದುವರೆಗೂ ಅಂದಾಜು 25 ಸಾವಿರ ಭಕ್ತಾದಿಗಳು ಇ-ಪ್ರಸಾದ ಪಡೆದಿದ್ದಾರೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ರಾಜ್ಯದ 400 ದೇವಾಲಯಗಳಲ್ಲಿ ಇ-ಪ್ರಸಾದ ಸೇವೆ ಆರಂಭಿಸುವ ಯೋಜನೆಯನ್ನು ಮುಜರಾಯಿ ಇಲಾಖೆ ಹಾಕಿಕೊಂಡಿದೆ.








