ತೆಲಂಗಾಣ:
ತೆಲಂಗಾಣ ಕಾಂಗ್ರೆಸ್ನಿಂದ ‘ಎಂಎಲ್ ಸಿ’ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಂಡು ವಿಜಯಶಾಂತಿ, ವಿಧಾನ ಪರಿಷತ್ತಿನ ಸದಸ್ಯರಾಗಲು ಸಜ್ಜಾಗಿದ್ದಾರೆ. ಇಷ್ಟು ಮಾತ್ರವೇ ಅಲ್ಲ ಸ್ವಾಮೀ, ತೆಲಂಗಾಣ ಸರಕಾರದ ಸಚಿವ ಸಂಪುಟವೂ ಸದ್ಯದಲ್ಲೇ ಪುನರ್ ರಚನೆಗೊಳ್ಳಲಿರುವುದರಿಂದ, ಈ ಲೇಡಿ ಸೂಪರ್ಸ್ಟಾರ್ಗೆ ಮಂತ್ರಿ ಗಿರಿಯ ಬಂಪರ್ ಲಾಟರಿ ಹೊಡೆದರೂ ಅಚ್ಚರಿಯಿಲ್ಲ ಎಂಬುದು ಅಲ್ಲಿನ ಒಂದಷ್ಟು ತ್ರಿಲೋಕ ಸಂಚಾರಿ ನಾರದರಿಗೆ ಒಪ್ಪಿಸಿರುವ ವರದಿ!
ನಮ್ಮ ಕನ್ನಡದ ಚರಣ್ರಾಜ್ ಅವರು ಖಳ ನಾಯಕರಾಗಿ ಕಾಣಿಸಿಕೊಂಡಿದ್ದ ‘ಪ್ರತಿಘಟನ’ ಚಿತ್ರದಲ್ಲಿ ವಿಜಯಶಾಂತಿ ಅಬ್ಬರಿಸಿದ ಪರಿಯನ್ನು ಕಂಡು, “ಇವರು ರಾಜಕೀಯಕ್ಕೆ ಬಂದ್ರೆ ಶಾನೆ ಚೆನ್ನಾಗಿರುತ್ತಲ್ವಾ?” ಅಂದೋರು ಬಹಳಷ್ಟು ಮಂದಿ. ಇದು ಅದ್ಯಾವಾಗ ವಿಜಯಶಾಂತಿಯವರ ಕಿವಿಗೆ ಬಿತ್ತೋ ಗೊತ್ತಿಲ್ಲ, ಚಿತ್ರರಂಗವನ್ನು ಚಿಮ್ಮು ಹಲಗೆಯಾಗಿಸಿಕೊಂಡು ರಾಜಕೀಯಕ್ಕೆ ಧುಮುಕಿಬಿಡೋದೇ?!
ಹಾಗೆ ನೋಡಿದರೆ, ರಾಜಕೀಯ ರಂಗದಲ್ಲೂ ‘ವೈವಿಧ್ಯಮಯ’ ಪಾತ್ರಗಳನ್ನು ನಿರ್ವಹಿಸಿದ್ದು ವಿಜಯಶಾಂತಿಯವರ ಹೆಗ್ಗಳಿಕೆ. ‘ವೈವಿಧ್ಯಮಯ’ ಅಂದಾಕ್ಷಣ ಅದನ್ನು ನೀವು ‘ವಿಭಿನ್ನತೆ’ ಎಂಬ ಪರಿಕಲ್ಪನೆಯೊಂದಿಗೆ ಸಮೀಕರಿಸಿಕೊಳ್ಳಬಾರದು; ಅವರು ವಿವಿಧ ಪಕ್ಷಗಳಿಗೆ ಜಂಪ್ ಮಾಡಿದ್ದನ್ನು ಸಂಕ್ಷೇಪಿಸಿ ಹಾಗೆ ಹೇಳಲಾಗಿದೆಯಷ್ಟೇ!
ಈ ಮಾತಿಗೆ ಪುರಾವೆ ಬೇಕೇ, ಇಲ್ಲಿದೆ ನೋಡಿ- ಮೊದಲಿಗೆ ಬಿಜೆಪಿಯಿಂದ ತಮ್ಮ ರಾಜಕೀಯ ಪಯಣವನ್ನು ಶುರುಹಚ್ಚಿಕೊಂಡ ವಿಜಯಶಾಂತಿ, ನಂತರ ಅಲ್ಲೇಕೋ ಗಿಟ್ಟಲಿಲ್ಲವೆಂದು ಹೊರ ಬಂದು ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಿದರು. ಅದೂ ಯಾಕೋ ಸರಿಹೋಗಲಿಲ್ಲವೆಂದು ‘ಭಾರತ ರಾಷ್ಟ್ರ ಸಮಿತಿ’ (ಬಿಆರ್ಎಸ್) ಪಕ್ಷವನ್ನು ಸೇರಿದರು. ಅದೂ ಯಾಕೋ ಅಡ್ಜಸ್ಟ್ ಆಗಲಿಲ್ಲ, ಅಂದ್ಕೊಂಡು ಕಾಂಗ್ರೆಸ್ಗೆ ಕಾಲಿಟ್ಟರು. ಅಲ್ಲೂ ಪರಿಸ್ಥಿತಿ ‘ಅನುಕೂಲಕರವಾಗಿ’ ಇರಲಿಲ್ಲ ಅನ್ಸುತ್ತೆ, ‘ಟಣ್’ ಅಂತ ಬಿಜೆಪಿಗೆ ಜಿಗಿದರು.
ಅಲ್ಲೊಂದಿಷ್ಟು ದಿನ ಏಗಿದ ನಂತರ ಮತ್ತೆ ಈಗ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ ವಿಜಯಶಾಂತಿ. ಅವರು ಇಷ್ಟೊಂದು ‘ಪಾತ್ರ ವೈವಿಧ್ಯ’ ಮೆರೆದು ಮತ್ತೆ ಹೀಗೆ ಕಾಂಗ್ರೆಸ್ಗೇ ಮರಳಿರೋದನ್ನು ಕಂಡ ಕೆಲವರು, “ಕಾಂಗ್ರೆಸ್ಸು ವಿಜಯ‘ಶಾಂತಿ’ನಿವಾಸವೇ?” ಎಂದು ಪ್ರಶ್ನಿಸುತ್ತಿದ್ದಾರಂತೆ!!
