ನವದೆಹಲಿ:
ದೊಡ್ಡ ಪ್ರಮಾಣದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಅಕ್ರಮ ವಲಸಿಗರಿಂದಾಗಿ ಭಾರತದ ಮುಸ್ಲಿಂ ಜನಸಂಖ್ಯೆಯು ಶೇ.24.6ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಯನ್ನು ಸಮರ್ಥಿಸಿಕೊಂಡ ಅವರು, “ಮತದಾರರ ಪಟ್ಟಿಗೆ ಅಕ್ರಮ ಸೇರ್ಪಡೆಯು, ಸಂವಿಧಾನದ ಧ್ಯೇಯಕ್ಕೆ ಕಳಂಕ ತಂದಂತೆ” ಎಂದಿದ್ದಾರೆ. ದೈನಿಕ್ ಜಾಗರಣ್ ನ ಮಾಜಿ ಪ್ರಧಾನ ಸಂಪಾದಕ ನರೇಂದ್ರ ಮೋಹನ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಕ್ರಮ ವಲಸಿಗರಿಗೆ ನಮ್ಮ ಪ್ರಜಾಪ್ರಭುತ್ವದ ಮೇಲೆ ಪ್ರಭಾವ ಬೀರಲು ಅವಕಾಶ ನೀಡಬಾರದು, ಭಾರತದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು ಇರಬೇಕು,” ಎಂದು ಹೇಳಿದರು.
ಅಕ್ರಮ ವಲಸೆಗರ ಕುರಿತು ಬಿಜೆಪಿಯ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ ಅಮಿತ್ ಶಾ, “ಬಿಜೆಪಿಯು 1950ರಿಂದಲೇ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆರಗೆದು ಹಾಕ, ಗಡಿಪಾರು ಮಾಡುವ ಸೂತ್ರವನ್ನು ಅಳವಡಿಸಿಕೊಂಡಿದೆ,” ಎಂದರು.
ಜನಗಣತಿಯ ಅಂಕಿಅಂಶಗಳನ್ನು ಉಲ್ಲೇಖಿಸಿದ ಶಾ, ಹಿಂದೂಗಳ ಜನಸಂಖ್ಯೆ ಹಲವು ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗುತ್ತಿದ್ದರೆ, ಮುಸ್ಲಿಂ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 1951ರಲ್ಲಿ ಹಿಂದೂಗಳು ಜನಸಂಖ್ಯೆ 84% ಮತ್ತು ಮುಸ್ಲಿಂ ಜನಸಂಖ್ಯೆ 9.8% ಇತ್ತು. 2011ರ ವೇಳೆಗೆ ಹಿಂದೂಗಳು 79%ಗೆ ಇಳಿದರೆ, ಮುಸ್ಲಿಂ ಜನಸಂಖ್ಯೆ 14.2%ಕ್ಕೆ ಏರಿಕೆಯಾಗಿದೆ. ಇಂದು ಮುಸ್ಲಿಂ ಜನಸಂಖ್ಯೆ 24.6%ಗೆ ತಲುಪಿದ್ದು, ಇದಕ್ಕೆ ಅಕ್ರಮ ವಲಸಿಗರೇ ಕಾರಣ,” ಎಂದು ಶಾ ಹೇಳಿದರು.
ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ವಿರೋಧ ಪಕ್ಷದ ಟೀಕೆಗಳನ್ನು ತಳ್ಳಿಹಾಕಿರುವ ಶಾ, ಕಾಂಗ್ರೆಸ್ ಆಡಳಿತದಲ್ಲಿ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ, ಈಗ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕ್ರಮದಿಂದಾಗಿ ತಮ್ಮ ಮತ ಬ್ಯಾಂಕ್ಗಳಿಗೆ ಹೊಡೆತ ಬೀಳುತ್ತದೆ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಚುನಾವಣಾ ಆಯೋಗದ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ನಿಮಗೆ ಏನಾದರೂ ಆಕ್ಷೇಪವಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು,” ಎಂದು ಗೃಹ ಸಚಿವರು ಹೇಳಿದರು.
ನಿರಾಶ್ರಿತರು ಮತ್ತು ಅಕ್ರಮ ವಲಸಿಗರ ನಡುವಿನ ವ್ಯತ್ಯಾಸ ತಿಳಿಸಿದ ಅಮಿತ್ ಶಾ, “ಧಾರ್ಮಿಕ ಹಿಂಸೆ ಎದುರಿಸದೇ, ಆರ್ಥಿಕ ಅಥವಾ ಇತರೆ ಕಾರಣಗಳಿಗಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವವರು ನುಸುಳುಕೋರರು. ಪ್ರಪಂಚದಲ್ಲಿ ಇರುವ ಎಲ್ಲರಿಗೂ ನಮ್ಮ ದೇಶಕ್ಕೆ ಬರಲು ಅವಕಾಶ ನೀಡಿದರೆ, ಭಾರತ ಧರ್ಮಶಾಲೆಯಾಗುತ್ತದೆ,” ಎಂದು ಗುಡುಗಿದ್ದಾರೆ.
