ಸ್ವಾಭಿಮಾನಿ ಬದುಕಿನ ಪತ್ರಿಕೆ ಹಂಚುವ ಹುಡುಗರು : ಜಪಾನಂದಜೀ.

ಗುಬ್ಬಿ:

   ಮಳೆ ಚಳಿ ಲೆಕ್ಕಿಸದೆ ಓದುಗರ ಮನೆ ಮನಗಳಿಗೆ ತಲುಪಿರುವ ಪತ್ರಿಕೆ ಹಂಚುವ ಹುಡುಗರ ಯೋಗಕ್ಷೇಮ ವಿಚಾರಿಸುವ ಕೆಲಸ ನಿರಂತರ ನಡೆಯಬೇಕು ಎಂದು ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ತಿಳಿಸಿದರು.

   ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕೆ ಹಂಚಿಕೆದಾರರ ಸಂಘದ ತಾಲ್ಲೂಕು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲಾ ಹಂಚಿಕೆ ಹುಡುಗರಿಗೆ ಜರ್ಕಿನ್ ವಿತರಿಸಿ ಮಾತನಾಡಿದ ಅವರು ದೇಶ ವಿದೇಶ ಸುದ್ದಿಗಳನ್ನು ಬೆಳಿಗ್ಗೆ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ತಮ್ಮ ಬಡತನ ಬೇಗೆಯಲ್ಲಿ ಕಷ್ಟ ಸ್ವಾಭಿಮಾನದ ದುಡಿಮೆಗೆ ನಿಂತಿದ್ದಾರೆ. ಅಂತಹ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕೆಲಸ ಸಮುದಾಯ ಮಾಡಬೇಕು ಎಂದರು.

   ಬೆಳಿಗ್ಗೆ ಪೇಪರ್ ಹಂಚುವ ಕರ್ತವ್ಯ ಮುಗಿಸಿ ಅದರ ದುಡಿಮೆಯ ಹಣದಲ್ಲಿ ತಮ್ಮ ಶಿಕ್ಷಣ ನಡೆಸಿ ಉತ್ತಮ ಬದುಕು ಕಟ್ಟಿಕೊಳ್ಳುವ ಈ ಹುಡುಗರು ತಮ್ಮ ಶಾಲಕಾಲೇಜು ಶುಲ್ಕ ಕಟ್ಟಿ ಮನೆ ಸಂಸಾರ ನಡೆಸುವುದು ಕೂಡಾ ಕಂಡಿದ್ದೇವೆ. ಇಂತಹ ಸ್ವಾಭಿಮಾನಿ ಹಂಚಿಕೆದಾರರ ಬಗ್ಗೆ ಸರ್ಕಾರ ಕೂಡ ಗಮನಹರಿಸಬೇಕಿದೆ. ಕೇವಲ ಕನಿಷ್ಠ ಸವಲತ್ತು ಒದಗಿಸುವುದು ಅಷ್ಟೇ ಅಲ್ಲದೇ ಅವರ ಜೀವನ ರೂಪಿಸುವ ಕೆಲಸ ಸರ್ಕಾರದ ಮೂಲಕ ವಿತರಕರ ಸಂಘ ಮಾಡಬೇಕು ಎಂದರು.

   ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಚಿ.ನಿ.ಪುರುಷೋತ್ತಮ್ ಮಾತನಾಡಿ ಊರೂರು ಸುತ್ತಿ ಸುದ್ದಿ ಕಲೆ ಹಾಕಿ ಸುದ್ದಿ ಸಿದ್ಧ ಮಾಡುವ ಪತ್ರಕರ್ತರ ಬರವಣಿಗೆ ಓದುವ ಗ್ರಾಹಕರ ಮನೆಗೆ ಪೇಪರ್ ತಲುಪಿಸುವ ಹಂಚಿಕೆದಾರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಿದೆ. ಪತ್ರಿಕೋದ್ಯಮ ಸಂಕಷ್ಟಕ್ಕೀಡಾಗಿದೆ. ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸಿದೆ. ಪ್ರಸರಣ ಸಂಖ್ಯೆ ಇಳಿಮುಖವಾದರೂ ಜಗ್ಗದೆ ಇಂದಿಗೂ ಮನೆ ಬಾಗಿಲಿಗೆ ಪತ್ರಿಕೆ ಹಂಚುವ ಹುಡುಗರ ಶ್ರಮಕ್ಕೆ ಅಭಿನಂದನೆ ಸಲ್ಲಿಸಬೇಕಿದೆ. ಯಾವುದೇ ಸುದ್ದಿ ವಿಸ್ತಾರವಾಗಿ ಮುದ್ರಿಸುವ ಪತ್ರಿಕೆಯ ಬಗ್ಗೆ ಎಂದಿಗೂ ಗೌರವ ಇರುತ್ತದೆ ಎಂದರು.

   ಚೆಸ್ ಅಸೋಸೇಷನ್ ಅಧ್ಯಕ್ಷ ಮಧುಕರ್ ಮಾತನಾಡಿ ಜೀವನ ಮೌಲ್ಯ ತಿಳಿದ ಜಪಾನಂದ ಸ್ವಾಮಿಗಳು ಅನ್ನ ವಸತಿ ಶಿಕ್ಷಣ ಆರೋಗ್ಯ ಈ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ಪೈಕಿ ಪತ್ರಿಕೆ ಕ್ಷೇತ್ರದಲ್ಲಿ ಹಂಚಿಕೆದಾರರ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ಹೆಚ್ಚು ವಿದ್ಯಾರ್ಥಿಗಳೇ ಇರುವ ಹಂಚಿಕೆದಾರರ ಕಷ್ಟ ಅರಿತು ಮೂಲ ಸವಲತ್ತು ಒದಗಿಸಿದ್ದಾರೆ. ಇವರ ಸೇವೆ ಆರೋಗ್ಯ ಕ್ಷೇತ್ರಕ್ಕೂ ಹಬ್ಬಿದೆ. ಹೊರ ರಾಜ್ಯದಲ್ಲಿ ಸಹ ಸಾಮಾಜಿಕ ಗುರುತರ ಸೇವೆ ಇಂದಿಗೂ ಚರ್ಚೆಯಲ್ಲಿದೆ. ಹಿಂದುಳಿದ ಪಾವಗಡ ತಾಲ್ಲೂಕಿನಲ್ಲಿ ಆಶ್ರಮ ಕಟ್ಟಿ ಕಣ್ಣಿನ ಆಸ್ಪತ್ರೆ ತೆರೆದು ನಿರಂತರ ಸೇವೆ ನಡೆಸಿದ್ದಾರೆ. ಇವರ ಅನನ್ಯ ಸೇವೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.

   ಮೀಡಿಯಾ ಬ್ಯಾಕ್ ಆಫೀಸ್ ಸಿಇಓ ಎಸ್.ರಘು ಮಾತನಾಡಿ ಉದ್ಯೋಗ ನೀಡುವ ಕಂಪೆನಿಗಳು ಶಿಕ್ಷಣ ಜೊತೆ ಪ್ರತಿಭೆ ಕೌಶಲ್ಯ ಹುಡುಕುತ್ತದೆ. ಆದರೆ ಕನಿಷ್ಠ ಶಿಕ್ಷಣ ಪಡೆದವರು ಹಾಗೂ ವಿದ್ಯಾಭ್ಯಾಸದಲ್ಲಿ ತೊಡಗಿರುವವರಿಗೆ ದುಡಿಮೆ ನೀಡಿದ್ದು ಪತ್ರಿಕೆ ಹಂಚುವ ಕಾಯಕ. ಬಡ ಮಕ್ಕಳು ಹೆಚ್ಚು ಈ ಕೆಲಸ ಮಾಡುತ್ತಾರೆ. ಇಂತಹ ಮಕ್ಕಳ ಬದುಕಿನ ಚಿಂತನೆ ಮಾಡಿದ ಜಪಾನಂದ ಜೀ ಅವರ ಕಾಳಜಿ ಮೆಚ್ಚುವಂತಹದ್ದು. ಕೋವಿಡ್ ಸಮಯ ಹಾಗೂ ನೆರೆ ಹಾವಳಿ ಪರಿಹಾರ ನೀಡುವಲ್ಲಿ ಸಹ ಅವರ ಕೆಲಸ ಸಾರ್ಥಕ ಸೇವೆ ಎನಿಸಿದೆ ಎಂದರು.

   ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಪತ್ರಿಕಾ ಹಂಚಿಕೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್, ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷ ಯೋಗೀಶ್, ತಾಲ್ಲೂಕು ಗೌರವಾಧ್ಯಕ್ಷ ರಮೇಶ್ ಗೌಡ, ತಾಲ್ಲೂಕು ಅಧ್ಯಕ್ಷ ಜಿ.ಕೆ.ನರಸಿಂಹಮೂರ್ತಿ, ಉಪಾಧ್ಯಕ್ಷ ಕೆಂಪರಾಜ್, ಪ್ರಧಾನ ಕಾರ್ಯದರ್ಶಿ ಜಿ.ಬಿ.ಪುನೀತ್, ಖಜಾಂಚಿ ಮಂಜುನಾಥ್, ಪತ್ರಕರ್ತರಾದ ಗುರು ಚನ್ನಬಸವಯ್ಯ, ರಾಜೇಶ್ ಗುಬ್ಬಿ, ದೇವರಾಜ್, ಕೋಟೆ ರಂಗಸ್ವಾಮಿ ಇತರರು ಇದ್ದರು.

Recent Articles

spot_img

Related Stories

Share via
Copy link