
ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ, ಜಲಾಶಯಗಳಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿರುವ ಬೆನ್ನಲ್ಲೇ, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವು ರಾಜ್ಯಾದ್ಯಂತ ಭಾರಿ ಕ್ರಾಂತಿಯ ಕಿಚ್ಚು ಹೊತ್ತಿಸಿದೆ. ಸಮಿತಿಯ ಈ ನಿರ್ಧಾರವನ್ನು ಖಂಡಿಸಿ ಕಾವೇರಿ ಕೊಳ್ಳದ ಜಿಲ್ಲೆಗಳು ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ. ಮತ್ತೊಂದೆಡೆ, ರಾಜ್ಯದ ಕಷ್ಟಕರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಈ ಆದೇಶಕ್ಕೆ ತಡೆಯಾಜ್ಞೆ ತರಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸರ್ಕಾರವು ನವದೆಹಲಿಯಲ್ಲಿ ಗುರುವಾರ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತುರ್ತು ಸಭೆಯಲ್ಲಿ ಮೇಲ್ಮನವಿ ಸಲ್ಲಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯಾದ್ಯAತ ಬೀದಿಗಿಳಿದ ಕನ್ನಡಪರ ಸಂಘಟನೆಗಳು: ಬಂದ್ ಎಚ್ಚರಿಕೆ
ಸಿಡಬ್ಲೂ÷್ಯಆರ್ಸಿ ಆದೇಶ ಹೊರಬೀಳುತ್ತಿದ್ದಂತೆಯೇ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಮ್ಮ ಜಲಾಶಯಗಳಲ್ಲಿ ಇರುವುದೇ 12 ಟಿಎಂಸಿ ನೀರು, ಬೆಂಗಳೂರಿನ ಕುಡಿಯುವ ನೀರಿಗೇ ತಿಂಗಳಿಗೆ 3 ಟಿಎಂಸಿ ಬೇಕು, ಹೀಗಿರುವಾಗ ತಮಿಳುನಾಡಿಗೆ ನೀರು ಬಿಟ್ಟರೆ ಕನ್ನಡಿಗರು ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ ಎಂದು ನಾರಾಯಣಗೌಡ ಆಗ್ರಹಿಸಿದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಪ್ರತಿಭಟಿಸಿದರೆ, ಕುವೆಂಪು ವೃತ್ತದಲ್ಲಿ ಶಿವರಾಮೇಗೌಡ, ಸಾ.ರಾ. ಗೋವಿಂದು ಹಾಗೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ನಡೆಸಿದರು. ಒಂದು ವೇಳೆ ನೀರು ಹರಿಸಿದರೆ ‘ಕರ್ನಾಟಕ ಬಂದ್’ ಮಾಡುವುದಾಗಿ ವಾಟಾಳ್ ಎಚ್ಚರಿಸಿದರು.
ಗುರುವಾರ ದೆಹಲಿಯಲ್ಲಿ ತುರ್ತು ಸಿಡಬ್ಲೂö್ಯಎಂಎ ಸಭೆ: ರಾಜ್ಯದಿಂದ ಮೇಲ್ಮನವಿ
ಸಮಿತಿಯ ಶಿಫಾರಸ್ಸನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಗುರುವಾರ ಮಧ್ಯಾಹ್ನ 2:30ಕ್ಕೆ ನವದೆಹಲಿಯಲ್ಲಿ ನಡೆಯಲಿರುವ 54ನೇ ತುರ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಲ್ಮನವಿ ಸಲ್ಲಿಸಲಿದೆ. ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿ ಮೇಲ್ಮನವಿಗೆ ಅಗತ್ಯ ದಾಖಲೆ ಸಿದ್ಧಪಡಿಸಲಾಗಿದೆ ಎಂದರು. ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ನಮ್ಮೊಂದಿಗೆ ಚರ್ಚಿಸಲು ಬಯಸಿದ್ದು, ಅವರಿಗೆ ಗೌರವ ನೀಡಿ ಆಹ್ವಾನಿಸಿದ್ದೇವೆ. ಬೇಕಿದ್ದರೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇವೆ, ಅವರೇ ಖುದ್ದಾಗಿ ಬಂದು ನಮ್ಮ ಜಲಾಶಯಗಳ ನೈಜ ಸ್ಥಿತಿಯನ್ನು ಕಣ್ಣಾರೆ ನೋಡಲಿ ಎಂದು ಸಿಎಂ ಸವಾಲು ಹಾಕಿದರು.
ಸಿಡಬ್ಲೂö್ಯಆರ್ಸಿ ಆದೇಶ ರಾಜ್ಯಕ್ಕೆ ‘ಮರಣಶಾಸನ’: ಹೆಚ್.ಡಿ. ಕುಮಾರಸ್ವಾಮಿ
ಹಾಸನದಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಳೆಯಿಲ್ಲದೆ ಜಲಾಶಯಗಳು ಭರ್ತಿಯಾಗಿಲ್ಲ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿ ಎನ್ನುವ ಸಮಿತಿಯ ಆದೇಶ ಅವೈಜ್ಞಾನಿಕ ಹಾಗೂ ರಾಜ್ಯದ ಪಾಲಿಗೆ ಮರಣಶಾಸನ ಎಂದು ಕಿಡಿಕಾರಿದರು. ಕಳೆದ ವರ್ಷ ಜಲಾಶಯಗಳು ತುಂಬಿದಾಗ ಕೆರೆಗಳನ್ನು ಭರ್ತಿ ಮಾಡಿಕೊಳ್ಳದೆ ನೀರನ್ನು ಹೊರಗೆ ಬಿಟ್ಟಿದ್ದರಿಂದ ಇಂದು ಈ ಸ್ಥಿತಿ ಬಂದಿದೆ, ಈಗ ನಾವೆಲ್ಲರೂ ಒಗ್ಗಟ್ಟಾಗಿ ಪ್ರಾಧಿಕಾರಕ್ಕೆ ನಮ್ಮ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ಆತ್ಮಾವಲೋಕನದ ಅಗತ್ಯವನ್ನು ಪ್ರತಿಪಾದಿಸಿದರು.
ಬರಸ್ಥಿತಿಯಲ್ಲಿ ಆದೇಶ ಸರಿಯಲ್ಲ: ಡಿಸಿಎಂ ಜಿ. ಪರಮೇಶ್ವರ್
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ. ನೀರು ಇರುವಾಗ ಕೇಳದೆಯೇ ತಮಿಳುನಾಡಿಗೆ ನಿಗದಿಗಿಂತ ಹೆಚ್ಚು ನೀರು ನೀಡಿದ್ದೇವೆ, ಆದರೆ ಈಗ ಕುಡಿಯಲು ನೀರಿಲ್ಲದಿರುವಾಗ ಈ ಆದೇಶ ಒಪ್ಪಲು ಸಾಧ್ಯವಿಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಇದ್ದಾಗ ನಾವು ಕೊಡುತ್ತೇವೆ. ಈಗ ಕುಡಿಯಲು ನೀರಿಲ್ಲ ಎಂಬ ಪರಿಸ್ಥಿತಿ ಇರುವಾಗ ಈ ಆದೇಶ ಸರಿಯಲ್ಲ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದ್ದು, ಮೇಲ್ಮನವಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
ರಾಜ್ಯದಲ್ಲಿ ಬರಗಾಲವಿದೆ. ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಕಳೆದ 30 ವರ್ಷಗಳಲ್ಲಿ 65.86ರಷ್ಟು ನೀರಿನ ಒಳಹರಿವು ಕಡಿಮೆಯಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 10 ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಅಭಾವ ತಲೆದೂರಿದೆ. ಸದ್ಯ ಡೆಡ್ ಸ್ಟೋರೆಜ್ ಹೊರತುಪಡಿಸಿದರೆ 46 ಟಿಎಂಸಿ ನೀರಿದೆ. ಪ್ರತಿ ತಿಂಗಳು ಕುಡಿಯುವ ನೀರಿಗಾಗಿ 3.5 ಟಿಎಂಸಿ ಅಗತ್ಯವಿದೆ. ಅಲ್ಲದೇ ನದಿಪಾತ್ರದಲ್ಲಿ ನೀರು ಬಿಡಬೇಕಾಗುತ್ತದೆ. ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಪಾಲನೆ ಮಾಡುವುದು ಕಷ್ಟವಾಗಲಿದೆ.
ರಾಮಲಿಂಗಾರೆಡ್ಡಿ, ಸಚಿವ








