
ಯದು ವಂಶದ ಹೆಸರಿನಡಿ ಹಲವು ಪ್ರಬಲ ರಾಜರು ಮತ್ತವರ ಸಾಮಂತರು ತಮ್ಮದೇ ಆದ ಉಪ ವಂಶಗಳನ್ನು ಸ್ಥಾಪಿಸಿಕೊಂಡು ರಾಜ್ಯವಾಳಿದರು. ಆ ಪ್ರಸಿದ್ಧ ರಾಜವಂಶಗಳು ಹೀಗಿವೆ.
ಕ್ರಾಸ್ತ, ಭುಗಿನಿಯಾನ, ಶೊವಾಹಿ, ಋಷಕು, ಚೈತ್ರರಥ, ಜ್ಞಾನಬಿಂದು, ಮಹಾಭೋಜ ನಿಭಿರಿತಿ, ದಸಾಹಿ, ಜೀಮೂತ, ವಿಖುತಿ, ವಿಮರಥ, ನಯರಥ, ದಶರಥ, ಶಕುನಿ, ಕರಂಭಿ, ದೇವವ್ರಥ, ದೇವಖೇತ್ರ, ಮಧು, ಕುರುವರ್ಷ, ಅನು, ಪುರುಹೋತ್ರ, ಆಯು, ಸತ್ಯಯುತ, ವಿರಿಂಚಿ, ಅನಾಮಿತ್ರ, ಚಿತ್ರರಥ, ಶೂರ, ಭೋಜಮಾನ, ಶಿನಿ, ಸ್ವಂಭೋಜ ಹೃದಿಕ, ದೇವಮಿದ, ಖುತ್ರೋಮ, ದುದುಂಭಿ, ಅಭಿದ್ಯೋತ, ಪುನರ್ವಸು, ಅರ್ಬುದ, ಮಧುರ, ಅಂಧಕ, ಅಹುಕ, ಪಲ್ಲವ, ಬಲ್ಲವ, ಕೃಷ್ಣವಂಶಿ, ನಂದವಂಶಿ.
ಕೃಷ್ಣವಂಶಿ(ಕೃಷ್ಣನ ಸಂತತಿ):

ಹಲವು ರಾಜರು ಮತ್ತು ಚಕ್ರವರ್ತಿಗಳು ಯದುಕುಲದಲ್ಲಿ ಹುಟ್ಟಿದರೂ ಅವರಲ್ಲಿ ಶ್ರೀ ಕೃಷ್ಣನೇ ಸುಪ್ರಸಿದ್ದನೂ ಸಮರ್ಥ ಆಡಳಿತಗಾರನೂ ಆಗಿದ್ದವನು. ಆತನ ಸಂತತಿಯವರು ಮುಂದೆ ಕೃಷ್ಣವಂಶಿ ಎಂದೇ ಪ್ರಸಿದ್ದರಾದರು.
ಹರಿವಂಶದಲ್ಲಿನ ವಿಷ್ಣುಪರ್ವದಲ್ಲಿ (ಭಾಗ 11, 11ನೇ ಶ್ಲೋಕದಲ್ಲಿ) ಶ್ರೀ ಕೃಷ್ಣ ಗೋಕುಲದಲ್ಲಿನ ನಂದಗೋಪರಿಗೆ ಹೀಗೆ ಹೇಳುತ್ತಾನೆ. “ನೀವು ತಿಳಿದಿರುವಂತೆ ಶಕ್ತನು ನಾನಲ್ಲ. ನಾನು ನಿಮ್ಮ ಸ್ನೇಹಿತ ಮತ್ತು ನಿಮ್ಮದೇ ಕುಲಕ್ಕೆ ಸೇರಿದವನು.”
ಭಗವಂತನಾದ ಶ್ರೀ ಕೃಷ್ಣ :

ಮಥುರಾದ ಯದುವಂಶದ ವಾಸುದೇವ ಹಾಗೂ ದೇವಕಿಯರ ಮಗನಾಗಿ ಕ್ರಿ.ಪೂ. 14ನೇ ಶತಮಾನದ ಕೊನೆಯ ಭಾಗದಲ್ಲಿ ಭಗವಾನ್ ಶ್ರೀ ಕೃಷ್ಣ ಜನಿಸಿದ. ತನ್ನ ಅಣ್ಣ ಬಲರಾಮನೊಡನೆ ಬೃಂದಾವನಕ್ಕೆ ಬಂದ ಶ್ರೀ ಕೃಷ್ಣ ನಂದ-ಯಶೋಧೆಯರ ಪೋಷಣೆಯಲ್ಲಿ ಬೆಳೆಯುತ್ತಾನೆ.
ಪುರಾಣಗಳ ಪ್ರಕಾರ ಅವರ ಶಿಕ್ಷಣ ಹಾಗೂ ಸಮರ ವಿದ್ಯೆಗಳನ್ನು ಕಾಶಿಯ ಮಹರ್ಷಿ ಸಾಂದೀಪನಿ ಮಾರ್ಗದರ್ಶನದಲ್ಲಿ ಅವರ ಉಜ್ಜಯಿನಿ ಆಶ್ರಮದಲ್ಲಿ ಕಲಿಯುತ್ತಾರೆ. ಛಾಂದೋಗ್ಯ ಉಪನಿಷತ್ತಿನ ಪ್ರಕಾರ ಅವರು ತಮ್ಮ ಶಿಕ್ಷಣವನ್ನು ಅಂಗೀರಸ ವಂಶದ ಘೋರ ಋಷಿಯ ಬಳಿ ಪಡೆಯುತ್ತಾರೆ.
ಶ್ರೀ ಕೃಷ್ಣ ತನ್ನ ಧೈರ್ಯ, ಸಾಹಸ ಮತ್ತು ತನ್ನ ಅತಿಮಾನುಷ ನಾಯಕತ್ವದ ಗುಣಗಳಿಂದಾಗಿ ಯಾದವರ ಪ್ರೀತ್ಯಾದರಗಳಿಗೆ ಒಳಗಾಗುತ್ತಾನೆ. ಆತನ ಸೋದರ ಮಾವನೂ ಮಥುರಾ ರಾಜನೂ ಆದ ಕಂಸನನ್ನು ಕೊಂದು ಕಂಸನ ತಂದೆ ಉಗ್ರಸೇನನಿಗೆ ಮತ್ತೆ ಪಟ್ಟ ಕಟ್ಟಿಸುತ್ತಾನೆ. (ಈ ಕಂಸ ಮಹಾದುಷ್ಟನೂ ದರ್ಪಿಷ್ಟನೂ ಆಗಿದ್ದು ಮಥುರಾ ಮತ್ತು ಬೃಂದಾವನದಲ್ಲಿದ್ದ ಯಾದವರಿಗೆ ಬಹಳ ಕಿರುಕುಳ ಕೊಡುತ್ತಿದ್ದ. ತನ್ನ ತಂದೆಯನ್ನು ಸೆರೆಯಲ್ಲಿಟ್ಟು ತಾನು ರಾಜನಾಗಿದ್ದ) ಅಲ್ಲದೆ ಕಂಸನ ಮರಣಾನಂತರ ಅತ್ಯಂತ ಪ್ರಬಲ ಚಕ್ರವರ್ತಿ ಎನಿಸಿದ್ದ ಆತನ ಮಾನ ಜರಾಸಂಧ ಮಥುರಾದ ಮೇಲೆ ದಂಡೆತ್ತಿ ಬಂದಾಗ ಶ್ರೀ ಕೃಷ್ಣನ ನಾಯಕತ್ವದಲ್ಲಿ ಯಾದವರು ಅವನನ್ನು ಹಿಮ್ಮೆಟ್ಟಿಸಿದರು. ಇನ್ನೊಬ್ಬ ರಾಜ ಕಾಲಜವನನು ಮಥುರಾದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಶ್ರೀ ಕೃಷ್ಣ ಯುದ್ಧ ಭೂಮಿಯಲ್ಲಿ ಕೊಂದುಹಾಕಿದ. ಕಾಲಜವನ ಸತ್ತದ್ದನ್ನು ಕಂಡ ಸೈನ್ಯ ಯುದ್ಧರಂಗದಿಂದ ಪಲಾಯನ ಮಾಡಿತು.
ನಂತರ ಶ್ರೀ ಕೃಷ್ಣ ಸಲಹೆಯ ಮೇರೆಗೆ ಮಥುರಾ ಮತ್ತು ಬೃಂದಾವನದ ಯಾದವರು ಅವೆರಡೂ ಪಟ್ಟಣಗಳನ್ನು ತೆರವು ಮಾಡಿ ರಾಯ್ ಬಟಕ್ ಬೆಟ್ಟಗಳ ಮಧ್ಯೆ ಹೊಸದಾಗಿ ನಿರ್ಮಿಸಿದ ರಾಜಧಾನಿ ದ್ವಾರಕೆಗೆ ಬಂದು ನೆಲೆಸುತ್ತಾರೆ. ಹೀಗೆ ಯಾದವರ ಮುಖ್ಯಸ್ಥನಾದ ಉಗ್ರಸೇನ ಮತ್ತು ಉಳಿದ ಯಾದವರು ಮಥುರಾ ಮತ್ತು ಬೃಂದಾವನಗಳಿಂದ ದ್ವಾರಕೆಗೆ ತಮ್ಮ ತಮ್ಮ ಕುಟುಂಬದ ಸದಸ್ಯರೊಂದಿಗೆ ವಲಸೆ ಬರುತ್ತಾರೆ. ನಂತರ ದ್ವಾರಕೆಯಿಂದ ಹೊರಟ ಶ್ರೀ ಕೃಷ್ಣ ಹಿಮಾಲಯ ತಲುಪುತ್ತಾನೆ. ಅಲ್ಲಿ 10 ವರ್ಷಗಳ ಕಾಲ ತಪಸ್ಸಿಗೆ ಕೂರುತ್ತಾನೆ. ತನ್ನ ಜೀವಿತಾವಧಿಯಲ್ಲಿ ಶ್ರೀ ಕೃಷ್ಣ ಸಮಾಜದ ಶಾಂತಿ ಮತ್ತು ಸಂತೋಷಕ್ಕಾಗಿ ಹಲವಾರು ರಾಕ್ಷಸರನ್ನು ಕೊಲ್ಲುತ್ತಾನೆ. ಒಮ್ಮೆ ಕಾಶಿಯ ರಾಜ ಪೌಂಡ್ರನೆಎಂಬುವವನು ಶ್ರೀ ಕೃಷ್ಣನನ್ನು ಅವನ ಬುದ್ಧಿವಂತಿಕೆಯನ್ನು ಕೆಣಕಿ ಅವನಿಂದ ಕೊಲ್ಲಲ್ಪಡುತ್ತಾನೆ. ಇದರಿಂದ ಕೆರಳಿದ ವಾರಣಾಸಿಯ ಇನ್ನಿತರ ರಾಜರುಗಳು ಶ್ರೀ ಕೃಷ್ಣನ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾರೆ. ಆದರೆ ಅವರೆಲ್ಲರನ್ನು ಶ್ರೀ ಕೃಷ್ಣ ಸೋಲಿಸಿದ್ದಲ್ಲದೆ ಅವರ ರಾಜ್ಯಗಳನ್ನು ನಾಶ ಮಾಡುತ್ತಾನೆ. ಕ್ರಿ.ಪೂ. 1414ರಲ್ಲಿ ನಡೆಯಿತೆಂದು ಹೇಳಲಾದ ಮಹಾಭಾರತ ಯುದ್ಧದ ಸೂತ್ರಧಾರಿ ಈ ಶ್ರೀ ಕೃಷ್ಣ (ವಿವರಗಳಿಗೆ ವಿ.ಡಿ. ಮಹಾಜನ್ ಅವರ ಪ್ರಾಚೀನ ಭಾರತ ಕೃತಿಯ ಪುಟ 760ನ್ನು ನೋಡಿ). ಮಹಾಭಾರತ ಯುದ್ಧದ ಕಾಲಾವಧಿಯನ್ನು ವೈಷ್ಣವ ಪುರಾಣ, ಮತ್ಸ್ಯ ಪುರಾಣ ಮತ್ತು ವಾಯವ್ಯ ಪುರಾಣಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗಿದೆ.

ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ ವಿವರಗಳು ಹಿಂದೂಗಳ ಪವಿತ್ರ ಗ್ರಂಥವೆಂದು ಭಾವಿಸಲಾದ ಭಗವದ್ಗೀತೆಯಲ್ಲಿವೆ. ಪಾಂಡವರ ವಿಜಯದೊಂದಿಗೆ ಮುಕ್ತಾಯವಾದ ಮಹಾಭಾರತದ ಯುದ್ಧ ಹಲವಾರು ರಾಜರುಗಳು ಮತ್ತು ರಾಜಕುಮಾರರನ್ನು ಬಲಿತೆಗೆದುಕೊಳ್ಳುತ್ತದೆ. ರಾಜನಾಗಿ ಪಟ್ಟಾಭಿಷಿಕ್ತನಾದ ಯುಧಿಷ್ಟಿರನು ಹಸ್ತಿನಾವತಿಯನ್ನು ಆಳುತ್ತಾನೆ.
ರಾಜಕೀಯ ಮುತ್ಸದ್ದಿಯಾದ ಶ್ರೀ ಕೃಷ್ಣ ಯುದ್ದೋನ್ಮತ್ತ ರಾಜ್ಯಗಳನ್ನು ಒಗ್ಗೂಡಿಸಿ ಭಾರತವನ್ನು ಏಕ ಚಕ್ರಾಧಿಪತ್ಯದ ಅಡಿ ತರುತ್ತಾನೆ. ಈ ಸಾಮ್ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಶ್ರೀ ಕೃಷ್ಣನ ಹೆಗಲೇರುತ್ತದೆ. ಕೆಲವು ಕಾಲಾಂತರದಲ್ಲಿ ರಾಜರುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿ ಬಿರುಕು ಮೂಡುತ್ತದೆ. ಇದರಿಂದಾಗಿ ಶ್ರೀ ಕೃಷ್ಣನಿಗೆ ಬೇಸರವಾದರೂ ಅವರುಗಳ ಮಧ್ಯೆ ಮೂಡಿರುವ ಭಿನ್ನಾಭಿಪ್ರಯವನ್ನು ಹೋಗಲಾಡಿಸಿ ಚಕ್ರಾಧಿಪತ್ಯದಲ್ಲಿ ಸ್ಥಿರತೆಯನ್ನು ತರಲೆತ್ನಿಸುತ್ತಾನೆ. ಅದೇ ರೀತಿ ಪ್ರಪಂಚಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ರಾಜನೆಂಬ ಕೀರ್ತಿ ಶ್ರೀ ಕೃಷ್ಣನೆಂಬುದು ವಾಡಿಕೆ.

ಪ್ರಪಂಚವನ್ನು ಆಳಿದ ರಾಜರುಗಳಲ್ಲಿ ಅತೀ ಹೆಚ್ಚಿನವರು ಯಾದವರೇ ಆದರೆ ಇತ್ತೀಚಿನ ದಿನಮಾನಗಳಲ್ಲಿ ಯಾದವರು ಶಿಕ್ಷಣದಿಂದ, ರಾಜಕೀಯದಿಂದ ಆರ್ಥಿಕವಾಗಿ ತೀರ ಹಿಂದುಳಿದಿರುವುದು ಶೋಷಣೀಯ ಸಂಗತಿ.
ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಯಾದವರೇ ತುಂಬಾ ಸ್ಟ್ರಾಂಗ್. ಭಾರತದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಇರುವ ಒಂದೇ ಜಾತಿಯ ಸಮುದಾಯವೆಂದರೆ ಯಾದವರು. ಕನ್ಯಾಕುಮಾರಿಯಿಂದ, ಕಾಶ್ಮೀರದವರೆಗೆ ಎಲ್ಲಾ ರಾಜ್ಯಗಳಲ್ಲಿಯೂ ಇರುವ ಸಮುದಾಯ ಅದು ಶ್ರೀ ಕೃಷ್ಣನ ವಂಶಸ್ಥರಾದ ಯಾದವ ಕುಲದವರು.
-(ಸಂಗ್ರಹ) ಬಾಡದ ಆನಂದರಾಜ್,
ಅಧ್ಯಕ್ಷರು, ಯಾದವ ಮಹಾಸಭಾ ದಾವಣಗೆರೆ.








