ದಾವಣಗೆರೆ :
ನಾಳೆ ನಡೆಯಲಿರುವ ಇಲ್ಲಿನ ವಿನೋಬನಗರದ ಗಣೇಶ ವಿಸರ್ಜನೆಯ ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮೆರವಣಿಗೆಯ ಮೇಲೆ ನಿಗಾ ಇಡಲು ಸಿಸಿ ಕ್ಯಾಮೇರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆರವಣಿಗೆಯ ಹಿನ್ನೆಲೆಯಲ್ಲಿ ವಿನೋಬನಗರ ಸೇರಿದಂತೆ, ಇತರೆ ಪ್ರದೇಶಗಳಲ್ಲಿರುವ ದೇವಸ್ಥಾನ, ಮಸೀದಿ, ಚರ್ಚು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಈಗಾಗಲೇ ಇರುವ 100 ಸಿಸಿ ಕ್ಯಾಮೇರಾಗಳ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟದ 175 ಸಿಸಿ ಕ್ಯಾಮೇರಾಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಈ ಸಿಸಿ ಕ್ಯಾಮೇರಾಗಳು ಮೆರವಣಿಗೆ ಹಾಗೂ ಗಣೇಶೋತ್ಸವಗಳಲ್ಲಿ ಭಾಗವಹಿಸುವ ಮಹಿಳೆಯರ ಸರಗಳ್ಳತನ ಮಾಡುವವರು ಹಾಗೂ ಅಸಭ್ಯವಾಗಿ ವರ್ತಿಸುವವರ ಮೇಲೆ ನಿಗಾ ಇಡಲಿವೆ ಎಂದು ಹೇಳಿದರು.
ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ನಾಲ್ವರು ಡಿವೈಎಸ್ಪಿಗಳು, 10 ಜನ ವೃತ್ತ ನಿರೀಕ್ಷಕರು, 30 ಜನ ಪಿಎಸ್ಐ, 75 ಜನ ಪ್ರೊಬೇಷನರಿ ಪಿಎಸ್ಐಗಳು, 75 ಜನ ಎಎಸ್ಐಗಳು, 250 ಜನ ಗೃಹ ರಕ್ಷಕ ದಳದ ಸಿಬ್ಬಂದಿ, 4 ಕೆಎಸ್ಆರ್ಪಿ ತುಕಡಿ ಹಾಗೂ 8 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ ಒಟ್ಟು 800 ಜನ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, ಗಣೇಶೋತ್ಸವ ಸಮಿತಿಯವರು ಸಹ ಸ್ವಯಂ ಸೇವಕರನ್ನು ನಿಯೋಜಿಸುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಕುಡಿದು ಮೆರವಣಿಗೆಯಲ್ಲಿ ಭಾಗವಹಿಸಿ ಅಸಭ್ಯವಾಗಿ ಹಾಗೂ ಅಶ್ಲೀಲವಾಗಿ ವರ್ತಿಸುವವರನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿನೋಬ ನಗರದ ಗಣೇಶೋತ್ಸವದ ಮೆರವಣಿಗೆಯ ಹಿನ್ನೆಲೆಯಲ್ಲಿ ಸೆ.21ರ ಬೆಳಿಗ್ಗೆ 10 ಗಂಟೆಯಿಂದ ಸೆ.22ರ ಬೆಳಿಗ್ಗೆಯ ವರೆಗೆ ಮದ್ಯ ನಿಷೇಧಿಸಲಾಗಿದೆ ಎಂದ ಅವರು, ಡಿಜೆಗೆ ನಾಲ್ಕು ಬಾಕ್ಸ್ ಅಳವಡಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗದಿತ ಡೇಸಿಬಲ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೌಂಡ್ ಇಟ್ಟರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಎಂ.ಬಾಬು, ವೃತ್ತ ನಿರೀಕ್ಷಕ ಈ. ಆನಂದ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
