ಬೆಂಗಳೂರು-
ಜಿಮ್ ತರಬೇತುದಾರ ಮಾರುತಿ ಗೌಡನನ್ನು ಅಪಹರಿಸಿ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಸೇರಿರುವ ದುನಿಯಾ ವಿಜಯ್ 2 ದಿನಗಳನ್ನು ಜೈಲಿನಲ್ಲಿ ಕಳೆದಿದ್ದು ಜೈಲಿನ ಊಟದ ಜೊತೆಗೆ ಮನೆ ಊಟ ತರಿಸಿಕೊಂಡು ಸವಿದಿದ್ದಾರೆ.
ವಿಜಯ್ ಜೊತೆಗೆ ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್,ಕೋಚ್ ಮಣಿ ಕೂಡಾ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸೋಮವಾರ ಜಾಮೀನು ಸಿಗದ ಹಿನ್ನೆಲೆ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ರಾತ್ರಿ 11 ಗಂಟೆಗೆ ನಿದ್ರೆಗೆ ಜಾರಿದ್ದ ವಿಜಯ್, ಚಿತ್ರರಂಗದಿಂದ ನನ್ನನ್ನು ನೋಡಲು ಯಾರೂ ಬಂದಿಲ್ಲ ಎಂದು ಸಿಬ್ಬಂದಿ ಜೊತೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ 5.30ಕ್ಕೆ ಎಚ್ಚರಗೊಂಡ ವಿಜಯ್ ನಿತ್ಯಕರ್ಮಗಳನ್ನು ಮುಗಿಸಿ ಚಾಪೆ ಮೇಲೆ ಬಹಳ ಹೊತ್ತು ಹಾಗೇ ಬೇಸರದಿಂದ ಕುಳಿತಿದ್ದರು ಎಂದು ಜೈಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಿನ್ನೆ ಪತ್ನಿ ಕೀರ್ತಿ ಗೌಡ 2 ಗಂಟೆ ಕಾಲ ಮಾತುಕತೆ ನಡೆಸಿ
ವಾಪಸಾಗಿದ್ದು,ಮಂಗಳವಾರ ಭೇಟಿ ಮಾಡಿ ಮನೆ ಊಟ ನೀಡಿದರು .ವಿಜಯ್ ಚಿತ್ರಾನ್ನ ತಿಂದು ಸ್ನೇಹಿತರು ತಂದ ಹಣ್ಣು ಹಂಪಲು ಕೂಡಾ ಸೇವಿಸಿದ್ದಾರೆ. ದಿನಪತ್ರಿಕೆ ಕೇಳಿ ಪಡೆದು ಓದಿದ್ದಾರೆ ಎಂದು ತಿಳಿದುಬಂದಿದೆ.
ಮಾರುತಿ ಗೌಡ ಚೇತರಿಕೆ ಈ ನಡುವೆ ನಟ ದುನಿಯಾ ವಿಜಯ್ ಮತ್ತವರ ಗ್ಯಾಂಗ್ನಿಂದ ಹಲ್ಲೆಗೊಳಗಾಗಿದ್ದ ಜಿಮ್ ತರಬೇತುದಾರ ಮಾರುತಿ ಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಗೌಡ ಮುಖದ ಊತ ಇನ್ನೂ ಕಡಿಮೆಯಾಗಿಲ್ಲ, ಬಾಯಿಗೂ ಹೊಲಿಗೆ ಹಾಕಲಾಗಿದ್ದು, ಜ್ಯೂಸ್ ಮಾತ್ರ ಸೇವಿಸುತ್ತಿದ್ದಾರೆ. ಅವರ ಆಹಾರ ಪದ್ಧತಿಯನ್ನು ಸಂಪೂರ್ಣ ಬದಲಿಸಲಾಗಿದೆ. ಇನ್ನೂ 2-3 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಕಣ್ಣು, ತಲೆಗೆ ಬಲವಾದ ಏಟು ಬಿದ್ದ ಹಿನ್ನಲೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಆದರೆ ಕಣ್ಣಿನ ದೃಷ್ಟಿ ಬಗ್ಗೆ ಈವರೆಗೆ ವೈದ್ಯರು ನಿಖರವಾದ ಮಾಹಿತಿ ನೀಡುತ್ತಿಲ್ಲ.








