ಚುನಾವಣೆಯಲ್ಲಿ ಶಾಂತಿಭಂಗ ಉಂಟು ಮಾಡಿದ್ರೆ ನಿರ್ಧಾಕ್ಷಿಣ್ಯ ಕ್ರಮ: ಎಸ್ಪಿ ಅರುಣ ರಂಗರಾಜನ್

ಬಳ್ಳಾರಿ

         ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ಜರುಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಮಂಗಳವಾರ ನಗರದ ಡಿಎಆರ್ ಮೈದಾನದಲ್ಲಿ ರೌಡಿಗಳು ಮತ್ತು ಗೂಂಡಾಗಳ ಪರೇಡ್‍ನ್ನು ನಡೆಸಿದರು.

          ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ವಿಭಾಗದ ರೌಡಿಗಳು, ಗೂಂಡಾಗಳು ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಿಡಿಗೇಡಿಗಳು ಸೇರಿದಂತೆ 400 ಜನ ರೌಡಿಗಳು ಈ ಪರೇಡ್‍ನಲ್ಲಿ ಪಾಲ್ಗೊಂಡಿದ್ದರು.

         ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಮತ್ತು ಎಎಸ್ಪಿ ಜಗದೀಶ ಅವರು ಪರೇಡ್‍ನಲ್ಲಿ ಭಾಗವಹಿಸಿದ್ದ ರೌಡಿಗಳ ಹಿಂದಿನ ಜಾತಕ ಹಾಗೂ ಯಾವ ಪ್ರಕರಣದಡಿ ರೌಡಿಪಟ್ಟ ಅಲಂಕರಿಸಿದ್ದಾರೆ ಎಂಬುದನ್ನು ಸಂಬಂಧಿಸಿದ ಠಾಣೆಗಳ ಪಿಎಸ್‍ಐಗಳ ಮೂಲಕ ಪೂರ್ವಾಪರವನ್ನು ರೌಡಿಗಳ ಸಮ್ಮುಖದಲ್ಲಿಯೇ ತಿಳಿದುಕೊಂಡರು.

         ನಂತರ ಮಾತನಾಡಿದ ಎಸ್ಪಿ ಅರುಣ ರಂಗರಾಜನ್ ಅವರು, ಈ ಲೋಕಸಭಾ ಉಪಚುನಾವಣೆ ಅತ್ಯಂತ ಶಾಂತಿಯುತವಾಗಿ ಯಾವುದೇ ರೀತಿಯ ಗಲಾಟೆ ಮತ್ತು ಗೊಂದಲಗಳು ಆಗದಂತೆ ನಡೆಯುವ ನಿಟ್ಟಿನಲ್ಲಿ ನಮ್ಮೊಂದಿಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ಅನೈತಿಕ ಚಟುವಟಿಕೆಗಳನ್ನು ಮಾಡುವುದರ ಮೂಲಕ ರೌಡಿಪಟ್ಟ ಅಲಂಕರಿಸಿರುವ ತಮ್ಮ ವಿರುದ್ಧ ಕಾನೂನಿನ ಅನ್ವಯ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

      ಈ ಉಪಚುನಾವಣೆ ಸಂದರ್ಭದಲ್ಲಿ ಶಾಂತಿಭಂಗ ಚಟುವಟಿಕೆಗಳಿಗೆ ಕೈಹಾಕದೇ ಶಾಂತಿಯುತವಾಗಿ ಚುನಾವಣೆ ನಡೆಯುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು; ಅದನ್ನು ತಮ್ಮ ರೌಡಿಶೀಟರ್ ಪಟ್ಟಿಯಲ್ಲಿ ನಮೂದಿಸಲಾಗುವುದು ಮತ್ತು ರೌಡಿಶೀಟರ್ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಯುವ ಸಂದರ್ಭದಲ್ಲಿ ಸಹಕಾರಿಯಾಗಲಿದೆ. ಅದನ್ನು ಬಿಟ್ಟು ಬಾಲಬಿಚ್ಚಿದರೇ ಕ್ರಮ ನಿಶ್ಚಿತ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದರು.

      ಜಿಲ್ಲೆಯಲ್ಲಿ 300 ಜನ ಕಮ್ಯುನಲ್ ಗುಂಡಾಗಳು,40 ಜನ ಕಿಡಿಗೇಡಿಗಳು ಸೇರಿದಂತೆ 1796 ರೌಡಿಗಳಿದ್ದಾರೆ. ಈ ಲೋಕಸಭಾ ಉಪಚುನಾವಣೆ ಶಾಂತಿಯುತವಾಗಿ ಜರುಗಿಸುವ ನಿಟ್ಟಿನಲ್ಲಿ ಹೊಸಪೇಟೆ,ಕೂಡ್ಲಿಗಿ ಸೇರಿದಂತೆ ಎಲ್ಲೆಡೆ ರೌಡಿಗಳ ಪರೇಡ್ ಮಾಡಲು ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದ್ದು,ಅವರು ಅ.31ರೊಳಗೆ ಮಾಡಲಿದ್ದಾರೆ ಎಂದರು.

      ಇಷ್ಟೇಲ್ಲಾ ಪರೇಡ್ ಮಾಡಿದಾಗಿಯೂ ಈ ಉಪಚುನಾವಣೆಗೆ ತೊಂದರೆ ಉಂಟುಮಾಡಲು ಯತ್ನಿಸುತ್ತಾರೆ ಎಂಬ ಮಾಹಿತಿ ಬಂದರೇ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಉಮೇಶನಾಯಕ್ ಸೇರಿದಂತೆ ಸಿಪಿಐ,ಪಿಎಸ್‍ಐಗಳು,ಪೊಲೀಸ್‍ಸಿಬ್ಬಂದಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link