ತ್ಯಾಗ ಮನೋಭಾವ ಮೈಗೂಡಿಸಿಕೊಳ್ಳಲು ಕರೆ

ದಾವಣಗೆರೆ:

        ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ತ್ಯಾಗ ಮನೋಭಾವ ಬೆಳೆಸಿಕೊಳ್ಳುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಕರೆ ನೀಡಿದರು.

          ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಅ.22ರಿಂದ ನಗರದಲ್ಲಿ ಯುವತಿಯರಿಗೆ ಆತ್ಮರಕ್ಷಣೆಗಾಗಿ ಸಮರ ಕಲೆ ಕಲಿಸುವ ಉದ್ದೇಶದಿಂದ ಏರ್ಪಡಿಸಿದ್ದ ಮಿಷನ್ ಸಾಹಸಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

           ತ್ಯಾಗ-ಬಲಿದಾನ ಮನೋಭಾವ ಇರುವವರಿಂದಲೇ ಮಾತ್ರವೇ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ತ್ಯಾಗ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದರೆ, ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ ಎಂದರು.

           ಎಲ್ಲರಿಗೂ ದೇಶಸೇವೆ ಮಾಡುವ ಅವಕಾಶ ಸಿಗುವುದಿಲ್ಲ. ಸೇವೆ ಮಾಡುವ ಸದಾವಕಾಶ ಪಡೆದವರು ಪುಣ್ಯವಂತರಾಗಿದ್ದಾರೆ. ಅಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜದ ಕೆಲಸ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ತಾಳ್ಮೆ ಬೇಕಾಗಿದೆ. ವಿದ್ಯಾರ್ಥಿ ಜೀವನವು ಸುವರ್ಣ ಸಮಯವಾಗಿದ್ದು, ನಾವು ಮುಂದೇನಾಗಬೇಕೆಂಬುದನ್ನು ಈಗಲೇ ನಿರ್ಧರಿಸಬೇಕು. ಆ ದಿಕ್ಕಿನಲ್ಲಿ ಶ್ರಮಪೂರ್ವಕವಾಗಿ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.

          ನಮ್ಮ ಪ್ರಧಾನಿ ನರೇಂದ್ರ ಮೋದಿ ಸಹ ಇದೇ ಹಾದಿಯಲ್ಲಿ ನಡೆದು, ಇಂದು ಈ ಹಂತವನ್ನು ತಲುಪಿ, ದೇಶಕ್ಕಾಗಿ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಗತ್ತಿನಲ್ಲಿ 6ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ತಂದಿದ್ದಾರೆ. ಈಗಾಗಲೇ ನಾವು ಅಭಿವೃದ್ಧಿ ಹೊಂದಿದ ದೇಶದಲ್ಲಿ ಬದುಕುತ್ತಿದ್ದು, ಕೆಲವೇ ದಿನಗಳಲ್ಲಿ ಅಮೇರಿಕಾವನ್ನೂ ಹಿಂದಿಕ್ಕುವುದರಲ್ಲಿ ಅನುಮಾನವಿಲ್ಲ ಎಂದರು.
ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಜ್ಞಾನ, ಶೀಲ, ಏಕತೆಯ ಧ್ಯೇಯದೊಂದಿಗೆ ಮಹತ್ವದ ಕೆಲಸ ಮಾಡುತ್ತಿದೆ. ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಎಬಿವಿಪಿ ಸಂಘಟನೆಯವರು ಸುಂದರ ಸಮಾಜ ನಿರ್ಮಿಸಲು ಮುಂದಾಗಬೇಕು. ಸಂಘಟನೆಯ ಯುವತಿಯರು ಕಿತ್ತೂರು ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿಯನ್ನು ಆದರ್ಶವಾಗಿ ತೆಗೆದುಕೊಂಡು, ಹಿಡಿದ ಕೆಲಸ ಕೈಗೂಡುವವರೆಗೂ ಛಲ ಬಿಡಬಾರದು ಎಂದು ಸಲಹೆ ನೀಡಿದರು.

        ಎಬಿವಿಪಿ ವಿಭಾಗ ಪ್ರಮುಖ್ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, 1949ರಲ್ಲಿ ಜನ್ಮ ತಳೆದ ಎಬಿವಿಪಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿ ಪಡೆಯನ್ನು ಹೊಂದಿದೆ. ವಿದ್ಯಾರ್ಥಿಗಳನ್ನು ಸತ್ಪ್ರಜೆಗಳಾಗಿ ರೂಪಿಸುತ್ತಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಮಹಿಳೆಯರಿಗೆ ಈಗಲೂ ಸ್ಥಾನಮಾನ ಗೌರವ ಸಿಗುತ್ತಿಲ್ಲ ಎಂದು ವಿಷಾಧಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಂದ ಆತ್ಮರಕ್ಷಣೆ ಕಲೆಯ ಮಹಾ ಪ್ರದರ್ಶನ್ ನಡೆಯಿತು.

        ಕಾರ್ಯಕ್ರಮದಲ್ಲಿ ಕೆಟಿಜೆ ನಗರ ಪಿಎಸ್‍ಐ ಪಾರ್ವತಿ ಬಾಯಿ, ಎಬಿವಿಪಿ ನಗರಾಧ್ಯಕ್ಷ ಪ್ರದೀಪ್ ಕುಮಾರ್, ನಗರ ಕಾರ್ಯದರ್ಶಿ ರಾಕೇಶ್, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಭವ್ಯ, ನಗರ ವಿದ್ಯಾರ್ಥಿನಿ ಪ್ರಮುಖ್ ಸ್ವಾತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link