ತುರುವೇಕೆರೆ
ತಾಲ್ಲೂಕಿನ ಗ್ರಾಮ ಪಂಚಾಯ್ತಿ ನೌಕರರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ರಂಗನಾಥ್ ಮಾತನಾಡಿ ರಾಜ್ಯ ಸರ್ಕಾರ ಕಳೆದ ಒಂದು ತಿಂಗಳ ಹಿಂದೆ ರಾಜ್ಯದ ಗ್ರಾಮ ಪಂಚಾಯ್ತಿಯ 18 ಸಾವಿರ ಸಿಬ್ಬಂದಿಗೆ ಇ.ಎಫ್.ಎಂ.ಎಸ್. ನಲ್ಲಿ ಸೇರಿಸಲು ಆದೇಶ ಹೊರಡಿಸಿದ್ದರು. ಆದರೆ ಪಿಡಿಓ ಹಾಗೂ ಇಓಗಳು ಈವರೆಗೆ ನೌಕರರ ವಿವರ ಸಂಗ್ರಹಿಸಿ ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿಗೆ ತಲುಪಿಸಿಲ್ಲ. ಕೂಡಲೆ ವಿವರವನ್ನು ಕಳಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು.
ಕಡತವನ್ನು ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಅಪರ ಕಾರ್ಯದರ್ಶಿ ಎಂ.ಎಸ್.ಸ್ವಾಮಿ ವರದಿಯಂತೆ 3 ಸಿಸ್ಟನ್ಗಳು ಇರುವ ಕಿರು ನೀರು ಪೂರೈಕೆಗೆ ಸಿಬ್ಬಂದಿ ಹುದ್ದೆ ಸೃಷ್ಟಿಸಬೇಕು, ಐ.ಡಿ.ಪಿ ಸಾಲಪ್ಪ ವರದಿಯಂತೆ ಕಸಗುಡಿಸುವರ ಹುದ್ದೆ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಎಸ್.ಎಸ್.ಎಲ್.ಸಿ ಪಾಸಾದವರಿಗೆ ಕಾರ್ಯದರ್ಶಿ 2 ಹುದ್ದೆಗೆ ಬಡ್ತಿ ನೀಡಬೇಕು, ಆರೋಗ್ಯಕಾರ್ಡ್ ನೀಡಬೇಕು, ಭಾನುವಾರದ ಕೆಲಸಕ್ಕೆ ಹೆಚ್ಚುವರಿ ವೇತನ ಅಥವಾ ರಜೆ ನೀಡುವುದು ಸೇರಿದಂತೆ ಗ್ರಾಮ ಪಂಚಾಯ್ತಿ ಬಲವರ್ಧನೆಗೆ ಈ ಹೊಸ ಹುದ್ದೆಗಳನ್ನು ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇ.ಓ ಗೈರಾಗಿದ್ದ ಕಾರಣ ಎನ್.ಆರ್.ಇ.ಜಿ.ಎ.ಡಿ. ಮಂಜಮ್ಮ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ನಟರಾಜು, ಖಜಾಂಚಿ ರಮೇಶ್ ಪದಾಧಿಕಾರಿಗಳಾದ ಶಿವರಾಮ್, ರಂಗರಾಮೇಗೌಡ, ಚೇತನ್, ಬಸವರಾಜು, ನಾಗರಾಜು, ಗಂಗಾಧರ್, ರಂಗಪ್ಪ, ತಮ್ಮಣ್ಣಗೌಡ, ಸೋಮಶೇಖರ್ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








