ದಾವಣಗೆರೆ:
ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಜನರ ಆರೋಗ್ಯ ಸುಧಾರಣೆ ಮಾಡುವುದರಲ್ಲಿ ಕರ್ನಾಟಕ ವೈದ್ಯರು ಮುಂದೆ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಎಸ್.ಎಸ್.ಕನ್ವೆನ್ಷನ್ ಹಾಲ್ನಲ್ಲಿ ಶನಿವಾರದಿಂದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಏರ್ಪಡಿಸಿರುವ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಮಟ್ಟದ ಸಮ್ಮೇಳನ ಸಂಕಲ್ಪ-2018ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷಯ, ಪೋಲಿಯೋ ಸೇರಿದಂತೆ ಇತರೆ ಮಾರಕ ರೋಗಗಳನ್ನು ನಿರ್ಮೂಲನೆ ಮಾಡಿರುವುದು ಸೇರಿದಂತೆ ಇತರೆ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಮ್ಮ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆಂದು ಶ್ಲಾಘಿಸಿದರು.
ಕೆಲವರು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಮಾಧ್ಯಮಗಳ ಮುಂದೆ ಶೋ ಕೊಡಲು ವೈದ್ಯರ ವಿರುದ್ಧ ಹರಿಹಾಯುತ್ತಾರೆ. ಅಂಥವ ವ್ಯಕ್ತಿತ್ವ ನನ್ನದಲ್ಲ. ನಾನು ವೈದ್ಯರ ಮೇಲೆ ಗದಾಪ್ರಹಾರ ನಡೆಸುವವನಲ್ಲ. ಆಸ್ಪತ್ರೆಗಳಿಗೆ ಕೊಡಬೇಕಾದ ಸೌಲಭ್ಯ ಕಲ್ಪಿಸದೇ, ಆಸ್ಪತ್ರೆಗಳ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡದೇ, ವೈದ್ಯರ ವಿರುದ್ಧ ಗದಾಪ್ರಹಾರ ಮಾಡಿದರೆ ಏನು ಪ್ರಯೋಜನ ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ, ಆಸ್ಪತ್ರೆಗಳ ಉನ್ನತೀಕರಣಕ್ಕೆ ಶ್ರಮಿಸಿಸುವ ಮೂಲಕ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಅವರು, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ಕರ್ನಾಟಕ ಆರೋಗ್ಯಶ್ರೀ ಯೋಜನೆಗಳನ್ನು ವಿಲೀನಗೊಳಿಸಿ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 5 ಲಕ್ಷ ರೂ. ವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ 1.50 ಲಕ್ಷ ರೂ. ವರೆಗೆ ಸುಮಾರು 1650 ವಿಧಗಳಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಸೇವೆ ನೀಡುತ್ತಿದ್ದು, ಕೇಂದ್ರ ಸರ್ಕಾರ ಇದಕ್ಕಾಗಿ ಕೇವಲ 200 ಕೋಟಿ ಪಾವತಿಸಲಿದ್ದು, ಇನ್ನುಳಿದ ಹಣವನ್ನು ರಾಜ್ಯ ಸರ್ಕಾರವೇ ಪಾವತಿಸುವುದರಿಂದ ನಮ್ಮದೇ ಸಿಂಹ ಪಾಲಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಕ್ಟೀಸ್ ನಡೆಸಲು ಅವಕಾಶ ಕೊಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿರುವ ಲೋಪದೋಷಗಳ ಬಗ್ಗೆ ಚರ್ಚಿಸಿ, ಸರ್ಕಾರದ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಬಗ್ಗೆ ಸಂಕಲ್ಪ ಮಾಡಬೇಕೆಂದು ಹೇಳಿದರು.
ಆನರು ವೈದ್ಯರನ್ನು ದೇವರೆಂದು ಭಾವಿಸಿ ಬರುತ್ತಾರೆ. ನೀವು ನೀಡುವ ಚಿಕಿತ್ಸೆ ಹಾಗೂ ಸಲಹೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲಿದೆ. ಇದೊಂದು ಪವಿತ್ರ ವೃತ್ತಿಯಾಗಿದ್ದು, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ್ ಪಾಟೀಲ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮೇಲೆ ವಿಶ್ವಾಸವಿಟ್ಟು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, 2013-14ರಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ 3.57 ಕೋಟಿ ಜನರು ಬಂದಿದ್ದರು. ಆದರೆ, ಅದು ಕಳೆದ ವರ್ಷ 5.75 ಕೋಟಿ ದಾಟಿದೆ. ಕರ್ನಾಟಕ ಆರೋಗ್ರಶ್ರೀ ಹಾಗೂ ಆಯುಷ್ಮಾನ್ ಭಾರತ್ ಯೋಜನೆಗಳ ಮೂಲಕ 1.30 ಕೋಟಿ ಕುಟುಂಗಳಿಗೆ ಆರೋಗ್ಯ ಸೇವೆ ನೀಡಲು ಸರ್ಕಾರ ನಿರ್ಧರಿಸಿದೆ. ನಮ್ಮ ರಾಜ್ಯದ ಶ್ರಮದ ಫಲವಾಗಿ ರಾಜ್ಯ ಸರ್ಕಾರಕ್ಕೆ ದೇಶದಲ್ಲಿಯೇ ನಮ್ಮ ರಾಜ್ಯಕ್ಕೆ ಒಳ ರೋಗಿಗಳ ವಿಭಾಗದಲ್ಲಿ 2ನೇ, ಮರಣ ಪ್ರಮಾಣ ತಗ್ಗಿಸುವುದರಲ್ಲಿ 3ನೇ ಹಾಗೂ ಹೊರ ರೋಗಿಗಳ ವಿಭಾಗದಲ್ಲಿ 3ನೇ ಸ್ಥಾನದಲ್ಲಿದ್ದು, ಈ ಮೂರು ವಿಭಾಗಗಳಲ್ಲೂ ನಮ್ಮ ಸರ್ಕಾರಕ್ಕೆ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.
ಹೆಚ್1ಎನ್1 ರೋಗ ನಿಯಂತ್ರಿಸುವುದರಲ್ಲಿಯೂ ಕರ್ನಾಟಕದ ವೈದ್ಯರು ಮುಂದೆ ಇದ್ದಾರೆ. ನಮ್ಮಲ್ಲಿ 670 ಪ್ರಕರಣಗಳು ದಾಖಲಾಗಿ, 19 ಬಾಧಿತರು ಮರಣ ಹೊಂದಿದ್ದರೆ, ಗುಜರಾತ್ನಲ್ಲಿ 1600 ಜನರಲ್ಲಿ ಹೆಚ್1ಎನ್1 ಕಾಣಿಸಿಕೊಂಡು 51 ಜನ ಅಸು ನೀಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಈ ಪ್ರಮಾಣ ಹೆಚ್ಚಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಇರುವ ಸೌಲಭ್ಯಗಳನ್ನು ನಮ್ಮ ಆಸ್ಪತ್ರೆಗಳ ವೈದ್ಯರಿಗೂ ಕಲ್ಪಿಸಿ ತಾರತಮ್ಯ ಸರಿಪಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಅವರು, ವೈದ್ಯರು ಇಂದು ಸಲ್ಲಿಸಿರುವ 28 ಬೇಡಿಕೆಗಳಲ್ಲಿ ಕೊನೆ ಪಕ್ಷ ಅರ್ಧದಷ್ಟು ಬೇಡಿಕೆಗಳನ್ನಾದರೂ ನಮ್ಮ ಸರ್ಕಾರ ಈಡೇರಿಸಲಿದೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆಯಲ್ಲಿ 2 ವೈದ್ಯಕೀಯ, 2 ದಂತ ವೈದ್ಯಕೀಯ ಕಾಲೇಜುಗಳಿದ್ದು, ಸಾವಿರಾರು ವೈದ್ಯರಿದ್ದಾರೆ. ಕರಿ ಕೋಟು ಹಾಕುವ ವಕೀಲರು ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದರೆ, ಬಿಳಿ ಕೋಟು ಹಾಕುವ ವೈದ್ಯರು ಜನರ ಆರೋಗ್ಯವನ್ನು ಕಾಪಾಡುತ್ತಾರೆ. ಹಿಂದಿನ ಆರೋಗ್ಯ ಕ್ಷೇತ್ರಕ್ಕೆ ಹೋಲಿಸಿದರೆ, ಈಗ ಬಹಳಷ್ಟು ಬದಲಾವಣೆಯಾಗಿದ್ದು, ಒಂದೊಂದು ರೋಗಕ್ಕೂ ಒಬ್ಬೊಬ್ಬ ತಜ್ಞ ವೈದ್ಯರಿದ್ದಾರೆ. ಈಗ ಶೇ.10 ರಷ್ಟು ವೈದ್ಯರು ಹಣಕ್ಕೆ ನಿಂತಿರುವುದು ಸರಿಯಲ್ಲ. ಇದನ್ನು ಬಿಟ್ಟು ಜನರ ಒಳಿತಿಗಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಆರ್.ರಂಗನಾಥ್ ಪ್ರಾಸ್ತಾವಿಕ ಮಾತನಾಡಿ ಬಿನ್ನವತ್ತಳೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ರಾಮಪ್ಪ, ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾ, ಮೇಯರ್ ಶೋಭಾ ಪಲ್ಲಾಗಟ್ಟೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್, ಜಿ.ಪಂ. ಸದಸ್ಯ ಕೆ.ಎಸ್.ಬಸವಂತಪ್ಪ, ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕ ಡಾ.ಎಸ್.ಪುಷ್ಪರಾಜ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಒ ಎಸ್.ಅಶ್ವತಿ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಾ.ಧನ್ಯಕುಮಾರ್, ಡಾ.ನರಸಿಂಹಮೂರ್ತಿ, ಡಿಹೆಚ್ಒ ಡಾ.ತ್ರಿಪುಲಾಂಭ, ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ ಹೆಚ್.ಡಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ಸ್ವಾಗತಿಸಿದರು. ತರಳಬಾಳು ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಡಾ.ಸೀತಾರಾಮ್ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
