ದಾವಣಗೆರೆ:
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ನಿಯಮಾವಳಿಗಳನ್ನು ಉಲ್ಲಂಘಿಸಿ, ಮನಸೋಇಚ್ಛೆ ವರ್ಗಾವಣೆ ಮಾಡುವ ಮೂಲಕ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಸೋಮವಾರ ನಡೆದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ, ಶಾಸಕರಿಗೆ ಶುಭ ಹಾರೈಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮ್ಮಿಶ್ರ ಸರ್ಕಾರದಲ್ಲಿ ವರ್ಗಾವಣೆಗೆ ಒಂದು ನೀತಿ, ನಿಯಮ ಏನೂ ಇಲ್ಲದಂತಾಗಿದ್ದು, ವರ್ಗಾವಣೆಯನ್ನೇ ದಂಧೆಯನ್ನಾಗಿ ಮಾಡಿ ಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಸಹ ಹಾಕಿದೆ. ಅಲ್ಲದೆ, ಈ ಕುರಿತು ರಾಷ್ಟ್ರಪತಿಗಳಿಗೆ ವರದಿ ನೀಡಲು ಸೂಚಿಸಿರುವುದನ್ನು ನೋಡಿದರೆ, ವರ್ಗಾವಣೆಯಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂಬುದು ಸಾಭೀತಾಗುತ್ತದೆ ಎಂದರು.
ಆಡಳಿತಯಂತ್ರ ಸ್ತಬ್ಧ:
ರಾಜ್ಯ ಬರಗಾಲಕ್ಕೆ ತುತ್ತಾಗಿರುವ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದೆ. ಆದರೆ, ಯಾವ ಜಿಲ್ಲಾ ಉಸ್ತುವಾರಿ ಸಚಿವರುಗಳು ಸಹ ಪ್ರವಾಸ ಕೈಗೊಂಡು, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ, ಬರ ಪರಿಹಾರ ಕಾರ್ಯಕೈಗೊಳ್ಳುತ್ತಿಲ್ಲ. ಯಾವ ಸಚಿವರಿಗೂ ರೈತರ ಸಮಸ್ಯೆ ಬಗೆಹರಿಸುವ ಕಾಳಜಿ ಇಲ್ಲವಾಗಿದ್ದು, ಜಿಲ್ಲಾ ಮಂತ್ರಿಗಳು ಮನಬಂದಂತೆ ತೊಗಲಕ್ ದರ್ಬಾರ್ ನಡೆಸುತ್ತಿದ್ದು, ಯಾವ ಸಮಸ್ಯೆ ಬಗೆಹರಿಸಲು ಸಹ ಗಮನ ಹರಿಸದೇ, ಸರ್ಕಾರದ ಇಡೀ ಆಡಳಿತಯಂತ್ರ ಸ್ತಬ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಲುಪದ ಸಾಲ ಮನ್ನಾ ಹಣ:
ಸಮ್ಮಿಶ್ರ ಸರ್ಕಾರದಲ್ಲಿನ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಮಂತ್ರಿಗಳು ಆಂತರಿಕ ಗೊಂದಲದಲ್ಲಿದ್ದು, ಮಂತ್ರಿ ಸ್ಥಾನ ಸಿಕ್ಕಿದ್ದೆ ದೊಡ್ಡದು ಎಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿ, ಅವರಿಗೂ ಸಹ ಜನರ ಕಷ್ಟ ಕೇಳುವ ವ್ಯವಧಾನ ಇಲ್ಲವಾಗಿದೆ ಎಂದ ಅವರು, ವಿಧಾನಸಭೆಯ ಒಳಗೂ, ಹೊರಗೂ ಬಿಜೆಪಿ ನಡೆಸಿದ ಹೋರಾಟದ ಫಲವಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಏನೋ ಮಾಡಿದ್ದಾರೆ. ಆದರೆ, ಈ ವರೆಗೂ ಒಂದು ಪೈಸೆ ಸಹ ಸಾಲ ಮನ್ನಾದ ಹಣ ಬ್ಯಾಂಕ್ಗಳಿಗೆ ತಲುಪಿಲ್ಲ ಎಂದು ಆರೋಪಿಸಿದರು.
ಮರಳು ದಂಧೆ:
ಕಳಾಸ-ಬಂಡೂರಿ ನಾಲೆಯಲ್ಲಿ ನೀರು ಹರಿಯುತ್ತಿದ್ದು, ಇದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಸರ್ಕಾರ ಈ ವರೆಗೂ ಯೋಜನೆ ರೂಪಿಸಿಲ್ಲ. ಬದಲಿಗೆ ಭಾರೀ ಪ್ರಮಾಣದಲ್ಲಿ ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆಪಾದಿಸಿದರು.
ರೈತಪರ ಕಾಳಜಿ ಇಲ್ಲ:
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಮ್ಮೆ ಅಧಿಕಾರ ಯಾವಾಗ ಕಳೆದುಕೊಳ್ಳುತ್ತೇನೆ ಗೊತ್ತಿಲ್ಲ ಎನ್ನುತ್ತಾರೆ. ಇನ್ನೊಮ್ಮೆ ಯಾವಾಗ ಸಾಯುತ್ತೇನೆ ಎಂಬುದು ಗೊತ್ತಿಲ್ಲ ಎಂಬುದಾಗಿ ಕಣ್ಣೀರು ಹಾಕುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರೆ. ಕೇಂದ್ರ ಸರ್ಕಾರ 18 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ, ರಾಜ್ಯ ಸರ್ಕಾರವು ಆ ಬೆಂಬಲ ಬೆಲೆಗೆ ಭೋನಸ್ ಸೇರಿಸಿ, ಖರೀದಿ ಕೇಂದ್ರ ತೆರೆದು ರೈತರ ಉತ್ಪನ್ನಗಳನ್ನು ಖರೀದಿಸಲು ಮುಂದಾಗಿಲ್ಲ. ಇದೆಲ್ಲವನ್ನೂ ನೋಡಿದರೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲದಿರುವುದು ಮೇಲ್ನೋಟಕ್ಕೆ ಸಾಬೀತಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಕರುಣಾಕರ ರೆಡ್ಡಿ, ಪ್ರೊ.ಎನ್.ಲಿಂಗಣ್ಣ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಮುಖಂಡರಾದ ಶಾಮನೂರು ಲಿಂಗರಾಜ್, ಜಗದೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
