ಸೂರಿಗಾಗಿ ಮೊರೆ ಇಟ್ಟ ನಿರ್ಗತಿಕ ಮಹಿಳೆಯರು

ದಾವಣಗೆರೆ:

       ನಾವು ನಿರ್ಗತಿಕರಾಗಿದ್ದು, ನಮ್ಮ ಹೆಸರಲ್ಲಿ ಯಾವುದೇ ನಿವೇಶನ, ಮನೆ ಇಲ್ಲ. ದುಬಾರಿ ಬಾಡಿಗೆ ತೆತ್ತು ಮನೆ ಬಾಡಿಗೆ ಪಡೆದು, ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ನಮಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ಕೊಡಿಸಬೇಕೆಂದು ಮಹಿಳೆಯರು ಸೋಮವಾರ ನಡೆದ ಜಿಲ್ಲಾಡಳಿತದ ಜನಸ್ಪಂದನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರ ಎದುರು ಮೊರೆ ಇಟ್ಟರು.

         ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಅರ್ಜಿ ಸಲ್ಲಿಸಿದ ದಾವಣಗೆರೆಯ ಜಾಲಿ ನಗರದ ಸಮೀಮ್ ಬಾನು, ಪ್ಯಾರೆ ಜಾನ್, ವೆಂಕಾ ಬೋವಿ ಕಾಲೋನಿಯ ರೇಷ್ಮಾ, ಆಜಾದ್ ನಗರದ ಸಲ್ಮಾ ಬಾನು ಹಾಗೂ ಮಾಗಾನಹಳ್ಳಿ ರಸ್ತೆಯ ಶಬಾನ ಸೇರಿದಂತೆ ಮತ್ತಿತರೆ ಮಹಿಳೆಯರು ತಾವು ನಿರ್ಗತಿಕರಾಗಿದ್ದು, ಬಹಳ ವರ್ಷಗಳಿಂದ ಪಾಲಿಕೆಗೆ ಸೂರಿಗಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು.

           ಈಗಲಾದರೂ ಸರ್ಕಾರದ ಯಾವುದಾದರೊಂದು ಯೋಜನೆಯ ಅಡಿಯಲ್ಲಿ ಆಶ್ರಯ ಮನೆ ಕೊಡಿಸುವ ಮೂಲಕ, ಸೂರು ಕಲ್ಪಿಸಿ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

           ನಿರ್ಗತಿಕ ಮಹಿಳೆಯರ ಆಹ್ವಾಲು ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಅವರಿಗೆ ಸೂಚನೆ ನೀಡಿದರು.

         ಹೊನ್ನಾಳಿ ತಾಲೂಕಿನ ರಾಂಪುರ ಗ್ರಾಮದ ಪ್ರವೀಣಕುಮಾರ್ ಅರ್ಜಿ ನೀಡಿ, ರಾಂಪುರ ಮತ್ತು ಬುಳ್ಳಾಪುರ ಮಧ್ಯೆ ರಸ್ತೆಯ ಸಮಸ್ಯೆಯಿದ್ದು ಇಲ್ಲಿಂದ ರೈತರ ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಸ್ತೆಯನ್ನು ನಿರ್ಮಿಸಿ ಕೊಟ್ಟು ರೈತರ ಹೊಲಗಳಿಗೆ ಹೋಗಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

             ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ನಕಾಶೆಯಲ್ಲಿ ದಾರಿ ಇದ್ದರೆ ಬಿಡಿಸಿಕೊಡಲಾಗುವುದು. ಇಲ್ಲದಿದ್ದರೆ ಈ ಹಿಂದಿನಂತೆ ಹೊಂದಿಕೊಂಡು ಹೋಗಬೇಕೆಂದು ತಿಳಿ ಹೇಳಿದರು.

           ನಿರುದ್ಯೋಗಿಗಳಾದ ಪೂಜಾ, ಶಿವನಗೌಡ ಮತ್ತು ಮಂಜುನಾಥ್ ಎಂಬುವರು ಅರ್ಜಿ ಸಲ್ಲಿಸಿ, ತಾವು ಪದವಿಧರರಾಗಿದ್ದು, ಯಾವುದಾದರೊಂದು ಉದ್ಯೋಗ ಕಲ್ಪಿಸಿ, ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಕೋರಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಉದ್ಯೋಗ ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನೀವುಗಳು ಉದ್ಯೋಗ ವಿನಿಮಯ ಕೇಂದ್ರದ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತಮ್ಮ ಹೆಸರು ನೊಂದಾಯಿಸಿಕೊಂಡು, ಕೌಶಲ್ಯ ತರಬೇತಿ ಪಡೆದು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

           ಸಭೆಯಲ್ಲಿ ತಹಶೀಲ್ದಾರ್ ಸಂತೋಷಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಭ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಉಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link