ನ್ಯಾಯಾಲಯಗಳಲ್ಲಿ ಸಾಯುತ್ತಿವೆ ಸಾವಿರಾರು ರೈತರ ಅರ್ಜಿಗಳು..!!!!

ದಾವಣಗೆರೆ
ವಿಶೇಷ ವರದಿ: ಭೂಷಣ್ ಮಿಡಿಗೇಶಿ
          ಇತ್ತೀಚಿನ ದಿನಗಳಲ್ಲಿ ಕೃಷಿವಲಯ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದೆ. ಬೇಸಾಯ ಮಾಡುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಲೇ ಇದೆ.ಇದಕ್ಕೆ ಬೇಕಾದಷ್ಟು ಕಾರಣಗಳಿದ್ದರೂ,ಕೃಷಿ ಭೂಮಿ ದಿನೇ ದಿನೇ ಕಡಿಮೆಯಾಗುತ್ತಲೇ ಹೋಗುತ್ತಿದೆ.
         ಸಾಗುವಳಿ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಇಳಿದು ಸಾಗುವಳಿಯಾಗುತ್ತಿದ್ದ ಭೂಮಿ ನಿವೇಶನಗಳಾಗುವತ್ತ ದಾಪುಗಾಲು ಹಾಕುತ್ತಿದೆ. ಪಟ್ಟಣಗಳ ಮಗ್ಗುಲ ಜಮೀನುಗಳು ಈಗಾಗಲೇ ನಗರೀಕರಣದ ಪ್ರಭಾವಕ್ಕೆ ಒಳಗಾಗಿ ಭೂಪರಿವರ್ತನೆಯಾಗಿ ವಸತಿ ಪ್ರದೇಶಗಳಾಗಿ ಮಾರ್ಪಾಡಾಗುತ್ತಿವೆ. ಹಳ್ಳಿಗಾಡುಗಳಲ್ಲಿ ಈ ಸಮಸ್ಯೆ ಇನ್ನೂ ಅಷ್ಟಾಗಿ ತಲೆದೋರದಿದ್ದರೂ, ಭೂಮಿಯ ಬೆಲೆಗಳು ಮಾತ್ರ ಗಗನಕ್ಕೇರಿವೆ. ಹಾಗಾಗಿ ಇಲ್ಲಿಯವರೆಗೂ ಅಷ್ಟಾಗಿ ಕಾಣಬರದಿದ್ದ ಭೂಸಂಬಂಧಿತ ವ್ಯಾಜ್ಯಗಳು ಇತ್ತೀಚಿನ ದಶಕಗಳಲ್ಲಿ ಹೆಚ್ಚಿಗೆ ಕಂಡುಬರುತ್ತಿವೆ.
 
        ಸಣ್ಣಪುಟ್ಟ ಸಮಸ್ಯೆಗಳಿಗೂ ನ್ಯಾಯಾಲಯದ ಮೆಟ್ಟಿಲೇರುವ ಪರಿಪಾಠ ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿದೆ.ಇಂತಹ ಪ್ರಕರಣಗಳು ಬೇಗ ಇತ್ಯರ್ಥವಾದರೆ ಮಾತ್ರ ಭೂಮಿಯ ಅಭಿವೃಧ್ಧಿ, ಬೇಸಾಯ ಅಥವಾ ಜಮೀನನ್ನು ಪರಭಾರೆ ಮಾಡುವುದಾಗಲೀ, ಇನ್ಯಾವುದೇ ರೀತಿಯ ವ್ಯವಹಾರಗಳಾಗಲೀ ನಡೆಯಬೇಕಾಗುತ್ತದೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಮತ್ತು ತಕರಾರುಗಳಿಗೆ ನಾಗರಿಕರು ಕೆಳಹಂತದ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ ತಕರಾರನ್ನು ಬಗೆಹರಿಸಿಕೊಳ್ಳುತ್ತಾರೆ.
        ಆದರೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಂದಿರುವ ತೀರ್ಮಾನವನ್ನು ಪ್ರಶ್ನಿಸಿ ಮತ್ತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾವೆ ಹೂಡುವ ಅವಕಾಶಗಳಿರುವುದರಿಂದ ಸಾಮಾನ್ಯವಾಗಿ ಯಾರೂ ತಹಶೀಲ್ದಾರರ ತೀರ್ಮಾನವನ್ನು ಒಪ್ಪಿಕೊಳ್ಳುವುದು ಕಷ್ಟ.ಇಂತಹ ಎರಡು ಸಾವಿರಕ್ಕೂ ಹೆಚ್ಚು ಭೂಸಂಬಂಧಿತ ವಿವಾದಾತ್ಮಕ ಪ್ರಕರಣಗಳ ದಾವಣಗೆರೆ ಜಿಲ್ಲೆಯ ಎರಡು ಉಪವಿಭಾಗಗಳಲ್ಲಿ ಇವೆ.
 
        ದಾವಣಗೆರೆ ಜಿಲ್ಲೆಯಲ್ಲಿ ದಾವಣಗೆರೆ ಮತ್ತು ಹರಪನಹಳ್ಳಿ ಈ ಎರಡು ಉಪವಿಭಾಗಗಳು ಇದ್ದು,ಜಿಲ್ಲೆಯ ಆರು ತಾಲ್ಲೂಕುಗಳು ಈ ಉಪವಿಭಾಗಗಳ ವ್ಯಾಪ್ತಿಗೆ ಬರುತ್ತವೆ. ಎರಡು ವಿಭಾಗಗಳಲ್ಲಿಯೂ ಇಬ್ಬರು ಉಪವಿಭಾಗಾಧಿಕಾರಿಗಳು ಕಂದಾಯ ಇಲಾಖೆಯ ಉಸ್ತುವಾರಿಯನ್ನು ಹೊತ್ತು ಕರ್ತವ್ಯನಿರ್ವಹಿಸುತ್ತಿದ್ದಾರೆ.
• ದಾವಣಗೆರೆ ಉಪವಿಭಾಗದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ   1707
• ಹರಪನಹಳ್ಳಿ ಉಪವಿಭಾಗದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ   367
ದಾವಣಗೆರೆ ಉಪವಿಭಾಗದಲ್ಲಿ ಅತಿ ಹೆಚ್ಚು ಭೂವಿವಾದಗಳು..!!!
 
        ನಗರೀಕರಣದ ಪ್ರಭಾವ ದಾವಣಗೆರೆ ನಗರದ ಸುತ್ತಮುತ್ತಲ ಹತ್ತಾರು ಕಿಲೋಮೀಟರುಗಳವರೆಗೆ ವ್ಯಾಪಿಸಿ, ಕೃಷಿ ಮಾಡುತ್ತಿದ್ದ ಜಮೀನಿಗೆ ಇನ್ನಿಲ್ಲದ ಬೆಲೆ ಬಂದಿದೆ. ಭೂಮಿಯನ್ನು ಪರಭಾರೆ ಮಾಡಿರುವವರ ಸಂಖ್ಯೆಯೂ ಸಾಕಷ್ಟಿದೆ.ಹೆಚ್ಚು ಹೆಚ್ಚು ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ನಡೆಯುತ್ತಾ ಹೋದಂತೆ ತಕರಾರುಗಳ ಸಂಖ್ಯೆಯೂ ಗಣನೀಯವಾಗಿ ಜಾಸಿಯಾಗುತ್ತವೆ.ಹಳ್ಳಿಗಾಡಿನ ವ್ಯಾಜ್ಯಗಳಿಗಿಂತ ನಗರದ ಮಗ್ಗುಲಲ್ಲಿರುವ ಭೂವಿವಾದಗಳ ಸಂಖ್ಯೆಯೇ ಇಲ್ಲಿ ಜಾಸ್ತಿಯೆನ್ನಬಹುದು.
       ದಾವಣಗೆರೆ ಉಪವಿಭಾಗದ ವ್ಯಾಪ್ತಿಗೆ ದಾವಣಗೆರೆ , ಹರಿಹರ , ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳು ಸೇರುತ್ತವೆ.ದಾವಣಗೆರೆ ಮತ್ತು ಹರಿಹರ ಪಟ್ಟಣಗಳ ಅಂತರ ಕೆಲವೇ ಕಿಲೋಮೀಟರುಗಳಷ್ಟಿದ್ದು, ಬಹುತೇಕ ಭೂಮಿಗಳು ಈಗಾಗಲೇ ಪರಿವರ್ತನೆಯ ಹಾದಿ ತುಳಿದಿವೆ. ದಾವಣಗೆರೆ ನ್ಯಾಯಾಲಯದಲ್ಲಿ ಮೂರು ತಿಂಗಳ ಅವಧಿಯಿಂದ ಹಿಡಿದು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಕರಾರು ಅರ್ಜಿಗಳ ಪ್ರಮಾಣ 1707. ಮೂರು ವರ್ಷಗಳಿಂದಲೂ ಬಗೆಹರಿಯದ ಭೂವಿವಾದಗಳಲ್ಲಿ ಸಿಲುಕಿರುವ ಕುಟುಂಬಗಳು ಮತ್ತು ಈ ವ್ಯಾಜ್ಯಗಳಲ್ಲಿ ಭಾಗೀದಾರರಾಗಿರುವವರ ಸಂಕಷ್ಟಕ್ಕೆ ಕೊನೆ ಎಂದು ಎಂಬುದೇ ತಿಳಿಯದಾಗಿದೆ.
 
         ಹರಪನಹಳ್ಳಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ವ್ಯಾಪ್ತಿಗೆ ಹರಪನಹಳ್ಳಿ ಮತ್ತು ಜಗಳೂರು ತಾಲ್ಲೂಕಿನ ತಹಶೀಲ್ದಾರರ ನ್ಯಾಯಾಲಯಗಳಲ್ಲಿ ಬಗೆಹರಿಯದ ಪ್ರಕರಣಗಳು ಬರುತ್ತವೆ. ತಹಶೀಲ್ದಾರರ ನ್ಯಾಯಾಲಯದಲ್ಲಿ ಹೊರಬಿದ್ದ ತೀರ್ಪನ್ನು ಪ್ರಶ್ನಿಸಿ , ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಪ್ರತಿವರ್ಷ ಜಾಸ್ತಿಯಾಗುತ್ತಿರುತ್ತದೆ.
 
         ಹರಪನಹಳ್ಳಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮೂರು ತಿಂಗಳ ಅವಧಿಯಿಂದ ಹಿಡಿದು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಕರಾರು ಅರ್ಜಿಗಳ ಪ್ರಮಾಣ 367. ಒಂದರಿಂದ ಎರಡು ವರ್ಷಗಳ ಅವಧಿಯಲ್ಲಿ ಬಾಕಿ ಉಳಿದಿರುವ ಭೂವಿವಾದದ ಪ್ರಕರಣಗಳ ಸಂಖ್ಯೆ 205. ಮೂರು ವರ್ಷ ಮೀರಿದ ಅವಧಿಯ ಕಂದಾಯ ಪ್ರಕರಣಗಳ ಸಂಖ್ಯೆ ಸದರಿ ಉಪವಿಭಾಗದಲ್ಲಿ 49 ಇದೆ. 
           ಜಿಲ್ಲೆಯ ಎರಡು ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ  ಮೂರು ವರ್ಷಗಳ ಅವಧಿ ಮೀರಿದ ಅರ್ಜಿಗಳ ಸಂಖ್ಯೆ  105. ಪ್ರಸ್ತುತ ವರ್ಷ 2018 ರಲ್ಲಿ ಇಲ್ಲಿಯತನಕ 358 ಭೂವಿವಾದದ ತಕರಾರಿನ ಹೊಸಾ ಅರ್ಜಿಗಳು ತಹಶೀಲ್ದಾರರ ನ್ಯಾಯಾಲಯದ ತೀರ್ಪಿನ ವಿರುದ್ಧ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಿಕೊಂಡಿವೆ. ದಾವಣಗೆರೆ ಉಪವಿಭಾಗದಲ್ಲಿ 288 ಮತ್ತು ಹರಪನಹಳ್ಳಿ ಉಪವಿಭಾಗದಲ್ಲಿ 70  ಈ ವರ್ಷ ದಾಖಲಿಸಿಕೊಂಡ ಅರ್ಜಿಗಳು. ಇದರಲ್ಲಿ ಕೇವಲ ಎರಡು ಪ್ರಕರಣಗಳ ತೀರ್ಪನ್ನು ಹರಪನಹಳ್ಳಿ ಉಪವಿಭಾಗಾಧಿಕಾರಿಗಳು ನೀಡಿದ್ದಾರೆ. ದಾವಣಗರೆ ಉಪವಿಭಾಗದ ನ್ಯಾಯಾಲಯದಲ್ಲಿ 80 ಪÀ್ರಕರಣಗಳು ಇತ್ಯರ್ಥವಾಗಿವೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಇನ್ನೂ 2074 ಪ್ರಕರಣಗಳು ಎರಡು ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ತೀರ್ಮಾನಕ್ಕಾಗಿ ಕಾದು ಕುಳಿತಿವೆ.
          ಇಂತಹ ಪ್ರಕರಣಗಳಲ್ಲಿ ಕೆಳಹಂತದ ನ್ಯಾಯಾಲಯಗಳ ತೀರ್ಪನ್ನೇ ಎತ್ತಿ ಹಿಡಿಯುವ ಅವಕಾಶಗಳು ಜಾಸ್ತಿಯಿದ್ದರೂ, ಜನಸಾಮಾನ್ಯರ ಹಣ ಮತ್ತು ಸಮಯ ವ್ಯರ್ಥವಾಗುವ ಪ್ರಸಂಗಗಳೇ ಹೆಚ್ಚು. ಭೂವಿವಾದಗಳಿಗೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ಸಮರ್ಪಕವಾಗಿ ಹಾಗೂ ಸರಿಯಾದ ಸಮಯಕ್ಕೆ ಕೋರ್ಟಿಗೆ ಸಲ್ಲಿಕೆಯಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಕೇಸುಗಳ ವಿಲೇವಾರಿ ಮತ್ತು ಬೇಗ ಬಗೆಹರಿಯುವಲ್ಲಿ ನ್ಯಾಯವಾದಿಗಳ ಪಾತ್ರವೂ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ.
 
          ಉಪ ವಿಭಾಗಾಧಿಕಾರಿಗಳಿಗೆ ಇರುವ ಕಾರ್ಯಭಾರದ ಒತ್ತಡದ ನಡುವೆ ಕೋರ್ಟಿನ ಕರ್ತವ್ಯವನ್ನು ನಿಭಾಯಿಸುವುದು ಸ್ವಲ್ಪಮಟ್ಟಿನ ಕಷ್ಟವೆನಿಸಿದರೂ, ಪ್ರಕರಣಗಳ ಇತ್ಯರ್ಥ ಬೇಗನೆ ಮುಗಿದರೆ ಸೂಕ್ತ.  ಸಮರ್ಪಕ ಮತ್ತು ಸೂಕ್ತ ಮೂಲ ದಾಖಲೆಗಳನ್ನು ಒದಗಿಸುವ ಗುರುತರವಾದ ಜವಾಬ್ದಾರಿಯನ್ನು ಫಿರ್ಯಾದುದಾರರ ಜೊತೆ ನ್ಯಾಯವಾದಿಗಳೂ ವಹಿಸಿಕೊಂಡರೆ ಇಂತಹ ವಿವಾದಗಳು ಬಹುಬೇಗ ಕೊನೆಗಾಣುತ್ತವೆ ಎನ್ನಬಹುದು.
 
         ಹಳೆಯ ಪ್ರಕರಣಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಮತ್ತು ಇಂತಹ ಭೂವಿವಾದಗಳ ಶೀಘ್ರ ಪರಿಹಾರಕ್ಕೆಂದು ದಾವಣಗೆರೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕಾಗುತ್ತದೆ. ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಬಗೆಹರಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕಾಗಿದೆ. ಅದೇ ರೀತಿ ತೀರ್ಮಾನವಾದ ಪ್ರಕರಣಗಳ ಆದೇಶಗಳನ್ನು ಬೇಗ ಒದಗಿಸಿಕೊಡುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ಒದಗಿಸುವತ್ತ ಗಮನಹರಿಸಬೇಕಾಗಿದೆ.  
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link