ಬಳ್ಳಾರಿ:
ಹಂಪಿ ವಿಷ್ಣು ದೇವಸ್ಥಾನದ ಆವರಣದ ಸಾಲು ಕಂಬಗಳನ್ನು ದುಷ್ಕರ್ಮಿಗಳು ಕೆಡವುತ್ತಿರುವ ದೃಶ್ಯವೀಗ ವೈರಲ್ ಆಗಿದೆ.
ಪ್ರವಾಸಕ್ಕೆಂದು ಬಂದಿದ್ದ ಉತ್ತರ ಭಾರತ ಮೂಲದ ಮೂವರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿದ್ದಾರೆ.
ಈ ಕೃತ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗರ್ಭಗೃಹ ಮುಂಭಾಗದ ಬೃಹತ್ ಗಾತ್ರದ ಕಲ್ಲಿನ ಕಂಭಗಳನ್ನು ಹಾಡ ಹಗಲೇ ಕೈಯಿಂದ ತಳ್ಳಿ ನೆಲಕ್ಕುರುಳಿಸುತ್ತಿರುವ ಕಿಡಿಗೇಡಿಗಳ ಕೃತ್ಯವನ್ನು ಪ್ರವಾಸಿಗರೊಬ್ಬರು, ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದರು. ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.