ದಾವಣಗೆರೆ
ಬೇಸಿಗೆಯಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ಕೆಎಸ್ಆರ್ಟಿಸಿ ನಿಲ್ದಾಣದ ಎದುರಿನ ಪಿಬಿ ರಸ್ತೆಯ ಇಕ್ಕೆಲಗಳಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಪಾದಚಾರಿ ಮಾರ್ಗ ಮತ್ತು ಪಾರ್ಕಿಂಗ್ ನಿರ್ಮಾಣ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದ ರೀತಿಯಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ನಗರಕ್ಕೆ ನೀರು ಪೂರೈಸುವ ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಷನ್ ಕೆರೆಯಲ್ಲೂ ಅಗತ್ಯ ಪ್ರಮಾಣದಲ್ಲಿ ನೀರಿದೆ. ಅಲ್ಲದೆ, ಬೋರ್ವೆಲ್ ಮೂಲಕವೂ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಹಾಗೂ ದಿನದ 24 ಗಂಟೆಯು ನೀರು ಪೂರೈಸುವ ಜಲಸಿರಿ ಯೋಜನೆಯಡಿ ನಗರದ ವಿವಿಧ ಭಾಗಗಳಲ್ಲಿ 19 ಓವರ್ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗುತ್ತಿದೆ ಈ ಮೂಲಕ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಂದು ಗುದ್ದಲಿ ಪೂಜೆಗೊಂಡಿರುವ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಇದೀಗ ಗುದ್ದಲಿ ಪೂಜೆ ನೆರವೇರಿದ ಕಾಮಗಾರಿಗೆ ಒಂದು ವರ್ಷದ ಹಿಂದೆಯೆ ಹಣ ಬಂದಿತ್ತು. ಆದರೆ, ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಹಣ ವಾಪಾಸಾಗಿತ್ತು. ಇದೀಗ ಸಮ್ಮಿಶ್ರ ಸರ್ಕಾರ ಹತ್ತು ಕೋಟಿ ರೂ ನೀಡಿದೆ. ಆದಷ್ಟು ಜಾಗೃತಿ ಕಾಮಗಾರಿ ನಡೆಸಬೇಕು. ಇದರಲ್ಲಿ ಎಷ್ಟು ಜನ ಮಧ್ಯವರ್ತಿಗಳು ಇದ್ದಾರೋ ಗೊತ್ತಿಲ್ಲ. ಗುತ್ತಿಗೆ ಪಡೆದವರು ಒಬ್ಬರು, ಕಾಮಗಾರಿ ನಡೆಸುವವರು ಮತ್ತೊಬ್ಬರು. ಒಟ್ಟಿನಲ್ಲಿ ಯಾರೇ ಕೆಲಸ ಮಾಡಿದರು ಸರಿ ಉತ್ತಮ ಗುಣಮಟ್ಟದ ಕಾಮಗಾರಿಯಾಗಬೇಕು. ಹಣ ತಿಂದು ಅರೆ ಬರೆ ಕೆಲಸಮಾಡಿದರೆ ನಾವು ಲೋಕೋಪೋಯೋಗಿ ಇಲಾಖೆ ಅಧಿಕಾರಿಗಳನ್ನು ಹಿಡಿದುಕೊಳ್ಳುತ್ತೇನೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಪಿಬಿ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಅಗಲಮಾಡಬೇಡಿ ಎನ್ನುವ ಒಂದು ಗುಂಪು ಇತ್ತು. ಅಲ್ಲದೇ, ಇನ್ನೂ ಹೆಚ್ಚಿನ ಕಟ್ಟಡ ಒಡೆದು ರಸ್ತೆ ಅಗಲೀಕರಣ ಮಾಡಿ ಎನ್ನುವ ಮತ್ತೊಂದು ಗುಂಪು ಇತ್ತು. ಇವುಗಳ ಮಧ್ಯೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇಂದಲ್ಲ ನಾಳೆ ತಡೆಯಾಜ್ಞೆ ತೆರವಾಗಲಿದೆ. ಇದನ್ನು ಕಟ್ಟಡ ಮಾಲೀಕರು ಮೊದಲು ಅರಿಯಬೇಕು. ತಡೆಯಾಜ್ಞೆ ತಂದಿರುವ ಕಟ್ಟಡಗಳು ಸಹ ನೆಲಸಮವಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದರು.
ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಪಿ.ಬಿ. ರಸ್ತೆ ಅಗಲೀಕರಣವಾದ ಮೇಲೆ ಪಾದಚಾರಿ ಮಾರ್ಗ ಅಭಿವೃದ್ಧಿ ಪಡೆಸಬೆಕೆಂಬುದು ಜನರ ಒತ್ತಾಸೆಯಾಗಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಇನ್ನು ಮೇಲಾದರೂ ಉತ್ತಮ ಗುಣಮಟ್ಟದ ಫುಟ್ಪಾತ್ ನಿರ್ಮಾಣ ಮಾಡಬೇಕು. ಇಲ್ಲವಾದರೆ ಜನ ಶಾಪ ಹಾಕುತ್ತಾರೆ ಎಂದು ಗುತ್ತಿಗೆದಾರರ ಕಿವಿಹಿಂಡಿದರು.
ಮೇಯರ್ ಶೋಭಾ ಪಲ್ಲಾಗಟ್ಟೆ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ತಿಪ್ಪಣ್ಣ, ಹದಡಿ ಕ್ಷೇತ್ರ ಜಿ.ಪಂ. ಸದಸ್ಯ ಜಿ.ಸಿ.ನಿಂಗಪ್ಪ, ಮುಖಂಡರಾದ ಎ.ನಾಗರಾಜ್, ಮೇಕಾ ಮುರುಳಿಕೃಷ್ಣ, ಕೆ.ಜಿ.ಶಿವಕುಮಾರ್, ಕಲ್ಲೇಶ್, ಶಿವನಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
