ವೀಕ್ಷಕರಿಗೆ ವಿನೋತ್ ಪ್ರಿಯಾ ಮನವರಿಕೆ ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಕಠಣ ಕ್ರಮ

ಚಿತ್ರದುರ್ಗ

       ಚಿತ್ರದುರ್ಗ ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು, ಜಿಲ್ಲೆಯಲ್ಲಿ ಇದುವರೆಗೂ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವ ಮೂಲಕ ಚುನಾವಣಾ ವೀಕ್ಷಕರಿಗೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮನವರಿಕೆ ಮಾಡಿಕೊಟ್ಟರು.

        ಲೋಕಸಭಾ ಚುನಾವಣೆ ಕುರಿತು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಮತದಾನಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ವೀಕ್ಷಕರು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದರು

         ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತು ನಿಗಾ ವಹಿಸಲು ಜಿಲ್ಲೆಯಲ್ಲಿ 25 ಫ್ಲೈಯಿಂಗ್ ಸ್ಕ್ವಾಡ್ಸ್, 40 ಚೆಕ್ ಪೋಸ್ಟ್‍ಗಳು, 21 ವಿಡಿಯೋ ಸರ್ವೆಲೆನ್ಸ್ ತಂಡಗಳು, 06 ವಿಡಿಯೋ ವೀಕ್ಷಣಾ ತಂಡಗಳನ್ನು ರಚಿಸಿದ್ದು, 152 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ ತಂಡಗಳು ಚುನಾವಣಾ ಕರ್ತವ್ಯದಲ್ಲಿ ಕಾರ್ಯನಿರತವಾಗಿವೆ ಎಂದು ಹೇಳಿದರು

          ಗರ್ಭಿಣಿಯರು ಹಾಗೂ ತೀವ್ರ ದೈಹಿಕ ನ್ಯೂನತೆಯ ವಿಕಲಚೇತನ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗುತ್ತಿದೆ. ಬ್ಯಾಂಕ್‍ಗಳ ಅಧಿಕಾರಿಗಳೊಂದಿಗೆ ಈಗಾಗಲೆ ಸಭೆ ನಡೆಸಿ, ಸಂಶಯಾಸ್ಪದ ಹಣದ ವ್ಯವಹಾರಗಳ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೂರ್ವಾನುಮತಿ ಇಲ್ಲದೆ ಕೈಗೊಂಡ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಭ್ಯರ್ಥಿಗೆ ನೋಟೀಸ್ ನೀಡಲಾಗಿದೆ.

         ನೀತಿ ಸಂಹಿತೆ ಕುರಿತ ದೂರು ದಾಖಲಿಸಲು 1950 ಸಹಾಯವಾಣಿ ಹಾಗೂ ಸಿ-ವಿಜಿಲ್ ಆ್ಯಪ್ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 1. 21 ಕೋಟಿ ರೂ. ಗಳ ನಗದು ವಶಪಡಿಸಿಕೊಂಡಿದ್ದು, ಸುಮಾರು 59 ಲಕ್ಷ ಮೌಲ್ಯದ 10143 ಲೀ. ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ 318 ಪ್ರಕರಣ ಹಾಗೂ ಪೊಲೀಸ್ ಇಲಾಖೆ 49 ಪ್ರಕರಣಗಳನ್ನು ದಾಖಲಿಸಿದೆ. ಸುಮಾರು 1 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚುನಾವಣಾ ಸಾಮಾನ್ಯ ವೀಕ್ಷಕರಾದ ವಿ. ಚಂದ್ರಶೇಖರನ್, ವೆಚ್ಚ ವೀಕ್ಷಕ ಅಮಿತ್‍ಕುಮಾರ್ ಸಿಂಗಾಲ್ ಹಾಗೂ ಪೊಲೀಸ್ ವೀಕ್ಷಕ ಲಕ್ಷ್ಮೀಕಾಂತ್ ಯಾದವ್ ಅವರು, ಜಿಲ್ಲೆಯಲ್ಲಿ ಚುನಾವಣಾ ಸಿದ್ಧತೆ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ತೃಪ್ತಿ ವ್ಯಕ್ತಪಡಿಸಿದರು.

           305 ಸೂಕ್ಷ್ಮ ಮತಗಟ್ಟೆಗಳು : ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದಿನ ಪ್ರಕರಣಗಳನ್ನು ಆಧರಿಸಿ ಒಟ್ಟು 305 ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, ಮತದಾನದಂದು ಇಂತಹ ಮತಗಟ್ಟೆಗಳಿಗೆ ವಿಶೇಷ ಬಿಗಿ ಬಂದೋಬಸ್ತ್ ಹಾಗೂ ಒಬ್ಬರು ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು

          ಜಿಲ್ಲೆಯಲ್ಲಿ ಈ ಬಾರಿ 12 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಮತಗಟ್ಟೆಯಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಕೂಡ ಮಹಿಳೆಯರನ್ನೇ ನೇಮಿಸಲಾಗುತ್ತಿರುವುದು ವಿಶೇಷವಾಗಿದೆ ಎಂದರು.

10026 ಸಿಬ್ಬಂದಿ ನೇಮಕ :

        ಲೋಕಸಭಾ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಮತಗಟ್ಟೆ ಸಹಾಯಕರು ಸೇರಿದಂತೆ ಒಟ್ಟು 10026 ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಈ ಬಾರಿ ಚುನಾವಣಾ ಭತ್ಯೆಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹೀಗಾಗಿ ಎಲ್ಲ ಸಿಬ್ಬಂದಿಗಳ ಬ್ಯಾಂಕ್ ಖಾತೆಯ ವಿವರವನ್ನು ಸಂಗ್ರಹಿಸಲಾಗಿದೆ.

         ಸಿಬ್ಬಂದಿಗಳಿಗೆ ಕಳೆದ ಮಾ. 31 ರಂದು ಮೊದಲ ಹಂತದ ತರಬೇತಿ ನೀಡಲಾಗಿದ್ದು, ಏ. 9 ರಂದು ಎರಡನೆ ಹಂತದ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

        ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸಿ. ಸತ್ಯಭಾಮ ಸಾಮಾನ್ಯ ವೀಕ್ಷಕರಾದ ವಿ. ಚಂದ್ರಶೇಖರನ್, ವೆಚ್ಚ ವೀಕ್ಷಕ ಅಮಿತ್‍ಕುಮಾರ್ ಸಿಂಗಾಲ್ ಹಾಗೂ ಪೊಲೀಸ್ ವೀಕ್ಷಕ ಲಕ್ಷ್ಮೀಕಾಂತ್ ಯಾದವ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಲ್ಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link