ತುಮಕೂರು:
ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ಬೆಳೆಯುತ್ತಿರುವುದರಿಂದ ಈ ಭಾಗದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವಂತಹ ಕಾರ್ಖಾನೆಗಳನ್ನು, ಉದ್ದಿಮೆಗಳನ್ನು ಉತ್ತೇಜಿಸಲು ದೇವೇಗೌಡರು ಪ್ರಯತ್ನಿಸಲಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವ ಜನರಿಗೆ ಹೆಚ್ಚು ಉದ್ಯೋಗಾವಕಾಶ ದೊರಕಲಿದೆ ಎಂಬ ಆಶಾಭಾವನೆ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಅವರದ್ದು.
ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ದೇವೇಗೌಡರ ಗಮನ ಸೆಳೆದಿರುವ ಹಾಲಪ್ಪ ಅವರು ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಯಾವುದಾದರೂ ಇರಲಿ ಗೌಡರು ಮಾಜಿ ಪ್ರಧಾನಿಯಾಗಿರುವ ಕಾರಣ ಕೇಂದ್ರ ಮಟ್ಟದಲ್ಲಿ ಒತ್ತಾಯಿಸಿ ಯೋಜನೆ ಜಾರಿಗೊಳಿಸುವ ಶಕ್ತಿ ಇದೆ. ಉದ್ದಿಮೆ ಮತ್ತು ಸಣ್ಣ ಉದ್ದಿಮೆಗಳನ್ನು, ಕೈಗಾರಿಕೆಗಳನ್ನು ತರಲು ಪ್ರಯತ್ನಿಸುತ್ತಾರೆ.
ಒಮ್ಮೆ ಮಾತು ಕೊಟ್ಟ ಮೇಲೆ ಅವರು ಯಾವತ್ತೂ ಬದ್ಧತೆಯಿಂದ ಹಿಂದೆ ಸರಿಯುವವರಲ್ಲ ಎಂದು ತಿಳಿಸಿದ್ದಾರೆ.ಹಾಸನ ಜಿಲ್ಲೆಯನ್ನು ಬಿಟ್ಟು ತುಮಕೂರಿಗೆ ಏಕೆ ಬಂದರು ಎಂದು ಹಲವರು ಪ್ರಶ್ನಿಸುತ್ತಾರೆ. ನರೇಂದ್ರ ಮೋದಿಯವರು ಗುಜರಾತ್ನಿಂದ ವಾರಣಾಸಿಯಲ್ಲಿ,ಸ್ಮೃತಿ ಇರಾನಿ ದೆಲ್ಲಿಯಿಂದ ಅಮೇಥಿ, ರಾಹುಲ್ ಗಾಂಧಿ ವಯನಾರ್ನಲ್ಲಿ ಸ್ಪರ್ಧಿಸುತ್ತಿಲ್ಲವೆ? ಅವರಿಗೆ ಕೇಳದ ಮಾತನ್ನು ದೇವೇಗೌಡರಿಗೆ ಏಕೆ ಪ್ರಶ್ನಿಸಬೇಕು ಎಂದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನೀರಿನ ಅಭಾವ ಇದೆ. ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆ ಮತ್ತು ಕುಡಿಯುವ ನೀರಿನ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ. ಗುಲ್ಬರ್ಗಾ, ಬಿಜಾಪುರ ಭಾಗದಲ್ಲಿ ಇವರು ವಿಶೇಷ ಆಸಕ್ತಿ ವಹಿಸಿದಂತೆ ತುಮಕೂರು ಜಿಲ್ಲೆಯಲ್ಲಿಯೂ ವಹಿಸಲಿದ್ದಾರೆ. ಜಿಲ್ಲೆಯ ಹೆಣ್ಣು ಮಕ್ಕಳು ಉದ್ಯೋಗಕ್ಕಾಗಿ ಬೆಂಗಳೂರಿನ ಗಾರ್ಮೆಂಟ್ಸ್ ಗಳಿಗೆ ತೆರಳುತ್ತಿದ್ದಾರೆ. ಈ ಕುಟುಂಬಗಳು ಇಲ್ಲಿಯೇ ನೆಲೆ ನಿಲ್ಲುವಂತೆ ಗಾರ್ಮೆಂಟ್ಸ್ ಉದ್ದಿಮೆಗಳನ್ನು ಸ್ಥಾಪಿಸುವ ಇಚ್ಛಾಶಕ್ತಿ ಹೊಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
