ನವದೆಹಲಿ
ಇಂದನಿಂದ ಯಾವುದೇ ವಿಮಾನ ಹಾರಾಟ ನಡೆಸದಿರಲು ಜೆಟ್ ಏರ್ ವೇಸ್ ಪೈಲಟ್ಗಳು ನಿರ್ಧರಿಸಿರುವುದರಿಂದ ವಿಮಾನಯಾನ ಕಂಪೆನಿಯ ಬಿಕ್ಕಟ್ಟು ಮತ್ತಷ್ಟು ಉಲ್ಪಣಿಸಿದೆ.ವಿಮಾನ ಪೈಲಟ್ಗಳ ಒಕ್ಕೂಟವಾದ ‘ರಾಷ್ಟ್ರೀಯ ಏವಿಯೇಟರ್ಸ್ ಗಿಲ್ಡ್’ (ಎನ್ಎಜಿ)ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಒಕ್ಕೂಟದಲ್ಲಿ 1,100 ಪೈಲಟ್ಗಳು ಸದಸ್ಯರಾಗಿದ್ದಾರೆ. ಸದ್ಯ, ಜೆಟ್ ಏರ್ ವೇಸ್ 1,600 ಪೈಲಟ್ಗಳನ್ನು ಹೊಂದಿದೆ.
ಕಂಪೆನಿಯ ಇಂಜನಿಯರುಗಳು ಮತ್ತು ಹಿರಿಯ ವ್ಯವಸ್ಥಾಪಕ ಸಿಬ್ಬಂದಿಗೆ ಕಳೆದ ಜನವರಿಯಿಂದ ವೇತನ ಪಾವತಿ ಮಾಡಿಲ್ಲ. ಆದರೆ, ಕಿರಿಯ ಶ್ರೇಣಿಯ ಬಹುತೇಕ ಸಿಬ್ಬಂದಿಗೆ ಭಾಗಶ: ವೇತನ ಪಾವತಿಸಲಾಗಿದೆ. ಆದರೆ, ಇವರೂ ಸಹ ಮಾರ್ಚ್ ತಿಂಗಳ ವೇತನ ಪಡೆದಿಲ್ಲ.
ಕಂಪೆನಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾ 1,500 ಕೋಟಿ ರೂ. ಸಾಲ ನೀಡಲು ಮುಂದೆ ಬಂದಿದ್ದು, ಸಾಲದ ಹಣ ಬಂದ ತಕ್ಷಣ ಬಾಕಿ ವೇತನ ಇತ್ಯರ್ಥ ಮಾಡುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ಭರವಸೆ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 1,500 ಕೋಟಿ ರೂ. ಸಾಲ ಪಡೆಯುವ ಯೋಜನೆಗೆ ಮಾರ್ಚ್ 25ರಂದು ಜೆಟ್ ಏರ್ ವೇಸ್ ಆಡಳಿತ ಮಂಡಳಿ ಒಪ್ಪಿ ನಿರ್ಣಯ ತೆಗೆದುಕೊಂಡಿತ್ತು.
ಜೆಟ್ ಏರ್ ವೇಸ್ 8,000 ಕೋಟಿ ರೂ. ಸಾಲದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬಾಕಿ ಪಾವತಿಗಳನ್ನು ಮಾಡದ ಕಾರಣ ಅನೇಕ ವಿಮಾನಗಳ ಹಾರಾಟವನ್ನು ಕೆಲ ದಿನಗಳ ಹಿಂದೆ ರದ್ದು ಪಡಿಸಿತ್ತು.ಕೆಲ ತಿಂಗಳ ಹಿಂದೆ ದಿನಕ್ಕೆ 120 ವಿಮಾನಗಳ ಹಾರಾಟ ನಡೆಸುತ್ತಿದ್ದ ಜೆಟ್ ಏರ್ ವೇಸ್, ಹಣಕಾಸು ಸಮಸ್ಯೆಯಿಂದ ವಿಮಾನಗಳ ಹಾರಾಟ ಸಂಖ್ಯೆ ಕೇವಲ 15ಕ್ಕೆ ಇಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








