ಬೆಂಗಳೂರು
ನಗರದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಖೋಟಾ ನೋಟು ಚಲಾವಣೆ ದಂಧೆಯನ್ನು ಬಯಲಿಗೆಳಿದಿರುವ ಯಲಹಂಕ ಪೊಲೀಸರು ಮೂವರನ್ನು ಬಂಧಿಸಿ 2 ಸಾವಿರ ರೂ. ಮುಖಬೆಲೆಯ 50 ಲಕ್ಷ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಲಕ್ಕಿಹಾಳ ಗ್ರಾಮದ ಸೋಮನಗೌಡ (30), ಚನ್ನಪಟ್ಟಣದ ಕಿರಣ್ಕುಮಾರ್ (24) ಮತ್ತು ನಂಜೇಗೌಡ (32) ಬಂಧಿತ ಆರೋಪಿಗಳಾಗಿದ್ದಾರೆ.ತಲೆಮರೆಸಿಕೊಂಡಿರುವ ದಂಧೆಯ ಪ್ರಮುಖ ಆರೋಪಿ ಚಿತ್ರದುರ್ಗದ ರಾಮಕೃಷ್ಣನ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಖೋಟಾ ನೋಟು ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಯಲಹಂಕ ಪೊಲೀಸರ ವಿಶೇಷ ತಂಡ ಸೋಮವಾರ ಮಧ್ಯಾಹ್ನ 2ರ ವೇಳೆ ಕಾರ್ಯಾಚರಣೆ ನಡೆಸಿ ಕೋಗಿಲು ಕ್ರಾಸ್ನಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಖೋಟಾ ನೋಟು ಪತ್ತೆಯಾಗಿವೆ.
ಚಿತ್ರದುರ್ಗದ ರಾಮಕೃಷ್ಣ ಎಂಬಾತ ನಕಲಿ ನೋಟು ಕೊಟ್ಟು ತಾನು ಹೇಳಿದ ವ್ಯಕ್ತಿಗಳಿಗೆ ತಲುಪಿಸಿದರೆ ಕಮಿಷನ್ ಕೊಡುವುದಾಗಿ ಹೇಳಿದ್ದ. ಹಣದ ಆಸೆಗಾಗಿ ಈ ಕೆಲಸ ಒಪ್ಪಿಕೊಂಡಿದ್ದಾಗಿ ಬಂಧಿತರು ಹೇಳಿದ್ದಾರೆ. ಅಲ್ಲದೆ ನಕಲಿ ನೋಟುಗಳನ್ನು ತಾವೇ ಮುದ್ರಣ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ನೋಟುಗಳು ಮುದ್ರಣ ಮಾಡಲು ಬಳಸುತ್ತಿದ್ದ ವಸ್ತುಗಳು ಯಂತ್ರಗಳನ್ನು ಪತ್ತೆಹಚ್ಚಲಾಗುತ್ತಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








