ನವದೆಹಲಿ
ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದೇ ಆದಲ್ಲಿ ಅದು ಭಯೋತ್ಪಾದನೆ ವಿಚಾರವಾಗಿ ಆಗುತ್ತದೆ, ಅಥವಾ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ವಿಚಾರವಾಗಿ ಆಗುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂದೂರ ಶುರುವಾದ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಪಾಕಿಸ್ತಾನ ಹಾಗೂ ಅದರ ಉಗ್ರ ಕೃತ್ಯಗಳನ್ನು ಕಟುವಾಗಿ ಖಂಡಿಸಿದರು. ಮಾತುಕತೆಗೆ ಕೂರುವಂತೆ ಭಾರತವನ್ನು ಒತ್ತಾಯಿಸುತ್ತಿರುವ ಪಾಕಿಸ್ತಾನಕ್ಕೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಇರಲು ಸಾಧ್ಯ ಇಲ್ಲ. ವ್ಯಾಪಾರ ಮತ್ತು ಭಯೋತ್ಪಾದನೆ ಒಟ್ಟಿಗೆ ಆಗಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯ ಇಲ್ಲ ಎಂದು ನರೇಂದ್ರ ಮೋದಿ ಹೇಳಿದರು. ಈ ಮೂಲಕ, ಪಾಕಿಸ್ತಾನ ಭಾರತದ ಜೊತೆ ಮಾತುಕತೆಗೆ ಬರುವ ಆಸಕ್ತಿ ಇದ್ದರೆ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಲಿ ಎನ್ನುವ ಖಡಕ್ ಸಂದೇಶವನ್ನು ಪ್ರಧಾನಿಗಳು ರವಾನಿಸಿದರು.
ಹಾಗೆಯೇ, ನೀರು ಮತ್ತು ರಕ್ತ ಒಟ್ಟಿಗೆ ಹರಿಯೋದಿಲ್ಲ ಎಂದು ಹೇಳುವ ಮೂಲಕ ಅವರು ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಡುವ ನಿರ್ಧಾರ ಸದ್ಯಕಂತೂ ಇಲ್ಲ ಎನ್ನುವ ಸಂದೇಶ ನೀಡಿದರು. ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನದೊಂದಿಗೆ ಮಾಡಿಕೊಳ್ಳಲಾದ ಸಿಂಧೂ ಜಲ ಒಪ್ಪಂದದಿಂದ ಭಾರತ ಹಿಂದಕ್ಕೆ ಸರಿಯಿತು. ತನ್ನ ಅಣೆಕಟ್ಟೆಯಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಿದೆ. ಈ ಸಿಂಧೂ ನದಿಯು ಪಾಕಿಸ್ತಾನದ ಶೇ. 40ರಷ್ಟು ಕೃಷಿಗೆ ಆಧಾರವಾಗಿದೆ. ಭಾರತದ ಈ ನಿರ್ಧಾರವು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಸೇನೆ ನಡೆಸಿದ ಆಪರೇಷನ್ ಸಿಂದೂ ಯಶಸ್ವಿಯಾಯಿತು ಎಂದು ಹೇಳಿದರು. ಸೇನೆಯ ಈ ಪರಾಕ್ರಮವನ್ನು ಎಲ್ಲಾ ದೇಶವಾಸಿಗಳು ಹಾಗೂ ಹೆಣ್ಮಕ್ಕಳಿಗೆ ಅರ್ಪಿಸುತ್ತೇವೆ ಎಂದರು.
