ಬೆಂಗಳೂರು:

ಸಿಂದಗಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು, ಹಾನಗಲ್ ಸೋಲಿನ ಗಾಯಕ್ಕೆ ಇದು ಮುಲಾಮು ಹಚ್ಚಿದಂತಾಗಿದೆ. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಪರಾಭವಗೊಂಡಿದೆ.
ಮತದಾನಕ್ಕೆ ಮೊದಲೇ ಹಾನಗಲ್ನಲ್ಲಿ ಗುಪ್ತದಳದ ವರದಿಯಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆ ನಿಶ್ಚಿತ ಎಂಬುದಾಗಿತ್ತು. ಅದರಂತೆ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 7598 ಮತಗಳ ಗೆಲುವು ದಾಖಲಿಸುವ ಮೂಲಕ ಹಾವೇರಿ ಜಿಲ್ಲೆಯಲ್ಲ್ಲಿ ಶೂನ್ಯವಾಗಿದ್ದ ಕೈ ಅಸ್ತಿತ್ವಕ್ಕೆ ಮುನ್ನುಡಿ ಬರೆದಿದ್ದಾರೆ.
ಅಂತಿಮ 19 ನೇ ಸುತ್ತಿನ ಅಂತ್ಯಕ್ಕೆ ಮಾನೆ 87,113 ಮತ ಪಡೆದರೆ, ಪರಾಭವಗೊಂಡ ಬಿಜೆಪಿಯ ಶಿವರಾಜ ಸಜ್ಜನರ 79,545 ಮತಗಳನ್ನು ಪಡೆದರು. ಜೆಡಿಎಸ್ನ ನಿಯಾಜ ಶೇಖ್ ನಾಲ್ಕಂಕಿಯನ್ನೂ ತಲುಪಲಿಲ್ಲ. ಗುಪ್ತಚರ ಇಲಾಖೆಯ ವರದಿಯಂತೆ ಮತದಾನದ ಮುನ್ನಾ ದಿನ ಸ್ವತಃ ಸಿಎಂ ತಂತ್ರಗಾರಿಕೆ ಬದಲಿಸಿ ವಶಕ್ಕೆ ತೆಗೆದುಕೊಳ್ಳುವ ಅನೇಕ ಕಸರತ್ತು ನಡೆಸಿದರಾದರೂ ಬಿಜೆಪಿಗೆ ಗೆಲುವು ದಕ್ಕಲಿಲ್ಲ.
ದಿವಂಗತ ಸಿ.ಎಂ.ಉದಾಸಿಯವರ ಎದುರು 2018ರ ಚುನಾವಣೆಯಲ್ಲಿ ಸುಮಾರು 6 ಸಾವಿರ ಮತಗಳಿಂದ ಪರಾಭವಗೊಂಡಿದ್ದ ಮಾನೆ ಅಲ್ಲಿಯೇ ಮನೆ ಮಾಡಿದ್ದಲ್ಲದೇ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು, ಇದು ಅವರ ಗೆಲುವಿಗೆ ರಹಾದಾರಿಯಾಯಿತಲ್ಲದೇ ಪ್ರಚಾರದ ಅಂತಿಮ ದಿನ ಹಾನಗಲ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶ್ರೀನಿವಾಸ ಮಾನೆ ಮಾಡಿದ ಭಾವನಾತ್ಮಕ ಭಾಷಣ ಜಯವನ್ನು ಮತ್ತಷ್ಟು ಸುಲಭವಾಗಿಸಿತು. ಕಾಂಗ್ರೆಸ್ನ ಘಟಾನುಘಟಿ ನಾಯಕರು ಸಹ ಪ್ರಚಾರ ಮಾಡಿದ್ದರು. ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ವ್ಯಾಪಕವಾಗಿ ಶ್ರಮಿಸಿದ್ದರು.
ಸಿಂದಗಿ ವಿವರ : ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,185 ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಜಯಸಾಧಿಸಿದ್ದಾರೆ.
ಭೂಸನೂರಗೆ 93,865 ಮತ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಮನಗೂಳಿಗೆ 62,680 ಮತ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,353 ಮತ ದೊರೆತಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಳ್ಳುವ ಮೂಲಕ ಪಕ್ಷಕ್ಕೆ ಮುಜುಗರವುಂಟು ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
