ಅನುಭವದಲ್ಲಿರುವ ಸುಳ್ಳು ಅರ್ಜಿಗಳಿಗೆ ಕಡಿವಾಣ ಹಾಕಿ

ಗುಬ್ಬಿ : 

     ದಲಿತರ ಸ್ಮಶಾನಕ್ಕೆ ಸರ್ಕಾರದಿಂದ ಜಮೀನು ಮಂಜೂರಾಗುವ ವಿಚಾರ ತಿಳಿದ ತಕ್ಷಣ ಅತಿಕ್ರಮಣ ಮಾಡಿ ಕೃಷಿ ನಡೆಸಿ ಅನುಭವದಲ್ಲಿರುವುದಾಗಿ ಅರ್ಜಿ ಹಾಕುವ ಪ್ರಕ್ರಿಯೆಗೆ ಮೊದಲು ಕಡಿವಾಣ ಹಾಕುವಂತೆ ದಲಿತ ಮಖಂಡರು ಒಕ್ಕೊರಲಿನಿಂದ ಮನವಿ ಮಾಡಿದ ಘಟನೆ ದಲಿತರ ಕುಂದುಕೊರತೆ ಸಭೆಯಲ್ಲಿ ನಡೆಯಿತು. 

     ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ತಹಸೀಲ್ದಾರ್ ಬಿ.ಆರತಿ ಅವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತರಿಗೆ ಸ್ಮಶಾನ ಮಂಜೂರು ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಯುವ ಸಂದರ್ಭದಲ್ಲಿ ಸಲ್ಲದ ನೆಪವೊಡ್ಡಿ ಸ್ಮಶಾನಕ್ಕೆ ಸ್ಥಳವಿಲ್ಲದಂತೆ ಮಾಡಲು ಕೆಲವರು ಕಾದು ಕುಳಿತಿದ್ದಾರೆ. ಇಂತಹ ಅಡೆತಡೆಗಳಿಗೆ ಬೆಲೆ ನೀಡದೆ ದಲಿತರ ಸ್ಮಶಾನಕ್ಕೆ ಕಾನೂನು ರೀತಿ ಜಮೀನು ನೀಡುವಂತೆ ದಲಿತ ಮುಖಂಡರು  ಮನವಿ ಮಾಡಿದರು.

    ಸ್ಥಳ ಪರಿಶೀಲನೆಗೆ ಹೋದ ಅಧಿಕಾರಿಗಳಿಗೆ ಬೆದರಿಕೆ :

     ಎಸ್.ಕೊಡಗಿಹಳ್ಳಿ, ಎಂ.ಎಸ್.ಪಾಳ್ಯ ಬಳಿ ಸ್ಮಶಾನಕ್ಕೆ ಜಮೀನು ಅಳತೆ ಮಾಡಲು ಅವಕಾಶ ಮಾಡಿಕೊಡದ ಬಗ್ಗೆ ಚರ್ಚೆ ಮಾಡಿದ ಮುಖಂಡರು ಅಂದು ಸ್ಮಶಾನದ ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ಪಟ್ಟಭದ್ರರು ಬೆದರಿಸಿ ಓಡಿಸಿದ್ದರು ಎಂದು ಆರೋಪ ಮಾಡಿದರು. ಜಿ.ಹೊಸಹಳ್ಳಿ ಸ್ಮಶಾನ ಜಾಗದಲ್ಲಿ ಈಚೆಗೆ ಅಕ್ರಮವಾಗಿ ತೆಂಗು, ಅಡಿಕೆ ಸಸಿ ನೆಟ್ಟು ಅತಿಕ್ರಮಿಸಿರುವ ಬಗ್ಗೆ ದೂರಿದರು. ನಂತರ ಸರ್ಕಾರಿ ಕಚೇರಿಗಳಲ್ಲಿ ದಲಿತರ ಅಹವಾಲು ಕೇಳುತ್ತಿಲ್ಲ. ಕನಿಷ್ಠ ಗೌರವ ಕೂಡ ಸಿಗುತ್ತಿಲ್ಲ. ಈ ಪೈಕಿ ಪೊಲೀಸ್ ಠಾಣೆಗಳಲ್ಲಿ ದಲಿತ ಮುಖಂಡರನ್ನು ಅಗೌರವವಾಗಿ ಕಾಣಲಾಗುತ್ತಿದೆ ಎಂದು ಚೇಳೂರು ಶಿವನಂಜಪ್ಪ ಆರೋಪಿಸಿದರು.

ದಲಿತರ ಅರ್ಜಿಗಳಿಗೆ ಬೆಲೆಯಿಲ್ಲ :

     ಮಾರಶೆಟ್ಟಿಹಳ್ಳಿ ಪಿಡಿಓ ಅವರು ದಲಿತರ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆ. ಮಂಜೂರಾಗಿರುವ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದರೆ ತೆರವು ಮಾಡಿಸಿದ ಈ ಅಧಿಕಾರಿ ದಲಿತರನ್ನು ಅಗೌರವದಲ್ಲಿ ನೋಡಿದ್ದಾರೆ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸ್ವಚ್ಛತೆ ಮತ್ತು ದುರಸ್ಥಿಗೆ ಪಪಂ ಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆರೋಪಕ್ಕೆ ಉತ್ತರ ನೀಡಿದ ಮುಖ್ಯಾಧಿಕಾರಿ ಯೋಗೀಶ್ ಒಂದು ತಿಂಗಳಲ್ಲಿ ಭವನ ಅಚ್ಚಕಟ್ಟು ಮಾಡುವ ಭರವಸೆ ನೀಡಿದರು. ಆರ್‍ಆರ್‍ಟಿ ವಿಭಾಗದಲ್ಲಿ ಸಿಬ್ಬಂದಿಗಳು ದಲಿತರ ಅರ್ಜಿಗಳಿಗೆ ಬೆಲೆ ನೀಡುವುದಿಲ್ಲ. ಕೇವಲವಾಗಿ ನಡೆಸಿಕೊಳ್ಳುವ ಸಿಬ್ಬಂದಿಗಳ ವಿರುದ್ಧ ಕ್ರಮವಹಿಸಲು ಒತ್ತಾಯಿಸಿದರು. ಎಚ್‍ಎಎಲ್ ಘಟಕ ಕೆಲಸ ಆರಂಭವಾದ ಸಂದರ್ಭದಲ್ಲಿ 120 ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಅವರ ಅನುಭವದಲ್ಲಿದ್ದ ಜಮೀನು ಪಡೆದು ಪರ್ಯಾಯ ಜಮೀನು ನೀಡುವಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಕಳೆದ 6 ವರ್ಷಗಳಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವಂತೆ ಮುಖಂಡ ಫಣೀಂದ್ರ ಅವರು ಆಗ್ರಹಿಸಿದರು.

     ಎಲ್ಲಾ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಬಿ.ಆರತಿ ಅವರು ಮುಂದಿನ ಸಭೆಯಲ್ಲಿ ಸೂಕ್ತ ಉತ್ತರ ಒದಗಿಸುವ ಭರವಸೆ ನೀಡಿದರು.
ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಜಯಸಿಂಹ, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಎಎಸ್‍ಐ ಶಿವಣ್ಣ ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.

     ಕಾಲ್ಪನಿಕ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷದಿಂದ ಅನುಭವಕ್ಕಿರುವ ರೈತರಿಗೆ ತೊಂದರೆ ನೀಡದಂತೆ ನ್ಯಾಯಾಲಯ ತಿಳಿಸಿದೆ. ಈ ಕುರಿತು ರೈತರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಗೆ ಸಚಿವರು ಸೂಚಿಸಿದ್ದಾರೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿ, ಅನುಭವದಲ್ಲಿರುವ ರೈತರಿಗೆ ತೊಂದರೆ ನೀಡುತ್ತಿದ್ದಾರೆ.

– ಮಾರನಹಳ್ಳಿ ಶಿವಯ್ಯ, ದಲಿತ ಮುಖಂಡ

ಅರ್ಧ ಟೀ ಕುಡಿದು ಹೋಗುವ ದುಸ್ಥಿತಿ :

     ಪ್ರತಿ ಸಭೆಯಲ್ಲೂ ಅರ್ಧ ಟೀ ಕುಡಿದು ಬಿಸ್ಕತ್ ತಿಂದು ಹೋಗುವ ದುಸ್ಥಿತಿ ಬಂದಿದೆ. ಸಭೆಯಲ್ಲಿ ಚರ್ಚಿಸುವ ವಿಚಾರಕ್ಕೆ ಯಾವುದೇ ಉತ್ತರ ಸಿಗುತ್ತಿಲ್ಲ. ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡುವ ಅಧಿಕಾರಿಗಳು ಮುಂದೆ ವರ್ಗಾವಣೆ ಆಗುತ್ತಾರೆ. ಬರೀ ಭರವಸೆಯೊಂದಿಗೆ ಮುಂದಿನ ಸಭೆಗೆ ಮರಳಿ ಅದೇ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಆರೋಪಿಸಿದ ಮಾರನಹಳ್ಳಿ ಶಿವಯ್ಯ ಅವರು ಮುಂದಿನ ಸಭೆಯಲ್ಲಿ ದಲಿತರ ಸಮಸ್ಯೆಗಳಿಗೆ ಸೂಕ್ತ ಉತ್ತರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link