ತುಮಕೂರು
ಗೃಹ ಸಚಿವರ ತವರು ಜಿಲ್ಲೆಯಲ್ಲಿ ಅನ್ಯಕೋಮಿನ ಯುವಕರು ಗೂಂಡಾ ವರ್ತನೆ ತೋರಿದ್ದಾರೆ. ಹುಳಿಯಾರು ಸರ್ಕಾರಿ ಶಾಲೆಯ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಿದ್ದಾರೆ. ಕಲ್ಲು ತೂರಿದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ ಪುಂಡರ ಗುಂಪು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಳಿಯರು ನಿವಾಸಿ ಮಹಬೂಬ್ ಷರಿಫ್, ಶಂಶುದ್ದೀನ್, ಇರ್ಫಾನ್, ಮುಬಾರಕ್, ಮುದಾಸೀರ್, ಯಾಸೀನ್, ತಾಝೀಮ್ ಕಲ್ಲು ತೂರಿ, ಹಲ್ಲೆ ಮಾಡಿದ ಆರೋಪಿಗಳು.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆಪಿಎಸ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಶುಕ್ರವಾರ (ಮಾ.14)ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಪುಂಡರು ಕಲ್ಲು ಎಸೆಯುತ್ತಿದ್ದನ್ನು ಯಶ್ವಂತ್ ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಶಾಲೆಯ ಆವರಣದೊಳಗೆ ನುಗ್ಗಿದ ಅನ್ಯಕೋಮಿನಿ 6-7ಜನ ಪುಂಡರು ಯಶ್ವಂತ್ನನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಚಾರ ತಿಳಿದು ಕೂಡಲೆ ಶಾಲೆಯ ಮುಖ್ಯಾಪಾದ್ಯಯರು ಸ್ಥಳಕ್ಕೆ ದೌಡಾಯಿ, ಹಲ್ಲೆ ಮಾಡುವುದನ್ನು ತಡೆದು, ಯಶ್ವಂತ್ನನ್ನು ರಕ್ಷಿಸಿದ್ದಾರೆ. ಬಳಿಕ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬರುವುದನ್ನು ಕಂಡ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್ರ ಬೆನ್ನು ಹಾಗೂ ತಲೆಗೆ ತೀವ್ರಪೆಟ್ಟಾಗಿದೆ. ಗಾಯಾಳು ವಿದ್ಯಾರ್ಥಿ ಯಶ್ವಂತ್ರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲಾ ಆಡಳಿತ ಮಂಡಳಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮಹಬೂಬ್ ಷರೀಫ್ ಹಾಗೂ ಆತನ ಸಹಚರ ಒಟ್ಟು 7 ಜನರ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಾದ ಬೆನ್ನಲ್ಲೆ ಐವರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಬಾಕಿ ಇಬ್ಬರ ಬಂಧನಕ್ಕೆ ಹುಳಿಯಾರು ಪೊಲೀಸರು ಬಲೆ ಬೀಸಿದ್ದಾರೆ.
