ಹುಳಿಯಾರು :
ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಲ್ಲದೆ ಹುಳಿಯಾರು ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಎಸ್ಆರ್ಟಿಸಿ ಬಸ್ ಬದಲಿಗೆ ಖಾಸಗಿ ಬಸ್ ಬಂದಿದ್ದರೂ ಹತ್ತೋ ಜನರಿರಲಿಲ್ಲ.
ಹುಳಿಯಾರು ಬಸ್ ನಿಲ್ದಾಣದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು, ಮೈಸೂರು, ಹೊಸದುರ್ಗಕ್ಕೆ ತೆರಳುವ ಪ್ರಯಾಣಿಕರಿಂದ ತುಂಬಿ ಹೋಗಿರುತ್ತದೆ. 9 ಗಂಟೆಯ ನಂತರ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಓಡಾಟದಿಂದಾಗಿ ಗಿಜಿ ಗುಡುತ್ತಿರುತ್ತದೆ. ಆದರೆ ಶಾಲಾಕಾಲೇಜಿಗೆ ರಜೆಯಿಂದಾಗಿ ಹಾಗೂ ಮುಷ್ಕರದ ವಿಷಯ ಮೊದಲೇ ತಿಳಿದಿದ್ದರಿಂದ ಪ್ರಯಾಣಿಕರು ಪಟ್ಟಣಕ್ಕೆ ಬಾರದಿದೆ ಜನರ ಓಡಾಡ ವಿರಳವಾಗಿತ್ತು.
ಕೆಎಸ್ಆರ್ಟಿಸಿ ಬಸ್ ಇಲ್ಲದೆ ತೊಂದರೆಯಾಗಬಾರದೆಂದು ಬೆಂಗಳೂರು ಮತ್ತು ಹೊಸದುರ್ಗಕ್ಕೆ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದರೂ ಹತ್ತೋ ಜನರಿರಲಿಲ್ಲ. ಎಂದಿನಂತೆ ತಿಪಟೂರು, ಪಂಚನಹಳ್ಳಿ, ಶಿರಾ, ಹಿರಿಯೂರು ಮಾರ್ಗವಾಗಿ ಖಾಸಗಿ ಬಸ್ ಇದ್ದರೂ ಎಂದಿನ ಕಲೆಕ್ಷನ್ ಇರಲಿಲ್ಲ. ಇನ್ನು ಮೈಸೂರು, ಬಳ್ಳಾರಿ, ಚಿತ್ರದುರ್ಗ, ಅರಸೀಕೆರೆಗೆ ಹೋಗುವವರು ಗಂಟೆಗಟ್ಟಲೆ ಕಾಯ್ದು ಬಸ್ ಬಾರದೆ ಮನೆಗಳಿಗೆ ಹಿಂದಿರುಗಿದರು.
ಕೆಎಸ್ಆರ್ಟಿಸಿ ಬಸ್ ಸಂಚಾರವಿಲ್ಲದೆ, ಖಾಸಗಿ ಬಸ್ ಓಡಾಟ ವಿರಳವಾಗಿ ಪಟ್ಟಣಕ್ಕೆ ಜನರು ಬಾರದೆ ಹುಳಿಯಾರು ಪಟ್ಟಣ ಬಂದ್ ರೀತಿ ನಿರ್ಜನವಾಗಿತ್ತು. ವ್ಯಾಪಾರ ವಹಿವಾಟಿಗೆ ಗ್ರಹಣ ಬಡಿದಿತ್ತು. ಬ್ಯಾಂಕ್, ಅಂಚೆಕಛೇರಿ, ಎಪಿಎಂಸಿ ಹಾಗೂ ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರ ಓಡಾಟ ಅಷ್ಟಾಗಿ ಕಂಡುಬರಲಿಲ್ಲ. ಒಟ್ಟಾರೆ ಸಾರಿಗೆ ನೌಕರರ ಮುಷ್ಕರದ ಬಿಸಿ ಹುಳಿಯಾರಿಗೂ ತಟ್ಟಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ