ಕೊಡಿಗೇನಹಳ್ಳಿ :
ದೊಡ್ಡಮಾಲೂರು ಕೆರೆ ಏರಿ ಮೇಲೆ ವಾಹನ ಸವಾರರು ಮತ್ತು ಸ್ಥಳೀಯರಿಗೆ ಬೆಳಕಾಗಬೇಕಿದ್ದ ವಿದ್ಯುತ್ ದೀಪಗಳು ಹಲವು ವರ್ಷಗಳಿಂದ ಕೆಟ್ಟು ನಿಂತಿವೆ. ಅನೇಕ ಬಾರಿ ಪಿಡಿಓ, ಗ್ರಾಪಂನ ಸದಸ್ಯರ ಗಮನಕ್ಕೆ ಸಮಸ್ಯೆಯನ್ನು ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು ಮತ್ತು ಸಾರ್ವಜನಿಕರು.
ಈ ಹಿಂದೆ ದೊಡ್ಡಮಾಲೂರು ಕೆರೆ ಏರಿ ರಸ್ತೆಯಲ್ಲಿ ಹೆಚ್ಚು ಅಪಘಾತಗಳಾಗುತ್ತಿದ್ದವು. ರಸ್ತೆ ಸರಿಪಡಿಸುವಂತೆ ಚುನಾವಣೆಯ ಸಂದರ್ಭದಲ್ಲಿ ಕೆ.ಎನ್.ರಾಜಣ್ಣರವರಿಗೆ ಒತ್ತಾಯಿಸಲಾಗಿತ್ತು. 2013ರಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ 5 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಿಸಿ ದೊಡ್ಡಮಾಲೂರಿನಿಂದ ವೆಂಕಟಾಪುರಕ್ಕೆ 25 ಬೀದಿ ದೀಪ ಅಳವಡಿಸಿದ್ದರು.
ಆದರೆ ಈಗ ಕೆಟ್ಟು ನಿಂತಿರುವ ವಿದ್ಯುತ್ ದೀಪಗಳನ್ನು ಹಲವು ವರ್ಷಗಳಿಂದ ಸರಿಪಡಿಸಿಲ್ಲ. ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಸರಿಪಡಿಸುವರೆಂದು ಪ್ರಯಾಣಿಕರು ಮತ್ತು ಸಾರ್ವಜನಿಕರು ನಂಬಿದ್ದರು. ಆದರೆ ಆಯ್ಕೆಯಾಗಿ 10 ತಿಂಗಳು ಆದರೂ ಈ ದೀಪಗಳ ಕಡೆ ತಿರುಗಿಯೂ ಸಹ ನೋಡಲಿಲ್ಲ. ಕೆರೆ ಏರಿ ಮೇಲಿನ ರಸ್ತೆಯಲ್ಲಿ ರಾತ್ರಿ ಪ್ರಯಾಣ ಮಾಡುವುದು ಅಪಘಾತಕ್ಕೆ ಎಡೆ ಮಾಡಿಕೊಡುವುದಲ್ಲದೆ, ಕಳ್ಳಕಾಕರ ಭೀತಿಗೂ ಕಾರಣವಾಗಿದೆ ಎಂದು ಪ್ರಯಾಣಿಕ ಹೊಸಹಳ್ಳಿ ರಮೇಶ್ ದೂರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
