ಮಂಗಳ ಜಲಾಶಯಕ್ಕೆ ನೀರು ಹರಿಸದಿದ್ದರೆ ಪ್ರತಿಭಟನೆ

 ಕುಣಿಗಲ್ :

      ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮೂಲಕ ನೀರು ಹರಿಸದಿದ್ದರೆ ಹೇಮಾವತಿ ನಾಲಾ ಕಚೇರಿಯ ಮುಂದೆ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ತಿಳಿಸಿದ್ದಾರೆ. ಶಾಸಕರು ತಾಲ್ಲೂಕಿನಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಕೇವಲ ಗಿಮಿಕ್ ರಾಜಕೀಯ ಮಾಡುತ್ತಾ ಜನರಿಗೆ ನೀರಾವರಿ ವಿಷಯದಲ್ಲಿ ಸುಳ್ಳು ಭರವಸೆ ನೀಡುತ್ತಾ ರೈತರನ್ನು ನಾಶಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಜಲಾಶಯದ ನೀರು ತಮಿಳುನಾಡಿಗೆ :

      ತಾಲ್ಲೂಕಿನ ಮಂಗಳ ಜಲಾಶಯದ ಬಳಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಕೋನಹಳ್ಳಿ ಜಲಾಶಯವು ಕೋಡಿ ಬಿದ್ದಾಗ 11 ಟಿಎಂಸಿ ಹೆಚ್ಚುವರಿ ನೀರು ಶಿಂಷಾ ನದಿಯ ಮೂಲಕ ತಮಿಳುನಾಡು ಸೇರುತ್ತಿದೆ. ಸುಮಾರು 10 ವರ್ಷದಿಂದ ಈ ರೀತಿಯೇ ಆಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕೈಗೊಳ್ಳದೆ ನೀರಾವರಿ ಕ್ಷೇತ್ರಕ್ಕೆ ಬಿಡುಗಡೆಗೊಂಡ 30 ಕೋಟಿ ರೂ.ಹಣವನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಪಂಗಳ ರಸ್ತೆ ಅಭಿವೃದ್ಧಿಗೆ ಕಾನೂನು ಬಾಹಿರವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಲಿಂಕ್ ಕೆನಾಲ್ ಮಾಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು :

      ನೀರಾವರಿ ಯೋಜನೆಯ ಹಣದಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡಲು 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದರೆ ಈ ಭಾಗದ ಸಾವಿರಾರು ರೈತರು, ನೀರಾವರಿ ಅಚ್ಚುಕಟ್ಟುದಾರರು ಬದುಕುತ್ತಿದ್ದರು ಎಂದು ತಿಳಿಸುತ್ತಾ ಮಾರ್ಕೋನಹಳ್ಳಿ ಜಲಾಶಯಕ್ಕೆ ಒಂದು ಟಿಎಂಸಿ ನೀರು ಅಲೋಕೇಶನ್ ಮಾಡಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ನೀರು ಸೀಪೇಜ್ ವಾಟರ್ ಆಗಿರುತ್ತದೆ ಅಲೋಕೇಶನ್ ಮಾಡಿರುವ 1 ಟಿಎಂಸಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಿಡುವುದರ ಹಿಂದೆ ಶಾಸಕರು ನಾಗಮಂಗಲ ಕೈಗಾರಿಕಾ ಪ್ರದೇಶದ ಅನುಕೂಲ ಕಲ್ಪಿಸಲು ಹುನ್ನಾರ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮಾರ್ಕೋನಹಳ್ಳಿ ಜಲಾಶಯದ ರೈತರ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಇಲ್ಲದಂತಾಗುತ್ತದೆ ಈಗಾಗಲೇ ಕುಣಿಗಲ್ ದೊಡ್ಡಕೆರೆಯ ನೀರನ್ನು ಕುಡಿಯುವ ನೀರಿನ ಯೋಜನೆಗಾಗಿ ಬಳಸಿಕೊಳ್ಳುತ್ತಿರುವುದರಿಂದ ಆ ಭಾಗದ ರೈತರ ಕಬ್ಬು, ತೆಂಗು, ಅಡಕೆ, ಬಾಳೆ, ಹಿಪ್ಪು ನೇರಳೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ ಎಂದು ತಿಳಿಸಿದರು.

      ನಾವು ಯಾವುದೇ ಪಕ್ಷದ ವಿರೋಧಿಗಳಲ್ಲ, ರೈತರ ಪರವಾಗಿ ಅಭಿವೃದ್ಧಿ ಕೆಲಸ ಮಾಡಲು ಅವರೊಂದಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ. ಹುತ್ರಿದುರ್ಗ ಹೋಬಳಿಯ ಶ್ರೀರಂಗ ಏತ ನೀರಾವರಿ ಯೋಜನೆ ಎಲ್ಲಿಗೆ ಬಂದು ನಿಂತಿದೆ, ಈ ಯೋಜನೆಗಳು ಕೇವಲ ಜನರನ್ನು ದಾರಿ ತಪ್ಪಿಸಿ ಮುಂದಿನ 4 ಚುನಾವಣೆಗೆ ಆಗುವಷ್ಟು ಹಣ ದೋಚುವ ಉದ್ದೇಶವಶಗಿದೆ ಎಂದು ಆರೋಪಿಸಿದರು.

ಹೇಮಾವತಿ ನಾಲಾ ಕಚೇರಿಗೆ ಬೀಗ ; ಎಚ್ಚರಿಕೆ : 

      ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅನಿಲ್‍ಕುಮಾರ್ ಮಾತನಾಡಿ ಶಾಸಕ ಡಾ.ರಂಗನಾಥ್ ಅವರು ಆಧುನಿಕ ನೀರಾವರಿ ಭಗೀರಥ ಎಂದು ಕಾಂಗ್ರೆಸ್ ಕಾರ್ಯಕರ್ತರು ಮೆರೆಸುತ್ತಿದ್ದಾರೆ. ಶಾಸಕರು ಯಾವುದಾದರೂ ಒಂದೇ ಒಂದು ಶಾಶ್ವತ ನೀರಾವರಿಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರಾ? ಎಂದು ಪ್ರಶ್ನಿಸಿದ ಅವರು ತಾಲ್ಲೂಕಿನ ಅಭಿವೃದ್ಧಿ ಕೈಗೊಳ್ಳದೆ ನಾಗಮಂಗಲ ತಾಲ್ಲೂಕಿನ ಪರವಾಗಿ ಕೆಲಸ ಆರಂಭಿಸಿದ್ದಾರೆ. ಜನ-ಜಾನುವಾರುಗಳಿಗೆ, ರೈತರ ಜಮೀನುಗಳಿಗೆ ನೀರು ಒದಗಿಸುವ ಕೆಲಸ ಮಾಡದೆ ನಾಗಮಂಗಲಕ್ಕೆ ಕುಡಿಯುವ ನೀರು, ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸಲು ಗುದ್ದಲಿ ಪೂಜೆ ಮಾಡಿ ತಾಲ್ಲೂಕಿನ ರೈತರನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದು ದೂರಿದರು. ಮುಂದಿನ ದಿನಗಳಲ್ಲಿ ಮಂಗಳ ಜಲಾಶಯಕ್ಕೆ ನೀರು ಹರಿಸದಿದ್ದರೆ ಮುಂದಿನ ತಿಂಗಳು ಸೆ.13 ರಂದು ಹೇಮಾವತಿ ನಾಲಾ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಗೌಡ, ಗಂಗರಾಜು, ನಾರಾಯಣಪ್ಪ, ಕುಮಾರಗೌಡ, ಪ್ರಕಾಶ್ ಹಾಗೂ ರೈತ ಮುಖಂಡರು, ತಿಗಳರಪಾಳ್ಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link